ಆ್ಯಪ್ನಗರ

ನಕಲಿ ದಂಧೆ: 1200 ಪುಟಗಳ ದೂರು

ನಕಲಿ ದಾಖಲೆ ಸೃಷ್ಟಿ, ಅಂಕಪಟ್ಟಿಗಳನ್ನು ತಿದ್ದಿರುವುದು ಹಾಗೂ ಫೋರ್ಜರಿಯಾಗಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ವಿರುದ್ಧ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪೊಲೀಸರಿಗೆ 1200 ಪುಟಗಳ ದೂರು ನೀಡಿದೆ.

Vijaya Karnataka 8 Jun 2018, 5:00 am
ಬೆಂಗಳೂರು: ನಕಲಿ ದಾಖಲೆ ಸೃಷ್ಟಿ, ಅಂಕಪಟ್ಟಿಗಳನ್ನು ತಿದ್ದಿರುವುದು ಹಾಗೂ ಫೋರ್ಜರಿಯಾಗಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ವಿರುದ್ಧ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪೊಲೀಸರಿಗೆ 1200 ಪುಟಗಳ ದೂರು ನೀಡಿದೆ.
Vijaya Karnataka Web INJECTION


ಆರೋಗ್ಯ ವಿವಿ ಅಧಿಕಾರಿಗಳು ಕಳೆದ ಏಪ್ರಿಲ್‌ನಲ್ಲಿ ತಪಾಸಣೆ ನಡೆಸಲು ಬಂದಾಗ ಹಣ ತೆಗೆದುಕೊಂಡಿದ್ದರು ಎಂದು ಈ ಖಾಸಗಿ ವೈದ್ಯಕೀಯ ಕಾಲೇಜು ಆರೋಪ ಮಾಡಿತ್ತು. ಮತ್ತೊಂದೆಡೆ, ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ 500ಜಿಬಿ ದತ್ತಾಂಶದಿಂದ ಕಾಲೇಜಿನಲ್ಲಿ ನಡೆದ ಅಕ್ರಮಗಳನ್ನು ರುಜುವಾತುಪಡಿಸುತ್ತಿವೆ ಎಂದು ವಿವಿ ಹೇಳಿಕೊಂಡಿತ್ತು. ತಪಾಸಣೆ ಸಂದರ್ಭದಲ್ಲಿ ಕೆಲವು ನಕಲಿ ದಾಖಲೆಗಳ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಪೊಲೀಸ್‌ ಠಾಣೆಗೆ 1200 ಪುಟಗಳ ದೂರು ನೀಡಿರುವ ವಿವಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ದೂರುಗಳ ವರದಿ ಆಧರಿಸಿ ಪೊಲೀಸರು ಸೂಕ್ತ ತನಿಖೆ ನಡೆಸಿದಲ್ಲಿ ಭಾರೀ ಅಕ್ರಮಗಳ ಜಾಲ ಬಯಲಾಗಲಿದೆ ಎಂದು ವಿವಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆಯಲಿರುವ ವಿವಿಯ ಸಿಂಡಿಕೇಟ್‌ ಸಭೆಯಲ್ಲಿಯೂ ಈ ವರದಿಯನ್ನು ಮಂಡಿಸಿ, ತಪ್ಪಿತಸ್ಥ ವೈದ್ಯಕೀಯ ಕಾಲೇಜಿನ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಬೇಕೆನ್ನುವ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

''ಬೆಥಲ್‌ ಮೆಡಿಕಲ್‌ ಮಿಷನ್‌ ನಡೆಸುವ ಕೆಲ ಕಾಲೇಜುಗಳಲ್ಲಿ ಅಕ್ರಮ ದಾಖಲೆಗಳು ಸಿಕ್ಕಿದ್ದು, ಫೋರ್ಜರಿ ವೈದ್ಯ ಪ್ರಮಾಣ ಪತ್ರಗಳನ್ನು ನೀಡಿರುವುದು ಕೂಡ ಬೆಳಕಿಗೆ ಬಂದಿದೆ. ಇದರ ಹಿಂದೆ ಅಕ್ರಮದ ದೊಡ್ಡ ಜಾಲ ಅಡಗಿರುವ ಶಂಕೆಯಿದೆ'' ಎಂದು ವಿವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೋರ್ಜರಿ ಅಂಕ ಪಟ್ಟಿಗಳನ್ನು ಸೃಷ್ಟಿಸಿರುವುದು, ದಾಖಲೆಗಳನ್ನು ತಿದ್ದಿರುವುದು ಹಾಗೂ ನಕಲಿ ವೈದ್ಯ ಪ್ರಮಾಣ ಪತ್ರಗಳನ್ನು ವಿತರಿಸಿರುವ ಆರೋಪದ ಮೇರೆಗೆ ಖಾಸಗಿ ವೈದ್ಯ ಕಾಲೇಜಿನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವಿವಿ ಕಾಯ್ದೆಯ ಸೆಕ್ಷನ್‌ 5 ಅನ್ನು ಉಲ್ಲಂಘಿಸಿ ಭಾರತೀಯರ್‌ ವಿವಿಯಿಂದ ಮಾನ್ಯತೆ ಪಡೆದ ಕೆಲ ಕೋರ್ಸ್‌ಗಳನ್ನು ಕಾನೂನುಬಾಹಿರವಾಗಿ ನಡೆಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆರೋಗ್ಯ ವಿವಿಯು ತನ್ನ ದೂರಿನಲ್ಲಿ ತಿಳಿಸಿದೆ.

ಮನ್ಸೂರಿ ಮುಬಾರಕ್‌ ಎಂಬ ಇರಾನ್‌ನ ವಿದ್ಯಾರ್ಥಿನಿಗೆ ಬೇರೊಂದು ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಅಲ್ಲದೆ, ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮನ್ಸೂರಿ ಮುಬಾರಕ್‌ ಅವರ ಸಹೋದರಿಯನ್ನು ಕೂಡ ಬೇರೊಂದು ಕಾಲೇಜಿಗೆ ಸ್ಥಳಾಂತರಿಸಬೇಕು ಎಂದು ವಿವಿಯು ಸರಕಾರಕ್ಕೆ ಶಿಫಾರಸು ಮಾಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ