ಆ್ಯಪ್ನಗರ

ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳಲ್ಲಿ ಬರ: ಸಚಿವ ದೇಶಪಾಂಡೆ ಘೋಷಣೆ

ಕರಾವಳಿ-ಮಲೆನಾಡು ಭಾಗದಲ್ಲಿ ಅತಿವೃಷ್ಟಿಯ ನಡುವೆಯೂ ರಾಜ್ಯದ 23 ಜಿಲ್ಲೆಗಳಲ್ಲಿ ಅನಾವೃಷ್ಟಿ ಆದದ್ದರಿಂದ 86 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.

Vijaya Karnataka 12 Sep 2018, 7:59 am
ಬೆಂಗಳೂರು : ಕರಾವಳಿ-ಮಲೆನಾಡು ಭಾಗದಲ್ಲಿ ಅತಿವೃಷ್ಟಿಯ ನಡುವೆಯೂ ರಾಜ್ಯದ 23 ಜಿಲ್ಲೆಗಳಲ್ಲಿ ಅನಾವೃಷ್ಟಿ ಆದದ್ದರಿಂದ 86 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.
Vijaya Karnataka Web RVDeshpande


''ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರಕಾರ 2016 ರಲ್ಲಿ ಹೊರತಂದಿರುವ ಮಾನದಂಡದ ಅನುಸಾರ ಬರಪೀಡಿತ ತಾಲೂಕುಗಳ ಪಟ್ಟಿ ಮಾಡಲಾಗಿದೆ. ಈ ವರ್ಷ ಮೇ ಅಂತ್ಯಕ್ಕೆ ಮುಂಗಾರು ಪ್ರವೇಶಿಸಿದ್ದು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೀವ್ರ ಮಳೆಯಾಗಿದೆ. ಆದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಬರದ ಕರಾಳ ಛಾಯೆ ಕಾಣಿಸಿಕೊಂಡಿದೆ. ಜೂನ್‌ 1 ರಿಂದ ಸೆಪ್ಟೆಂಬರ್‌ 6 ರ ವರೆಗೆ ರಾಜ್ಯಾದ್ಯಂತ 721 ಮಿಲಿ ಮೀಟರ್‌ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.2 ರಷ್ಟು ಹೆಚ್ಚಾಗಿದ್ದರೂ 88 ತಾಲೂಕುಗಳಲ್ಲಿ ಸಾಧಾರಣ ಮಳೆ ಕೊರತೆಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದೆ,'' ಎಂದು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

8 ಸಾವಿರ ಕೋಟಿ ನಷ್ಟ

''ಮಳೆ ಕೊರತೆಯಿಂದ 15 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಕೃಷಿ, ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. 8 ಸಾವಿರ ಕೋಟಿ ರೂ. ನಷ್ಟವಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಪಶು ಸಂಗೋಪನ ಇಲಾಖೆಗೆ 15 ಕೋಟಿ ರೂ. ಒದಗಿಸಲಾಗಿದೆ. ಕುಡಿಯುವ ನೀರು ಸರಬರಾಜು ಮಾಡಲು ಶಾಸಕರ ನೇತೃತ್ವದ ಕಾರ್ಯಪಡೆಗೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ನಿರಂತರ 90 ದಿನ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಬಾರದು ಎಂಬ ಮಾರ್ಗಸೂಚಿ ಸಡಿಲಿಸಲಾಗುವುದು,'' ಎಂದರು.

''ಬರ ಪರಿಸ್ಥಿತಿ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಂತರ ಕೇಂದ್ರದಿಂದ ಅಗತ್ಯ ನೆರವು ಲಭ್ಯವಾಗಲಿದೆ. ಬರ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಡಿಸಿಗಳಿಗೆ ನಿರ್ದೇಶನ ನೀಡಲಾಗುವುದು. ಮಳೆ ಕೊರತೆಯಾದರೆ ಹಿಂಗಾರಿನಲ್ಲೂ ಬರದ ಸಮಸ್ಯೆ ಎದುರಾಗಬಹುದು. ಈ ನಿಟ್ಟಿನಲ್ಲೂ ಮುಂಜಾಗ್ರತೆ ಕೈಗೊಳ್ಳಲು ಸೂಚಿಸಲಾಗುವುದು,'' ಎಂದರು ಸಚಿವರು ಹೇಳಿದರು.

ಬರಪೀಡಿತ ತಾಲೂಕುಗಳ ಪಟ್ಟಿ


ಪ್ರಧಾನಿ ನಿಧಿಯಿಂದ ಪರಿಹಾರ

''ಕೊಡಗಿನಲ್ಲಿ ಪ್ರವಾಹದಿಂದ ಮೃತರಾದವರ ಕುಟುಂಬಕ್ಕೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದಲೂ ನೆರವಿನ ಭರವಸೆ ಸಿಕ್ಕಿದೆ. ಈ ಸಂಬಂಧ ವಿವರ ಕಳುಹಿಸಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ,'' ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

''ಪ್ರವಾಹದಿಂದಾಗಿ 2.26 ಲಕ್ಷ ಹೆಕ್ಟೇರ್‌ ಕಾಫಿ ಬೆಳೆ ನಷ್ಟವಾಗಿದೆ. ಕೇಂದ್ರ ಅಧ್ಯಯನ ತಂಡ ಸಮೀಕ್ಷೆ ನಡೆಸಿದ ಬಳಿಕ ಪರಿಹಾರ ಲಭ್ಯವಾಗಲಿದೆ. ಈ ಸಂಬಂಧ 1199.89 ಕೋಟಿ ರೂ. ಪರಿಹಾರ ನೀಡುವಂತೆ ಪ್ರಧಾನಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಕೇಂದ್ರದ ತಂಡದ ಸದಸ್ಯರು ಸೆಪ್ಟೆಂಬರ್‌ 14 ರಂದು ಸಭೆ ನಡೆಸಲಿದ್ದಾರೆ. ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೆ ಪರಿಹರಿಸುವಂತೆ ಡಿಸಿಗೆ ಸೂಚಿಸಲಾಗುವುದು,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ