ಆ್ಯಪ್ನಗರ

Egg Row: ಚುನಾವಣೆ ಕಿಚ್ಚಿನಲ್ಲಿ ಬೇಯುತ್ತಿದೆ ಕಾಂಗ್ರೆಸ್ V/S ಬಿಜೆಪಿ ಮೊಟ್ಟೆ: ಜನರಿಗೆ ಮಾತ್ರ ಲೊಳಲೊಟ್ಟೆ!

Egg thrown On Congress leader Siddaramaiah: ಸಿದ್ದರಾಮೋತ್ಸವ, ಮೇಕೆದಾಟು ಪಾದಯಾತ್ರೆ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡ್ತಿರುವ ಕಾಂಗ್ರೆಸ್, ಇದೀಗ ಭಾರತ ಯಾತ್ರೆಗೂ ಸಜ್ಜಾಗುತ್ತಿದೆ. ಒಂದು ಕಡೆ ಪಕ್ಷ ಸಂಘಟನೆ, ಹುರುಪು.. ಮತ್ತೊಂದು ಕಡೆ ಈ ರೀತಿ ಎಡ - ಬಲ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶಗಳು.. ಅದರಲ್ಲೂ ಸಾವರ್ಕರ್ ವಿಚಾರ ಮುನ್ನಲೆಗೆ ಬಂದಿದ್ದೇ ಈ ಬಡಿದಾಟ ತೀವ್ರಗೊಳ್ಳಲು ಕಾರಣವಾಯ್ತು. ಈ ವಿಚಾರ ಇದೀಗ ಮೊಟ್ಟೆ ಎಸೆಯುವ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ತಪ್ಪಾಗಲಾರದು..

Authored byದಿಲೀಪ್ ಡಿ. ಆರ್. | Vijaya Karnataka Web 19 Aug 2022, 6:35 pm
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರ ಬರುತ್ತಿರುವಂತೆಯೇ ‘ದ್ವೇಷ ರಾಜಕಾರಣ’ದ ಕಿಚ್ಚೂ ಹೆಚ್ಚುತ್ತಿದೆ. ಪ್ರತಿಯೊಂದರಲ್ಲೂ ಎಡ - ಬಲ ಸಂಘರ್ಷಕ್ಕೆ ಕಾರಣವಾಗುವ ಅಂಶಗಳನ್ನು ಕೆದಕುವ ಪರಿಪಾಠ ಶುರುವಾಗಿದೆ. ಪ್ರತಿಯೊಂದು ವಿಚಾರವನ್ನೂ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುವ ‘ಹುಮ್ಮಸ್ಸು’ ಎದ್ದು ಕಾಣುತ್ತಿದೆ!
Vijaya Karnataka Web congress and bjp
ಚುನಾವಣೆ ಕಿಚ್ಚಿನಲ್ಲಿ ಬೇಯುತ್ತಿದೆ ಕಾಂಗ್ರೆಸ್ V/S ಬಿಜೆಪಿ ಮೊಟ್ಟೆ: ಜನರಿಗೆ ಮಾತ್ರ ಲೊಳಲೊಟ್ಟೆ!


ವೀರ್ ಸಾವರ್ಕರ್ ವಿವಾದದ ಸುತ್ತಾ..

ಬಿಜೆಪಿಗೆ ಸಾವರ್ಕರ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿನ ತಮ್ಮ ಪಾತ್ರವನ್ನು ಬಿಂಬಿಸುವ ಬಯಕೆ.. ಕಾಂಗ್ರೆಸ್ ಪಕ್ಷಕ್ಕೆ ಇದನ್ನು ವಿರೋಧಿಸುವ ಮೂಲಕವೇ ಕಾಂಗ್ರೆಸ್ಸಿಗರ ಸ್ವಾತಂತ್ರ್ಯ ಹೋರಾಟದ ಸಾಧನೆ ಬಿಂಬಿಸುವ ತವಕ.. ಈ ಗುದ್ದಾಟ ರಾಜ್ಯದ ಜನರಿಗೆ ಒಂದು ರೀತಿಯ ಮನರಂಜನೆ ನೀಡುತ್ತಿರೋದು ಕೂಡಾ ಸುಳ್ಳೇನಲ್ಲ..!

Egg thrown Case: ನಾವು ಮೊಟ್ಟೆ ಕೈಗೆತ್ತಿಕೊಂಡ್ರೆ ನೀವು ಬೀದಿಯಲ್ಲಿ ಓಡಾಡಲು ಸಾಧ್ಯವಿಲ್ಲ: ರಿಜ್ವಾನ್ ಅರ್ಷದ್ ಎಚ್ಚರಿಕೆ
ಹಾಗೆ ನೋಡಿದರೆ, ವೀರ್ ಸಾವರ್ಕರ್ ವಿವಾದ ಇಂದು ನಿನ್ನೆಯದೇನಲ್ಲ. ಸ್ವಾತಂತ್ರ್ಯಾ ಕಾಲದಿಂದಲೂ ಇದ್ದದ್ದೇ. ತೀರಾ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ವೃತ್ತಕ್ಕೆ ಸಾವರ್ಕರ್ ಹೆಸರಿಡಬೇಕು ಎಂದು ಹೊರಟಾಗಲೂ ವಿವಾದ ಭುಗಿಲೆದ್ದಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ‘ನಮ್ಮವರು’ ಇದ್ದರು ಎಂದು ಹೇಳಿಕೊಳ್ಳಲು ಬಿಜೆಪಿ ಈ ರೀತಿ ಮಾಡ್ತಿದೆ ಅನ್ನೋದು ಕಾಂಗ್ರೆಸ್ ವಾದ. ಆದ್ರೆ, ಸಾವರ್ಕರ್ ದೇಶಭಕ್ತ ಅಲ್ಲ ಎಂಬ ಅನುಮಾನವೇಕೆ ಅನ್ನೋದು ಬಿಜೆಪಿ ಪ್ರಶ್ನೆ..

ಈ ಪ್ರಶ್ನೆ ಇದೀಗ ಚುನಾವಣೆ ಹೊತ್ತಲ್ಲಿ ಹೊಸ ವಿವಾದ ಎಂಬಂತೆ ಭುಗಿಲೇಳುತ್ತಿರೋದು ಏಕೆ ಅನ್ನೋದು ಜನ ಸಾಮಾನ್ಯರ ಪ್ರಶ್ನೆ. ಸಾವರ್ಕರ್ ದೇಶ ಭಕ್ತನೋ, ಅಲ್ಲವೋ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನೋ, ಅಲ್ಲವೋ? ಇದನ್ನು ನಿರ್ಧರಿಸಬೇಕಾದ್ದು ಇತಿಹಾಸ. ನೈಜ ಇತಿಹಾಸ ಅರಿಯುವ ಪ್ರಯತ್ನವನ್ನು ಜನತೆ ಮಾಡಿದಾಗ ಅವರಿಗೇ ಸತ್ಯದ ಅರಿವಾಗುತ್ತೆ.. ಎಲ್ಲಕ್ಕಿಂತಾ ಹೆಚ್ಚಾಗಿ ಇತಿಹಾಸದ ಪುಟಗಳಲ್ಲಿ ಗತಿಸಿ ಹೋದ ಒಬ್ಬ ವ್ಯಕ್ತಿ ದೇಶದ ಸ್ವಾತಂತ್ರ್ಯಕ್ಕಾಗಿ ಏನೂ ಮಾಡಿಲ್ಲ ಎಂದು ಈಗ ವಾದಿಸುವುದೇ ನಿರರ್ಥಕ. ಇನ್ನು ಆತ ದೇಶ ಭಕ್ತನಲ್ಲ ಅನ್ನೋದು ನಿಜಕ್ಕೂ ಕ್ರೌರ್ಯ..! ಹಾಗೆ ನೋಡಿದ್ರೆ ಇದೇ ಮಾತು ಟಿಪ್ಪು ಸುಲ್ತಾನ್‌ಗೂ ಅನ್ವಯ..!

Egg thrown case: ಬಿಜೆಪಿ, ಆರ್ ಎಸ್ಎಸ್ ನವರು ತಿನ್ನೋದು ಸಗಣಿ, ಕುಡಿಯೋದು ಗಂಜಲ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
ಐತಿಹಾಸಿಕ ಘಟನೆಗಳಿಗೆ ಇಂದಿನ ನಂಟು ಏಕೆ..?

ಗ್ಯಾನ್‌ವಾಪಿ ಮಸೀದಿ ವಿವಾದದ ವಿಚಾರಣೆ ವೇಳೆ ಹಾಗೂ ಅಯೋಧ್ಯಾ ತೀರ್ಪಿನ ವೇಳೆ ನ್ಯಾಯಾಲಯದಲ್ಲಿ ಒಂದು ವಿಚಾರ ಪ್ರಸ್ತಾಪವಾಗಿತ್ತು. ಐತಿಹಾಸಿಕ ಪ್ರಮಾದಗಳಿಗೆ ಈಗ ಪರಿಹಾರ ಹುಡುಕೋದು, ಕಾನೂನಿನ ಮೂಲಕ ಸರಿಪಡಿಸುವ ಯತ್ನ ಮಾಡೋದು ಅವಾಸ್ತವ ಎಂಬ ವಾದ ವ್ಯಕ್ತವಾಗಿತ್ತು. ಈ ಮಾತನ್ನು ಟಿಪ್ಪು ಸುಲ್ತಾನ್ ಹಾಗೂ ವೀರ್ ಸಾವರ್ಕರ್‌ಗೂ ಅನ್ವಯಿಸಬಹುದಲ್ಲವೇ..?

ಐತಿಹಾಸಿಕವಾಗಿ ಅಂದು ಆ ವ್ಯಕ್ತಿತ್ವಗಳು ಎದುರಿಸಿದ ಕಷ್ಟ, ನಷ್ಟಗಳು, ಎದುರಾದ ಸನ್ನಿವೇಶಗಳು, ಆಗ ಅವರು ಯಾವುದೇ ಒಂದು ನಿರ್ಧಾರ ಕೈಗೊಳ್ಳಲು ಕಾರಣವಾದ ಒತ್ತಡಗಳ ಬಗ್ಗೆ ಅವರಿಗೆ ಮಾತ್ರ ಗೊತ್ತಿರುತ್ತದೆ. ಎಲ್ಲಕ್ಕಿಂತಾ ಹೆಚ್ಚಾಗಿ ಆ ಕಾಲ ಘಟ್ಟದ ‘ನ್ಯಾಯ’ ಹಾಗೂ ಆ ಹೊತ್ತಿನ ಅನಿವಾರ್ಯತೆಗಳೇ ಬೇರೆ ಇರುತ್ತವೆ. ಹೀಗಿರುವಾಗ ಅಂದು ಯಾವುದೋ ಪ್ರಮಾದ ನಡೆದು ಹೋಯ್ತು ಎಂದು ಇಂದು ಅದಕ್ಕೆ ನ್ಯಾಯ ಬಯಸುವುದು ಸೂಕ್ತವೇ? ಅದನ್ನು ತಪ್ಪು ಎಂದು ವಾದಿಸುತ್ತಾ ಕೂರೋದು ಧರ್ಮವೇ..? ಇತಿಹಾಸದ ಪುಟಗಳಲ್ಲಿ ಕರಗಿ ಹೋಗಿರುವ ಆ ವಿಚಾರಗಳ ಕುರಿತಾಗಿ ಈಗ ಚರ್ಚೆಗಳು, ವಾದ ವಿವಾದಗಳು ನಡೆಯುತ್ತಿರೋದು ಚುನಾವಣಾ ಕಾರಣಕ್ಕೆ ಹಚ್ಚಲಾದ ಬೆಂಕಿ ಮಾತ್ರ ಅಲ್ಲವೇ..?


ಎಲ್ಲಿ ಹೋಯ್ತು ಪ್ರತ್ಯೇಕ ಧರ್ಮ ವಿವಾದ? ಧ್ವಜ ವಿವಾದ?

2018ರ ವಿಧಾನಸಭಾ ಚುನಾವಣಾ ವೇಳೆ ಸಿದ್ದರಾಮಯ್ಯ ಸರ್ಕಾರವು ಹಲವು ವಿಚಾರಗಳಲ್ಲಿ ಸದ್ದು ಮಾಡಿತು. ಅದರಲ್ಲೂ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವನ್ನು ಹರಿಬಿಟ್ಟ ಸಿದ್ದರಾಮಯ್ಯ ಸರ್ಕಾರ, ಅದರಿಂದ ಲಾಭ ಪಡೆಯುವ ಬದಲು ನಷ್ಟ ಅನುಭವಿಸಿತು. ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕನ್ನಡ ಧ್ವಜ ರಚನೆ ಕುರಿತ ವಿಚಾರವನ್ನೂ ಮಾಧ್ಯಮಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಹರಿಬಿಡಲಾಯ್ತು. ಆದ್ರೆ, ಈ ವಿಚಾರಗಳೆಲ್ಲವೂ ಚುನಾವಣೆ ನಂತರ ಜನ ಮಾನಸದಿಂದ ಮರೆಯಾಗಿಯೇ ಹೋಯ್ತು..! ಹಾಗಾದ್ರೆ ಅವೆಲ್ಲವೂ ಚುನಾವಣೆಗಾಗಿಯೇ ಸಿದ್ದಪಡಿಸಲಾಗಿದ್ದ ಖಾದ್ಯಗಳೇ..?

ಸಾವರ್ಕರ್‌ರಿಂದ ಶುರುವಾಗಿ ಮೊಟ್ಟೆವರೆಗೂ..!

ಸಿದ್ದರಾಮೋತ್ಸವ, ಮೇಕೆದಾಟು ಪಾದಯಾತ್ರೆ ಹೀಗೆ ಹಲವು ಕಾರ್ಯಕ್ರಮಗಳನ್ನು ಮಾಡ್ತಿರುವ ಕಾಂಗ್ರೆಸ್, ಇದೀಗ ಭಾರತ ಯಾತ್ರೆಗೂ ಸಜ್ಜಾಗುತ್ತಿದೆ. ಒಂದು ಕಡೆ ಪಕ್ಷ ಸಂಘಟನೆ, ಹುರುಪು.. ಮತ್ತೊಂದು ಕಡೆ ಈ ರೀತಿ ಎಡ - ಬಲ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶಗಳು.. ಅದರಲ್ಲೂ ಸಾವರ್ಕರ್ ವಿಚಾರ ಮುನ್ನಲೆಗೆ ಬಂದಿದ್ದೇ ಈ ಬಡಿದಾಟ ತೀವ್ರಗೊಳ್ಳಲು ಕಾರಣವಾಯ್ತು. ಈ ವಿಚಾರ ಇದೀಗ ಮೊಟ್ಟೆ ಎಸೆಯುವ ಮಟ್ಟಕ್ಕೆ ಬಂದು ನಿಂತಿದೆ. ಮುಂದೆ ಏನಾಗುತ್ತೆ ಅನ್ನೋದು ಸದ್ಯದ ಪ್ರಶ್ನೆ..
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ