ಆ್ಯಪ್ನಗರ

ಭಾರತದಿಂದಲೇ ರಿಲಯನ್ಸ್ ಪ್ರಸ್ತಾಪ: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡೆ ಸ್ಫೋಟಕ ಹೇಳಿಕೆ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡೆ ನೀಡಿರುವ ಹೇಳಿಕೆಯು ಭಾರತೀಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನಕ್ಕೆ ಕಾರಣವಾಗಿದೆ.

Vijaya Karnataka 22 Sep 2018, 7:22 am
ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡೆ ನೀಡಿರುವ ಹೇಳಿಕೆಯು ಭಾರತೀಯ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನಕ್ಕೆ ಕಾರಣವಾಗಿದೆ.
Vijaya Karnataka Web rafel


ಡಸಾಲ್ಟ್‌ ಮತ್ತು ರಿಲಯನ್ಸ್‌ ನಡುವಿನ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ವಾಣಿಜ್ಯತ್ಮಾಕ ಒಡಂಬಡಿಕೆಯಾಗಿದೆ. ಇದರಲ್ಲೇನೂ ತನ್ನ ಪಾತ್ರವಿಲ್ಲ ಎಂದು ಕೇಂದ್ರ ಸರಕಾರ ಈವರೆಗೆ ಹೇಳಿಕೊಂಡು ಬಂದಿತ್ತು. ಆದರೆ, ಹೊಲಾಂಡೆ ಅವರು, ''ರಿಲಯನ್ಸ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಹೆಸರನ್ನು ಭಾರತ ಸರಕಾರವೇ ಪ್ರಸ್ತಾಪಿಸಿತ್ತು'' ಎಂದು ಹೇಳಿರುವುದು ಭಾರತೀಯ ಪ್ರತಿಪಕ್ಷ ಗಳಿಗೆ ಹೊಸ ಅಸ್ತ್ರ ನೀಡಿದಂತಾಗಿದೆ. ಆದರೆ, ಈ ಹೇಳಿಕೆಯನ್ನು ಭಾರತೀಯ ರಕ್ಷ ಣಾ ಇಲಾಖೆಯು ತಳ್ಳಿ ಹಾಕಿದೆ. ''ರಫೇಲ್‌ ಯುದ್ಧ ವಿಮಾನ ತಯಾರಿಸುವ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ಗೆ ಸ್ಥಳೀಯ ಪಾಲುದಾರರನ್ನಾಗಿ ಯಾರನ್ನು ಸೇರಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುವಾಗಲೇ ಭಾರತ ಸರಕಾರವು ರಿಲಯನ್ಸ್‌ ಡಿಫೆನ್ಸ್‌ ಇಂಡಸ್ಟ್ರೀಸ್‌ ಹೆಸರು ಪ್ರಸ್ತಾಪಿಸಿತು. ಆ ಬಳಿಕ ಅದನ್ನು ಬಿಟ್ಟು ಬೇರೆ ಕಂಪನಿಗಳನ್ನು ಪರಿಗಣಿಸಲು ನಮಗೆ ಆಯ್ಕೆಗಳೇ ಇಲ್ಲದಂತಾಯಿತು,'' ಎಂದು ಹೊಲಾಂಡೆ ಹೇಳಿರುವುದಾಗಿ ಫ್ರಂಚ್‌ ಪತ್ರಿಕೆಗಳು ವರದಿ ಮಾಡಿವೆ. ಹೊಲಾಂಡೆ ಅವರು ಈ ಹೇಳಿಕೆಯಿಂದ ಈಗ ಕೇಂದ್ರ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಈ ಬಗ್ಗೆ ಈ ವರೆಗೂ ಭಾರತ ಸರಕಾರ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಏತನ್ಮಧ್ಯೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸರಕಾರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ರಿಲಯನ್ಸ್‌ ಪಾತ್ರವೇನು?: ಡಸಾಲ್ಟ್‌ ಪಾರ್ಟ್ನರ್‌ನೊಂದಿಗೆ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯು ರಫೇಲ್‌ ವಿಮಾನಗಳ ನಿರ್ವಹಣೆ ಮಾಡಲಿದೆ. ಒಪ್ಪಂದದ ಪ್ರಕಾರ, ಡಸ್ಸಾಲ್ಟ್‌ ಕಂಪನಿ ಸ್ಥಳೀಯವಾಗಿ ಯಾವುದೇ ರಕ್ಷ ಣಾ ಸಂಬಂಧಿ ಕಂಪನಿ ಜತೆ ಒಡಂಬಡಿಕೆ ಮಾಡಿಕೊಳ್ಳಬಹುದಿತ್ತು. ಅಂತಿಮವಾಗಿ ಅದು ರಿಲಯನ್ಸ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ಮೊದಲು ಅದು ಎಚ್‌ಎಎಲ್‌ ಜತೆ ವ್ಯವಹರಿಸಬೇಕಿತ್ತು. ಆದರೆ ಬದಲಾದ ಒಪ್ಪಂದದಲ್ಲಿ ಅದು ರಿಲಯನ್ಸ್‌ ಜತೆ ಪಾರ್ಟನರ್‌ಶಿಫ್‌ ಮಾಡಿಕೊಂಡಿದೆ.

ರಫೇಲ್‌ ಒಪ್ಪಂದದಲ್ಲಿ ನಿರ್ದಿಷ್ಟ ಕಂಪನಿಯೊಂದನ್ನು ಸೇರಿಸಲು ಭಾರತ ಸರಕಾರ ಸೂಚಿಸಿತ್ತು ಎಂಬ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡೆ ಅವರ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಈ ವಾಣಿಜ್ಯಾತ್ಮಕ ಒಡಂಬಡಿಕೆ ಬಗ್ಗೆ ಭಾರತ ಸರಕಾರವಾಗಲಿ ಅಥವಾ ಫ್ರಾನ್ಸ್‌ ಸರಕಾರವಾಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
- ಭಾರತೀಯ ರಕ್ಷ ಣಾ ಇಲಾಖೆ

ಪ್ರಧಾನಿ ಮೋದಿ ಅವರು ರಫೇಲ್‌ ಡೀಲ್‌ಗೆ ಗುಪ್ತವಾಗಿ ವೈಯಕ್ತಿಕ ಬದಲಾವಣೆಗಳನ್ನು ತಂದಿದ್ದಾರೆ. ನಷ್ಟದಲ್ಲಿದ್ದ ಅನಿಲ್‌ ಅಂಬಾನಿ ಅವರಿಗೆ ಕೋಟಿ ಕೋಟಿ ಮೌಲ್ಯದ ಡೀಲ್‌ ಹೇಗೆ ಸಿಕ್ಕಿತೆಂದು ಹೊಲಾಂಡೆ ಈಗ ಬಯಲು ಮಾಡಿದ್ದಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಹೊಲಾಂಡೆ ಹೇಳಿಕೆಯು ಮೋದಿ ಇದುವರೆಗೂ ನೀಡುತ್ತಿದ್ದ ಹೇಳಿಕೆಗೆ ತದ್ವಿರುದ್ಧವಾಗಿದೆ. ರಫೇಲ್‌ ಡೀಲ್‌ ಬಗ್ಗೆ ಮಹತ್ವದ ಮಾಹಿತಿ ಮುಚ್ಚಿಡುವ ಮೂಲಕ ಮೋದಿ ಸರಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿಲ್ಲವೇ?
- ಅರವಿಂದ್‌ ಕೇಜ್ರಿವಾಲ್‌, ದಿಲ್ಲಿ ಸಿಎಂ

ಭಾರತದ ರಕ್ಷಣಾ ಸಚಿವರ ಸುಳ್ಳನ್ನು ಈ ಬಾರಿ ಫ್ರಾನ್ಸ್‌ ಮಾಜಿ ಅಧ್ಯಕ್ಷರು ಬಯಲು ಮಾಡಿದ್ದಾರೆ.
- ಪಿ. ಚಿದಂಬರಂ, ಮಾಜಿ ಕೇಂದ್ರ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ