ಆ್ಯಪ್ನಗರ

ಪ್ರತಿ ಠಾಣೆಗೆ ಇಬ್ಬರು ಎಸ್‌ಐ ಕಡ್ಡಾಯ: ಗೃಹ ಸಚಿವ

ಪ್ರತಿ ಪೊಲೀಸ್‌ ಠಾಣೆಯಲ್ಲಿ ಕಾನೂನು -ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಸಬ್‌ ಇನ್ಸ್‌ಪೆಕ್ಟರ್‌ಗಳ ವ್ಯವಸ್ಥೆ ...

Vijaya Karnataka 1 Jun 2019, 5:00 am
ಬೆಂಗಳೂರು: ಪ್ರತಿ ಪೊಲೀಸ್‌ ಠಾಣೆಯಲ್ಲಿ ಕಾನೂನು -ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಸಬ್‌ ಇನ್ಸ್‌ಪೆಕ್ಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.
Vijaya Karnataka Web mbpatil


''ಕೆಲವೊಂದು ಠಾಣೆಗಳಲ್ಲಿ ಒಬ್ಬರೇ ಎಸ್‌ಐ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದು, ಇದನ್ನು ತಪ್ಪಿಸುವ ಸಂಬಂಧ ಕನಿಷ್ಟ ಇಬ್ಬರು ಎಸ್‌ಐಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

''ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿಗೆ ಈ ಪ್ರಕರಣಗಳ ತನಿಖೆಗೆ ಅಗತ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಹೊರ ರಾಜ್ಯ ಮತ್ತು ವಿದೇಶಗಳಲ್ಲಿನ ಹೊಸಹೊಸ ತನಿಖಾ ವಿಧಾನಗಳು ಹಾಗೂ ತಂತ್ರಜ್ಞಾನದ ಬಗ್ಗೆಯೂ ತರಬೇತಿ ನೀಡಲಾಗುವುದು'' ಎಂದು ಹೇಳಿದರು.

''ನಿರ್ಭಯ ಯೋಜನೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸಲು ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವನ್ನು ಕಲ್ಪಿಸಲಾಗುವುದು. ಸಿ.ಸಿ ಟಿ.ವಿ ಅಳವಡಿಕೆ ಜತೆಗೆ, ಸಿ.ಸಿ. ಟಿ.ವಿ ದೃಶ್ಯಗಳ ವಿಶ್ಲೇಷಣೆಗೂ ಒತ್ತು ನೀಡಲಾಗುವುದು. ಈ ಉದ್ದೇಶಕ್ಕೆ ಜಾಗತಿಕ ಮಟ್ಟದ ಸಂಸ್ಥೆಗಳ ಸಹಯೋಗ ಪಡೆಯಲು ನಿರ್ಧರಿಸಲಾಗಿದೆ'' ಎಂದರು.

ಔರಾದ್ಕರ್‌ ವರದಿ ಅನುಷ್ಠಾನ

''ಪೊಲೀಸ್‌ ಸಿಬ್ಬಂದಿಗೆ ವೇತನ, ಸವಲತ್ತುಗಳ ಹೆಚ್ಚಳ ಹಾಗೂ ಇಲಾಖಾ ಕಾರ್ಯವೈಖರಿ ಸುಧಾರಣೆಗೆ ಸಂಬಂಧಿಸಿದ ಔರಾದ್ಕರ್‌ ವರದಿಯನ್ನು ಜಾರಿ ಮಾಡಲು ಸರಕಾರ ಬದ್ಧವಾಗಿದೆ. ಈ ಸಂಬಂಧ ಮುಂದಿನ ವಾರದೊಳಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಪೊಲೀಸ್‌ ಸಿಬ್ಬಂದಿಯ ಬಹುದಿನಗಳ ನಿರೀಕ್ಷೆಗೆ ಸ್ಪಂದಿಸುವ ತೀರ್ಮಾನ ಪ್ರಕಟಿಸಲಾಗುವುದು'' ಎಂದು ಗೃಹ ಸಚಿವರು ಭರವಸೆ ನೀಡಿದರು.

ಸಮಗ್ರ ತನಿಖೆ

''ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಡಮ್ಮಿ ಗ್ರೆನೇಡ್‌ ಪತ್ತೆಯಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ'' ಎಂದು ಎಂ.ಬಿ.ಪಾಟೀಲ್‌ ತಿಳಿಸಿದರು.

''ಗ್ರೆನೇಡ್‌ನಲ್ಲಿ ಯಾವುದೇ ಸ್ಫೋಟಕಗಳು ಇರಲಿಲ್ಲ. ಆದರೆ, ಇದು ಎಲ್ಲಿಂದ, ಹೇಗೆ ಬಂತು, ಯಾರು ತಂದಿಟ್ಟರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ