ಆ್ಯಪ್ನಗರ

65 ತಾಲೂಕನ್ನು ಬರಪೀಡಿತ ಘೋಷಿಸಿ, ಗೋಶಾಲೆ ಆರಂಭಿಸಿ: ಹೈಕೋರ್ಟ್‌

ಮಳೆಯಾಗದ 65 ತಾಲೂಕುಗಳನ್ನು ಕೂಡಲೇ ಬರಪೀಡಿತವೆಂದು ಘೋಷಿಸಬೇಕು ಮತ್ತು ಆ ತಾಲೂಕುಗಳಲ್ಲಿ ತಲಾ ಒಂದರಂತೆ ಜಾನುವಾರು ಶಿಬಿರಗಳನ್ನು ಆರಂಭಿಸಬೇಕು ಎಂದು ...

Vijaya Karnataka 18 Jul 2019, 5:00 am
ಬೆಂಗಳೂರು: ಮಳೆಯಾಗದ 65 ತಾಲೂಕುಗಳನ್ನು ಕೂಡಲೇ ಬರಪೀಡಿತವೆಂದು ಘೋಷಿಸಬೇಕು ಮತ್ತು ಆ ತಾಲೂಕುಗಳಲ್ಲಿ ತಲಾ ಒಂದರಂತೆ ಜಾನುವಾರು ಶಿಬಿರಗಳನ್ನು ಆರಂಭಿಸಬೇಕು ಎಂದು ಹೈಕೋರ್ಟ್‌ ಬುಧವಾರ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
Vijaya Karnataka Web BNG-HVR-5 VARTI NIRU


ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಸಿಜೆ ಎ.ಎಸ್‌. ಓಕ್‌ ಹಾಗೂ ನ್ಯಾ. ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ಪೀಠ ವಿಚಾರಣೆ ನಡೆಸಿ ಸರಕಾರಕ್ಕೆ ಮೌಖಿಕ ಆದೇಶ ನೀಡಿತು. ಈ ಬಗ್ಗೆ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿತು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸರಕಾರಿ ವಕೀಲ ಡಿ.ನಾಗರಾಜ್‌ ನ್ಯಾಯಾಲಯದ ನಿರ್ದೇಶನದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರ ಹಾಗೂ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲೂ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಲಿ ಒಂದು ಜಾನುವಾರಿಗೆ 5 ಕೆ.ಜಿ. ಒಣ ಮೇವು ನೀಡಲಾಗುತ್ತಿದ್ದು, ಅದನ್ನು 6 ಕೆ.ಜಿ. ಹೆಚ್ಚಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲು ಟಿಪ್ಪಣ್ಣಿ ಸಿದ್ಧವಾಗಿದೆ ಎಂದರು.

75 ಲಕ್ಷ ಜಾನುವಾರುಗಳಿಗೆ 27 ಗೋಶಾಲೆ ಸಾಕೇ?: ಆಗ ಸಿಜೆ, ಕಳೆದ ಡಿಸೆಂಬರ್‌ನಲ್ಲಿ ಸರಕಾರ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ, ಆಲ್ಲಿ 75.35ಲಕ್ಷ ಜಾನುವಾರುಗಳಿಗೆ ತೊಂದರೆ ಆಗಿದೆ ಎಂದು ಹೇಳಿದ್ದೀರಿ , ಹಾಗಿದ್ದರೆ 75 ಲಕ್ಷ ಜಾನುವಾರುಗಳಿಗೆ 27 ಗೋಶಾಲೆಗಳು ಸಾಕೇ ಎಂದು ಪ್ರಶ್ನಿಸಿತು.

ಅಲ್ಲದೆ, ನೀವು ಮೇವಿನ ಪ್ರಮಾಣ 5ರಿಂದ 6 ಕೆ.ಜಿ.ಗೆ ಹೆಚ್ಚಳ ಮಾಡುತ್ತೇವೆ ಎಂದು ಹೇಳುತ್ತೀದ್ದೀರಿ ಅದರಿಂದ ಎಷ್ಟು ಜಾನುವಾರುಗಳಿಗೆ ಅನುಕೂಲವಾಗುತ್ತದೆ ? ಇಡೀ ರಾಜ್ಯಕ್ಕೆ 27 ಗೋಶಾಲೆ ಸಾಕು ಎಂದು ನಿರ್ಧರಿಸಿದ್ದು ಯಾರು, ಅದಕ್ಕೆ ಅಧ್ಯಯನ ನಡೆಸಲಾಗಿದೆಯೇ ಎಂದು ನ್ಯಾಯಪೀಠ ಕೇಳಿತು.

ಜಾನುವಾರುಗಳಲ್ಲೂ ತಾರತಮ್ಯವೇ?: ಸರಕಾರಿ ವಕೀಲರು ಹಾಲು ಕೊಡುವ ಜಾನುವಾರುಗಳನ್ನು ರಕ್ಷಿಸಲು ಪ್ರತಿ ಲೀಟರ್‌ ಹಾಲು ಖರೀದಿಗೆ ರೈತರಿಗೆ ಆರು ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು. ಆಗ ನ್ಯಾಯಪೀಠ, ಹಾಗಿದ್ದರೆ ನೀವು(ಸರಕಾರ) ಜಾನುವಾರುಗಳಲ್ಲೂ ತಾರತಮ್ಯ ಮಾಡುತ್ತಿದೆಯೇ? ಎಂದು ಕೇಳಿತು.

ಅರ್ಜಿದಾರ ಮಲ್ಲಿಕಾರ್ಜುನ ಈವರ್ಷ ಇನ್ನೂ ಮುಂಗಾರು ಮಳೆ ಸರಿಯಾಗಿ ಆಗಿಲ್ಲ, ಆದರೆ ಸರಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿಲ್ಲ, ಹಾಗಾಗಿ ರೈತರಿಗೆ ಅನುಕೂಲ ಸಿಗುತ್ತಿಲ್ಲ ಎಂದರು.

ಆಗ ಸರಕಾರಿ ವಕೀಲರು, 65 ತಾಲೂಕುಗಳಲ್ಲಿ ಮಳೆ ಕಡಿಮೆ ಆಗಿ, ಬರಪರಿಸ್ಥಿತಿ ಇದೆ. ಆದರೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ, ಮುಂದಿನ ತಿಂಗಳು ಘೋಷಿಸಲಾಗುವುದು ಎಂದರು. ಆದಕ್ಕೆ ನ್ಯಾಯಪೀಠ, ಬರಪೀಡಿತ ತಾಲೂಕು ಘೋಷಿಸದಿದ್ದರೆ ಸಿಗಬೇಕಾದ ಸವಲತ್ತುಗಳು ಸಿಗುವುದಿಲ್ಲ. ಕೂಡಲೇ ಘೋಷಣೆ ಮಾಡಿ ಎಂದು ಹೇಳಿತು.

ಪಶುಸಂಗೋಪನಾ ಇಲಾಖೆ ಪ್ರಭಾರ ಕಾರ್ಯದರ್ಶಿ ಪಿ. ಮಣಿವಣ್ಣನ್‌ ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು.

---------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ