ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ನಿರ್ಧಾರ ಸರಿ ಇದೆ. ಆದರೆ, ಮಾಧ್ಯಮವಾಗಿ ಇಂಗ್ಲಿಷ್ ಬೋಧನೆ ಮಾಡುವುದು ಸರಿಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
''ಸರಕಾರಿ ಶಾಲೆಗಳು ಅಳಿವಿನಂಚಿಗೆ ತಲುಪುತ್ತಿರುವ ಸಂದರ್ಭದಲ್ಲಿ ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಗುಣಮಟ್ಟದ ಇಂಗ್ಲಿಷ್ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸರಕಾರ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವತ್ತ ವಿಶೇಷ ಗಮನ ಹರಿಸಬೇಕು. ಇದರ ಹೊರತಾಗಿ ಮಂಗಳೂರು ಪ್ರವಾಸದ ವೇಳೆ, ಸರಕಾರಿ ಶಾಲೆಗಳಲ್ಲಿ ಅನುಮತಿ ಇಲ್ಲದೆ ಖಾಸಗಿಯವರಿಂದ ಇಂಗ್ಲಿಷ್ ಮಾಧ್ಯಮ ಬೋಧಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಒಪ್ಪಿಗೆ ನೀಡಿರುವ ಕುರಿತು ಮಾಹಿತಿ ಇಲ್ಲವೆಂದು ಅಲ್ಲಿನ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹೇಳಿದ್ದನ್ನು ಆಧರಿಸಿ ವರದಿ ನೀಡಲು ಸೂಚಿಸಿರುವೆ. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಪ್ರಾಥಮಿಕ ಶಿಕ್ಷಣ ಸಚಿವರಿಗೂ ಪತ್ರ ಬರೆದಿರುವೆ,'' ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
''ಸರಕಾರಿ ಶಾಲೆಗಳನ್ನು ಬಲಗೊಳಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕಾದ ಅಗತ್ಯ ಇದೆ. ಈಗಾಗಲೇ ಅಂಗನವಾಡಿಯಿಂದ ಹೊರಬರುವ ಮಕ್ಕಳು ಖಾಸಗಿ ಶಾಲೆಗಳ ಎಲ್ಕೆಜಿ/ಯುಕೆಜಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇಂತಹ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಸೆಳೆಯಲು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಬೇಕಿದೆ. ಇದರ ಜತೆಗೆ ಸರಕಾರಿ ಶಾಲೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ 2015ರ ಕನ್ನಡ ಭಾಷಾ ಕಲಿಕಾ ಅಧಿನಿಯಮವನ್ನು ಅನುಷ್ಠಾನಕ್ಕೆ ತರಬೇಕಿದೆ,'' ಎಂದು ಹೇಳಿದರು.