ಆ್ಯಪ್ನಗರ

ದೇವಸ್ಥಾನಕ್ಕೂ ಬಂತು ವಸ್ತ್ರ ಸಂಹಿತೆ, ಗುರುತಿನ ಚೀಟಿ

*ದೇವಾಲಯದ ಸಿಬ್ಬಂದಿ, ಪ್ರಸಾದ ತಯಾರಕರಿಗೂ ಸಮವಸ್ತ್ರ *ಗುರುತಿನ ಚೀಟಿ ಧರಿಸುವುದು ಕಡ್ಡಾಯ *ಪಾಕಶಾಲೆಗೆ ಮೇಲುಸ್ತುವಾರಿ ನೇಮಕ *ಹೊರಗಿನ ಪ್ರಸಾದ ವಿತರಣೆ ನಿಷೇಧ *ನಿಯಮ ...

Vijaya Karnataka 30 Jan 2019, 5:00 am
*ದೇವಾಲಯದ ಸಿಬ್ಬಂದಿ, ಪ್ರಸಾದ ತಯಾರಕರಿಗೂ ಸಮವಸ್ತ್ರ
Vijaya Karnataka Web 2901-2-2-KSG_030 (3)


*ಗುರುತಿನ ಚೀಟಿ ಧರಿಸುವುದು ಕಡ್ಡಾಯ

*ಪಾಕಶಾಲೆಗೆ ಮೇಲುಸ್ತುವಾರಿ ನೇಮಕ

*ಹೊರಗಿನ ಪ್ರಸಾದ ವಿತರಣೆ ನಿಷೇಧ

*ನಿಯಮ ಪಾಲನೆ ಕುರಿತು ಮಾಹಿತಿ ಸಂಗ್ರಹ


ಕೆ.ಎಂ.ಪಂಕಜ ಬೆಂಗಳೂರು

ದೇವಸ್ಥಾನಗಳಲ್ಲಿ ಪ್ರಸಾದ ದುರಂತ ಘಟನೆಗಳಿಂದ ಎಚ್ಚೆತ್ತ ಸರಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದೆ. ಪ್ರಸಾದ ತಯಾರಕರಿಂದ ಹಿಡಿದು ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸರಕಾರ ನಿಗದಿಪಡಿಸಿದ ಮಾರ್ಗ ಸೂಚಿಯನ್ವಯ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಗುರುತಿನ ಕಾರ್ಡ್‌ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಇಲಾಖೆ ಸೂಚಿಸಿದೆ.

ಇಡೀ ರಾಜ್ಯಕ್ಕೆ ಅನ್ವಯ ವಾಗುವಂತೆ ಸಿಬ್ಬಂದಿ ಧರಿಸಿರುವ ವಸ್ತ್ರದ ಮೇಲೆ ನೀಲಿ ಅಥವಾ ಹಸಿರು ಬಣ್ಣದ ಕೋಟ್‌, ರಕ್ಷಣಾ ಸಿಬ್ಬಂದಿಗಳಿಗೆ ಖಾಕಿ ಸಮವಸ್ತ್ರ, ಅಡುಗೆ ತಯಾರಕರು ಕೇಸರಿ ಅಥವಾ ಬಿಳಿ ವಸ್ತ್ರ ಮತ್ತು ಟವೆಲ್‌ ಧರಿಸಬೇಕು. ಸಮವಸ್ತ್ರ ಧರಿಸದವರಿಗೆ ದಿನಕ್ಕೆ 50 ರೂ. ನಂತೆ ದಂಡ ವಿಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಅಧಿಕಾರಿಗಳು ದೇವಾಲಯದ ವತಿಯಿಂದಲೇ ಪ್ರತಿ ಸಿಬ್ಬಂದಿಗೂ 2 ಜೊತೆ ಸಮವಸ್ತ್ರ ವಿತರಿಸಬೇಕು. ಕೋಟಿನ ಹಿಂಭಾಗದಲ್ಲಿ ಅರ್ಧ ವೃತ್ತಾಕಾರದಲ್ಲಿ ದೇವಾಲಯದ ಹೆಸರು ಹಾಗೂ ನೌಕರರ ಹೆಸರು ನಮೂದಿಸಬೇಕು. ಸಮವಸ್ತ್ರ ಕಳೆದುಕೊಂಡಲ್ಲಿ ದೇವಾಲಯದ ನಿಧಿಯಿಂದ ಪುನಃ ನೀಡಬೇಕು. ಅದರ ವೆಚ್ಚವನ್ನು ವೇತನದಲ್ಲಿ ಕಡಿತಗೊಳಿಸುವುದು ಎಂದು ಸೂಚಿಸಿದೆ.

ಮೇಲುಸ್ತುವಾರಿ ನೇಮಕ

ದಾಸೋಹ ನಡೆಸುವ ದೇವಸ್ಥಾನದ ಪ್ರತಿ ಪಾಕಶಾಲೆಗೆ ಒಬ್ಬ ಮೇಲುಸ್ತುವಾರಿಯನ್ನು ನೇಮಿಸಲು ಸೂಚಿಸಲಾಗಿದ್ದು, ಪ್ರಸಾದ ತಯಾರಿಕೆ ಹಾಗೂ ವಿತರಣೆ ಸೇರಿದಂತೆ ಉಗ್ರಾಣಕ್ಕೆ ಸಂಬಂಧಿಸಿದ ಎಲ್ಲ ಹೊಣೆಯನ್ನೂ ಅವರೇ ಹೊರಬೇಕು. ಅಡುಗೆ ಮನೆ. ಪಾತ್ರೆ, ದವಸಧಾನ್ಯಗಳ ಶುಚಿತ್ವ ಮೇಲೂ ನಿಗಾ ವಹಿಸಬೇಕು. ದೇವಾಲಯಗಳ ಎಲ್ಲ ಚಟುವಟಿಕೆಗಳೂ ಕಾಣುವಂತೆ ಸಿಸಿ ಟಿವಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ವರ್ಷಕ್ಕೊಮ್ಮೆ ಪಾಕಶಾಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಆರೋಗ್ಯ ಕುರಿತು ವೈದ್ಯಕೀಯ ದೃಢೀಕರಣ ಪತ್ರ ಪರಿಶೀಲಿಸಬೇಕು ಎಂದು ನಿರ್ದೇಶಿಸಲಾಗಿದೆ.

ಹೊರಗಿನ ಪ್ರಸಾದ ನಿಷಿದ್ಧ

ದೇವಾಲಯಗಳಲ್ಲಿ ಹೊರಗಿನಿಂದ ತರಿಸಿದ ಪ್ರಸಾದ ವಿತರಣೆಗೆ ಅವಕಾಶ ನೀಡಬಾರದು. ಹರಕೆ ರೂಪದಲ್ಲಿ ಪ್ರಸಾದ ನೀಡಲು ಬಯಸುವವರು ಪ್ರಸಾದಕ್ಕೆ ಅಗತ್ಯ ಸಾಮಗ್ರಿಗಳನ್ನು ನೀಡಿದರೆ ದೇವಸ್ಥಾನದ ವತಿಯಿಂದಲೇ ತಯಾರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮಾಹಿತಿ ಸಂಗ್ರಹ

ದೇವಸ್ಥಾನದಲ್ಲಿ ಈ ಹಿಂದೆಯೇ ಸಿಬ್ಬಂದಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿತ್ತಾದರೂ, ಎಲ್ಲೆಡೆ ಕಡ್ಡಾಯವಾಗಿ ಪಾಲನೆ ಆಗುತ್ತಿರಲಿಲ್ಲ. ವಿಷ ಪ್ರಸಾದ ವಿತರಣೆ ಘಟನೆ ನಂತರ ಎಲ್ಲ ದೇವಾಲಯಗಳಲ್ಲೂ ಕಟ್ಟು ನಿಟ್ಟಿನ ಕ್ರಮಕ್ಕೆ ಸರಕಾರ ಮುಂದಾಗಿದೆ. ನಿಯಮ ಪಾಲನೆ ಆಗುತ್ತಿರುವ ಬಗ್ಗೆ ಎಲ್ಲಾ ದೇವಾಲಯಗಳಿಂದಲೂ ಛಾಯಾಚಿತ್ರ ಸಹಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ