ಆ್ಯಪ್ನಗರ

ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಯಿಂದ ದೇಶದ ಪ್ರಗತಿ ಸಾಧ್ಯ: ವರುಣ್ ಗಾಂಧಿ

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಂಡಲ್ಲಿ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗಲಿದೆ.

Vijaya Karnataka 19 Jun 2018, 8:01 am
ಬೆಂಗಳೂರು: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಂಡಲ್ಲಿ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮುಖಂಡ ಹಾಗೂ ಸಂಸದ ವರುಣ್‌ ಗಾಂಧಿ ಅವರು ಅಭಿಪ್ರಾಯಪಟ್ಟರು.
Vijaya Karnataka Web Varun gandhi


ಎಫ್‌ಕೆಸಿಸಿಐ ಆಯೋಜಿಸಿದ್ದ 'ಭವಿಷ್ಯದ ಭಾರತಕ್ಕಾಗಿ ಅವಕಾಶಗಳು ಹಾಗೂ ಸವಾಲುಗಳು' ಕುರಿತ ಸಂವಾದದಲ್ಲಿ ಸೋಮವಾರ ಮಾತನಾಡಿ ''ಭಾರತದ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊರತೆಗಳಿವೆ. ಇವುಗಳ ನಿವಾರಣೆಗೆ ಒತ್ತು ಸಿಗದೆ ಜನರು ಬವಣೆಗೆ ಒಳಗಾಗಿದ್ದಾರೆ. ಅನುದಾನದ ಅಲಭ್ಯದಿಂದಾಗಿ ಇತರ ದೇಶಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗಿಲ್ಲ. ಈ ಕೊರತೆ ನಿವಾರಿಸಿಕೊಂಡಲ್ಲಿ ಮಾತ್ರ ಭಾರತ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬಲ್ಲದು,'' ಎಂದರು.

''ದೇಶದಲ್ಲಿ ಸುಮಾರು 700 ವಿವಿಗಳಿವೆ. ಇವುಗಳಲ್ಲಿ ಒಂದು ವಿವಿ ಕೂಡ ವಿಶ್ವ ರಾರ‍ಯಂಕಿಂಗ್‌ ಪಟ್ಟಿಗೆ ಸೇರಿಲ್ಲ. ಪಿಎಚ್‌ಡಿ ಮಾಡುವವರ ಸಂಖ್ಯೆ ತೀರಾ ನಗಣ್ಯವಾಗಿದೆ. ಕಾಲಮಿತಿಯಲ್ಲಿ ಪೇಟೆಂಟ್‌ ಪಡೆದುಕೊಳ್ಳದೆ ಮಾಡಿದ ಸಾಧನೆ ನಿಷ್ಫಲವಾಗುತ್ತಿದೆ. ಉದ್ದಿಮೆದಾರರಂತೆ ಶಿಕ್ಷಣ ಸಾಲದ ಎನ್‌ಪಿಎ 6,000 ಕೋಟಿ ರೂ. ಬಾಕಿ ಇದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಕಾರ ಹಾಗೂ ಯುವ ಜನತೆ ಒಂದಾಗಿ ಹೆಜ್ಜೆ ಹಾಕಬೇಕಿದೆ,'' ಎಂದರು.

ಆವಿಷ್ಕಾರ, ಸಂಶೋಧನೆಗೆ ಮುಖ್ಯ

''ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದ್ದು, ಜಿಡಿಪಿಯ 1ಕ್ಕಿಂತ ಕಡಿಮೆ ಹಣ ಬಳಕೆಯಾಗುತ್ತಿದೆ. ಆರ್‌ ಆ್ಯಂಡ್‌ ಡಿ ಕೈಗೊಳ್ಳುವವರು ಪ್ರತಿ ಹತ್ತು ಲಕ್ಷ ಜನಸಂಖ್ಯೆ ಕೇವಲ 366 ಮಂದಿ ಇದ್ದೇವೆ. ಇದು ಬ್ರಿಕ್ಸ್‌ ರಾಷ್ಟ್ರಗಳಲ್ಲೇ ಅತಿ ಕಡಿಮೆ. ಈ ಪ್ರಮಾಣಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ-2600, ಫಿನ್‌ಲೆಂಡ್‌ನಲ್ಲಿ 1,200 ಮಂದಿ ಕಾರ್ಯನಿರತರಾಗಿದ್ದಾರೆ. ಆವಿಷ್ಕಾರ ಹಾಗೂ ಕೌಶಲಕ್ಕೆ ಒತ್ತು ನೀಡಿದ್ದಲ್ಲಿ ಯುವ ಪೀಳಿಗೆ ಭವಿಷ್ಯ ಭಾರತ ನಿರ್ಮಿಸಬಲ್ಲದು,'' ಎಂದರು. ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ ಮತ್ತಿತರರಿದ್ದರು.

ಬೆಂಗಳೂರು ಅಂತರ್ಜಲ ಕುಸಿತ ಕಳವಳಕಾರಿ

ಬೆಂಗಳೂರಿನ ಅಂತರ್ಜಲ ಕುಸಿತ ಕಳವಳಕಾರಿ ಸಂಗತಿ. ಹಸಿರಿಗೆ ಪ್ರಸಿದ್ಧಿಯಾಗಿದ್ದ ನಗರ ನನಗೂ ಮೆಚ್ಚುಗೆ ಆಗಿತ್ತು. ಪ್ರತಿಯೊಬ್ಬ ನಾಗರಿಕನು ಮಳೆನೀರು ಕೊಯ್ಲು ಹಾಗೂ ಉತ್ತಮ ಪ್ರಭೇದದ ಸಸಿಗಳನ್ನು ನೆಟ್ಟಲ್ಲಿ ನಗರವು ಸಮಸ್ಯೆ ಮುಕ್ತವಾಗುತ್ತದೆ. ಜನಪ್ರತಿನಿಧಿಗಳು ಶಾಸನಸಭೆಯಲ್ಲಿ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ನಾಗರಿಕರು ಒತ್ತಾಯಿಸಬೇಕಿದೆ ಎಂದು ವರುಣ್‌ ಗಾಂಧಿ ಕಿವಿಮಾತು ಹೇಳಿದರು.

ಇಪ್ಪತ್ತು ಕೋಟಿ ರೂ. ಗಿಂತ ಅಧಿಕ ಆಸ್ತಿ ಹೊಂದಿರುವ ಸಂಸದ/ಶಾಸಕರು ವೇತನ ಪಡೆದುಕೊಳ್ಳದಿದ್ದಲ್ಲಿ 5 ವರ್ಷದ ಅವಧಿಯಲ್ಲಿ ಬೊಕ್ಕಸಕ್ಕೆ 400 ಕೋಟಿ ರೂ. ಉಳಿತಾಯವಾಗಲಿದೆ. ಈ ಮೊತ್ತವನ್ನು ಜನ ಕಲ್ಯಾಣಕ್ಕೆ ಬಳಸಿದಲ್ಲಿ ಜನಪ್ರತಿನಿಧಿಗಳಿಗೆ ಗೌರವ ಬರುತ್ತದೆ
- ವರುಣ್‌ ಗಾಂಧಿ, ಸಂಸದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ