ಆ್ಯಪ್ನಗರ

ಐಎಂಎ ಬಹುಕೋಟಿ ವಂಚನೆ: ತನಿಖೆಗಿಳಿದ ಜಾರಿ ನಿರ್ದೇಶನಾಲಯ

ಬಹುಕೋಟಿ ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣ ಸಂಬಂಧ ಕಂಪನಿಯ ಆಡಿಟರ್‌ ಇಕ್ಬಾಲ್‌ ಎಂಬುವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಮಾಲೀಕ ಮನ್ಸೂರ್‌ ಖಾನ್‌ ಪತ್ತೆಗೆ ಶೋಧ ತೀವ್ರಗೊಂಡಿದ್ದು, ಆತನ ಕಾರು ಚಾಲಕ ಮತ್ತು ಸೆಕ್ಯುರಿಟಿ ಗಾರ್ಡ್‌ನನ್ನು ವಿಚಾರಣೆ ನಡೆಸಲಾಗಿದೆ. ಇದರ ಮಧ್ಯೆ, ಹಗರಣದ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ಐಎಂಎ ಮಾಲೀಕ ಮತ್ತು ಇತರರ ವಿರುದ್ಧ ಕೇಸ್‌ ದಾಖಲಿಸಿದೆ.

Vijaya Karnataka 15 Jun 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web ima logo


ಬಹುಕೋಟಿ ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣ ಸಂಬಂಧ ಕಂಪನಿಯ ಆಡಿಟರ್‌ ಇಕ್ಬಾಲ್‌ ಎಂಬುವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಮಾಲೀಕ ಮನ್ಸೂರ್‌ ಖಾನ್‌ ಪತ್ತೆಗೆ ಶೋಧ ತೀವ್ರಗೊಂಡಿದ್ದು, ಆತನ ಕಾರು ಚಾಲಕ ಮತ್ತು ಸೆಕ್ಯುರಿಟಿ ಗಾರ್ಡ್‌ನನ್ನು ವಿಚಾರಣೆ ನಡೆಸಲಾಗಿದೆ. ಇದರ ಮಧ್ಯೆ, ಹಗರಣದ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ಐಎಂಎ ಮಾಲೀಕ ಮತ್ತು ಇತರರ ವಿರುದ್ಧ ಕೇಸ್‌ ದಾಖಲಿಸಿದೆ.

ಜೂ.8 ತಡರಾತ್ರಿ ಐಎಂಎ ಜ್ಯುವೆಲ್ಸ್‌ ಕಚೇರಿಗೆ ಬಂದಿದ್ದ ಮಾಲೀಕ ಮನ್ಸೂರ್‌, ಗಡಿಬಿಡಿಯಲ್ಲಿ ಬಂದು ಗಡಿಬಿಡಿಯಲ್ಲಿ ಬ್ಯಾಗ್‌ ತೆಗೆದುಕೊಂಡು ಹೊರಟು ಹೋದರು. ಆದರೆ, ಅವರು ಏನು ತೆಗೆದುಕೊಂಡು ಹೋದರು ಎಂಬುದು ಗೊತ್ತಿಲ್ಲ ಎಂದು ಕಚೇರಿಯ ಸೆಕ್ಯುರಿಟಿ ಗಾರ್ಡ್‌ ತಿಳಿಸಿದ್ದಾರೆ. ಮತ್ತೊಂದೆಡೆ ಮನ್ಸೂರ್‌ ಅವರ ಕಾರು ಚಾಲಕನನ್ನು ಕೂಡ ವಿಚಾರಣೆ ನಡೆಸಲಾಗಿದೆ. ಆತ ತೆರಳುತ್ತಿದ್ದ ಸ್ಥಳಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಆತ ಜೂ.8ರಂದೇ ವಿದೇಶಕ್ಕೆ ಹಾರಿರಬಹದು ಎಂದು ಹೇಳಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಟರ್‌ ಇಕ್ಬಾಲ್‌ ಎಂಬುವರನ್ನು ಎಸ್‌ಐಟಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕಂಪನಿಯ ವ್ಯವಹಾರಗಳ ಆಡಿಟ್‌, ಐಟಿ ಇಲಾಖೆಗೆ ಸಲ್ಲಿಸುವ ವರದಿಗಳು, ಹಣ ಸಂಗ್ರಹ, ಹೂಡಿಕೆದಾರರಿಗೆ ಪ್ರತಿ ತಿಂಗಳು ಹಣ ಪಾವತಿ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಲ್ಲದೇ, ಮನ್ಸೂರ್‌ ನಗರದಲ್ಲಿ ಹೊಂದಿರುವ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಹೂಡಿಕೆ ಮಾಡಿದ್ದಾರೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಜಾರಿ ನಿರ್ದೇಶನಾಲಯ ಕೇಸ್‌

ವಂಚನೆಗೊಳಗಾದ ವ್ಯಕ್ತಿಯೊಬ್ಬರು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಮತ್ತು ಈ ಸಂಬಂಧ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಆಧಾರದ ಮೇಲೆ ಇ.ಡಿ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಶುಕ್ರವಾರ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ತೆರಳಿದ್ದ ಇ.ಡಿ ಅಧಿಕಾರಿಗಳ ತಂಡವೊಂದು, ಪ್ರಕರಣದ ಕುರಿತು ಲಭ್ಯವಿರುವ ಮಾಹಿತಿಯನ್ನು ಒದಗಿಸುವಂತೆ ಕೋರಿದ್ದರು. ಕೆಲವು ಮಾಹಿತಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ