ಆ್ಯಪ್ನಗರ

ಬಿಜೆಪಿ ಜಾಹೀರಾತಿಗೆ ಚುನಾವಣೆ ಆಯೋಗ ತಡೆ

ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರಕಟಿಸಿದ್ದ ವಿವಾದಾಸ್ಪದ ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ ನೀಡಿದೆ...

Vijaya Karnataka 28 Apr 2018, 8:27 am
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರಕಟಿಸಿದ್ದ ವಿವಾದಾಸ್ಪದ ಜಾಹೀರಾತುಗಳಿಗೆ ಚುನಾವಣಾ ಆಯೋಗ ತಡೆ ನೀಡಿದೆ. ಈ ಸಂಬಂಧ ಆಯೋಗದ ನಿರ್ದೇಶನದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
Vijaya Karnataka Web ec

ಈ ಬಗ್ಗೆ ಕಾಂಗ್ರೆಸ್‌ ಮುಖಂಡರಾದ ಪ್ರೊ. ರಾಜೀವ್‌ಗೌಡ, ವಿ.ಎಸ್‌. ಉಗ್ರಪ್ಪ ಮತ್ತಿತರರು ಆಯೋಗಕ್ಕೆ ಗುರುವಾರ ದೂರು ಸಲ್ಲಿಸಿದ್ದರು. ಜನವಿರೋಧಿ ಸರಕಾರ, ವಿಫಲ ಸರಕಾರ, ಮೂರು ಭಾಗ್ಯ ಶೀರ್ಷಿಕೆಗಳಡಿ ಪ್ರಕಟಿಸಿದ ಜಾಹೀರಾತುಗಳು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿವೆ ಎನ್ನುವುದು ಕಾಂಗ್ರೆಸ್‌ ದೂರಿನ ಸಾರಾಂಶವಾಗಿತ್ತು. ತಕ್ಷಣವೇ ಈ ಕುರಿತು ವಿಚಾರಣೆ ಕೈಗೊಂಡಿದ್ದ ಚುನಾವಣಾ ಆಯೋಗದ ಸಮಿತಿ, ಈ ವಿವಾದಾತ್ಮಕ ಜಾಹೀರಾತುಗಳ ಪ್ರಸಾರಕ್ಕೆ ಬ್ರೇಕ್‌ ಹಾಕುವಂತೆ ಸೂಚಿಸಿತ್ತು. ಅದರ ಅನುಸಾರ ಈ ಜಾಹೀರಾತುಗಳನ್ನು ಪ್ರಕಟಿಸದಂತೆ ನಾನಾ ಸುದ್ದಿವಾಹಿನಿಗಳು, ಟ್ವಿಟರ್‌, ಗೂಗಲ್‌, ಫೇಸ್‌ಬುಕ್‌ ಇಂಡಿಯಾಗಳಿಗೆ ವಾರ್ತಾ ಇಲಾಖೆ ನಿರ್ದೇಶನ ನೀಡಿದೆ.

ಕಾಂಗ್ರೆಸ್‌ನಿಂದ ಸ್ವಾಗತ
''ಆಯೋಗದ ಈ ಕ್ರಮವನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಈ ಪ್ರಮಾದಕ್ಕೆ ಬಿಜೆಪಿಯವರು ಕ್ಷಮೆ ಯಾಚಿಸಬೇಕು. ಸುಳ್ಳಿನ ಕಂತೆ ಸೃಷ್ಟಿಸಿ ಜನರ ದಾರಿ ತಪ್ಪಿಸುವ ಜಾಹೀರಾತು ನೀಡಿದ್ದ ಬಿಜೆಪಿಗೆ ಆಯೋಗದಿಂದ ಕಪಾಳ ಮೋಕ್ಷವಾಗಿದೆ. ಪ್ರಧಾನಿ ಮೋದಿ, ಅಮಿತ್‌ ಶಾ, ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ,'' ಎಂದು ವಿ.ಎಸ್‌. ಉಗ್ರಪ್ಪ ತಿಳಿಸಿದ್ದಾರೆ.

''ಜನರಿಗೆ ತಪ್ಪು ಮಾಹಿತಿ ನೀಡುವ ಬದಲು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ,'' ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಎಸೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ