ಆ್ಯಪ್ನಗರ

ವೋಟ್‌ ಕೇಳೋಕೆ ನಕಲಿ ಬಾಂಡ್‌ ವಿತರಿಸಿ ಟೋಪಿ

ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರಿಗೆ ಮತಹಾಕಲು ಅಪರಿಚಿತ ಇಬ್ಬರು ವ್ಯಕ್ತಿಗಳು ಮತದಾರರಿಗೆ ನೀಡಿದ 6 ಸಾವಿರ ಬಾಂಡ್‌ಗಳು ನಕಲಿ!

Vijaya Karnataka 30 May 2018, 10:55 am
-ಆರ್‌.ಶ್ರೀಧರ್‌ ಚಿಕ್ಕಬಳ್ಳಾಪುರ
Vijaya Karnataka Web bond


ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೊಬ್ಬರಿಗೆ ಮತಹಾಕಲು ಅಪರಿಚಿತ ಇಬ್ಬರು ವ್ಯಕ್ತಿಗಳು ಮತದಾರರಿಗೆ ನೀಡಿದ 6 ಸಾವಿರ ಬಾಂಡ್‌ಗಳು ನಕಲಿ!

ಮೇ 25ರಂದು 10 ಸಾವಿರ ರೂ. ಸಿಗಲಿದೆ ಎಂದು ಚುನಾವಣೆ ಪೂರ್ವದಲ್ಲಿ ಸಕ್ರಿಯವಾಗಿದ್ದ ಈ ಅಪರಿಚಿತರು ಹೇಳಿದ್ದರು. ಆದರೆ ಬಾಂಡ್‌ ಪಡೆದ ಬಾಗೇಪಲ್ಲಿ ಕ್ಷೇತ್ರದ ವಡ್ಡರಪಾಳ್ಯದ ಮತದಾರರು ಬಾಂಡ್‌ನ ಅಸಲಿಯತ್ತು ಪರೀಕ್ಷೆಗೆ ಮುಂದಾದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಬಾಂಡ್‌ ಮೇಲಿನ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಕೂಡಾ ಬೋಗಸ್‌ ಎಂಬುದು ತಿಳಿದು ಬಂದಿತು.

ಬಾಗೇಪಲ್ಲಿ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕುವಂತೆ ಆರ್‌.ಮುನಿರಾಜು, ರಾಮಚಂದ್ರಪ್ಪ ಎಂಬುವವರು ಏಪ್ರಿಲ್‌ 9ರಂದು ಬಾಂಡ್‌ ವಿತರಿಸಿದ್ದರು ಎನ್ನಲಾಗಿದೆ. 10 ಸಾವಿರ ರೂ. ಮುಖಬೆಲೆ ಹೊಂದಿರುವ ಬಾಂಡ್‌ಗಳಿಂದ ಮೇ.25ರಂದು ಹಣ ಡ್ರಾ ಮಾಡಿಕೊಳ್ಳಬಹುದು ಎಂದು ನಂಬಿಸಲಾಗಿತ್ತು. ಬಾಂಡ್‌ ಪಡೆದವರಿಗೆ 10 ಸಾವಿರ ರೂ. ಹಣ ಜಮೆಯಾಗಲಿದ್ದು, ಕನಿಷ್ಟ 100 ಜನರಿಗೆ ಈ ಬಾಂಡ್‌ ವಿತರಿಸಿದರೆ, 5 ಲಕ್ಷ ರೂ.ಗಳ ಇನ್ನೊಂದು ಬಾಂಡ್‌ ನೀಡಲಾಗುವುದು ಎಂಬ ಆಮಿಷವೊಡ್ಡಿ ಮತ ಯಾಚಿಸಲಾಗಿತ್ತು.

'ಪ್ರಾರ್ಥನ ಪತ್ತಿನ ಸಹಕಾರ ಸಂಘ'ದ ಹೆಸರಿನಲ್ಲಿ ಪಡೆದ ಬಾಂಡ್‌ಗಳನ್ನು ಚುನಾವಣೆ ನಂತರ ಬಾಗೇಪಲ್ಲಿ ಕ್ಷೇತ್ರದ ವಡ್ಡರಹಳ್ಳಿಯ ಮತದಾರರು ನಗದು ಮಾಡಿಕೊಳ್ಳಲು ಹೋದಾಗ, ಆ ವಿಳಾಸದಲ್ಲಿ ಕಂಪನಿಯೇ ಇಲ್ಲ ಮತ್ತು ದೂರವಾಣಿ ಸಂಖ್ಯೆಗಳು ಬಂದ್‌ ಆಗಿದ್ದರಿಂದ ಬರಿಗೈಲಿ ಹಿಂದಿರುಗಿದ್ದಾರೆ.

ಮೋಸ ಹೋದವರ ಹಿಡಿಶಾಪ

ಬಾಂಡ್‌ ವಿತರಿಸಿದವರು ಕಾಂಗ್ರೆಸ್‌ ಅಭ್ಯರ್ಥಿ ಸುಬ್ಬಾರೆಡ್ಡಿ ಅವರಿಗೆ ಮತ ಹಾಕುವಂತೆ ತಿಳಿಸಿದ್ದರು ಎನ್ನಲಾಗಿದೆ. ಅವರ ಸ್ಪಷ್ಟನೆ ಪಡೆಯಲು ಶಾಸಕ ಸುಬ್ಬಾರೆಡ್ಡಿ ಅವರಿಗೆ 'ವಿಕ' ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಾಂಡ್‌ ವಿತರಿಸಿದ ಇಬ್ಬರ ಪೂರ್ವಾಪರ ಜನರಿಗೆ ಗೊತ್ತಿಲ್ಲ. ಹೀಗಾಗಿ ಜನರನ್ನು ಪರಿಚಯಿಸಿದವರ ಮನೆ ಮುಂದೆ ಕೆಲವರು ನಕಲಿ ಬಾಂಡ್‌ಗಳನ್ನು ಹಿಡಿದು ಕೂಗಾಡುತ್ತಿದ್ದಾರೆ.

ದೂರು ನೀಡಲಾಗಿತ್ತು: ಚುನಾವಣೆ ವೇಳೆಯೇ ಆರ್‌ಟಿಐ ಕಾರ‍್ಯಕರ್ತ ನಂದಿ ಪುರುಷೋತ್ತಮ್‌ ಸುದ್ದಿಗೋಷ್ಠಿ ನಡೆಸಿ, ಬಾಂಡ್‌ವಿತರಣೆ ಬಗ್ಗೆ 'ನೀತಿ ಸಂಹಿತೆ ಉಲ್ಲಂಘನೆ' ಎಂದು ಆರೋಪಿಸಿ, ಚುನಾವಣಾಧಿಕಾರಿಗಳಿಗೆ ದೂರನ್ನೂ ನೀಡಿದ್ದರು.

ನಾನು ವಾಟ್ಸ್‌ಆ್ಯಪ್‌ನಲ್ಲಿ ಈ ಬಗ್ಗೆ ನೋಡಿದೆ. ನೀತಿ ಸಂಹಿತೆ ಇದ್ದಾಗ ಯಾರೂ ದೂರು ನೀಡಿಲ್ಲ. ಅಂದು ದೂರು ನೀಡಿದ್ದರೆ, ಟ್ರಸ್ಟ್‌ ವಿರುದ್ಧ ಕ್ರಮ ಜರುಗಿಸಬಹುದಾಗಿತ್ತು. ಮೌಖಿಕವಾಗಿ ಹೇಳಿದ್ದರೂ ಸಾಕ್ಷಿಗಳು ದೊರೆತಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಗಮನಕ್ಕೆ ತರುತ್ತೇನೆ.

-ಜಗದೀಶ್‌ ಗಂಗಣ್ಣನವರ್‌, ಚುನಾವಣಾಧಿಕಾರಿ ಬಾಗೇಪಲ್ಲಿ


ನಕಲಿ ಬಾಂಡ್‌ ವಿತರಿಸಿ ರೈತರಿಗೆ ಮೋಸ ಮಾಡಿದ್ದಾರೆ. ಮೋಸ ಹೋದ ಎಲ್ಲರಿಗೂ ಹಣ ನೀಡಬೇಕು. ಈಗ ಕ್ಷೇತ್ರಕ್ಕೆ ಹೊಸದಾಗಿ ನ್ಯಾಯಸಮ್ಮತ ಚುನಾವಣೆ ನಡೆಸಬೇಕು.

-ನಂದಿ ಪುರುಷೋತ್ತಮ್‌, ಆರ್‌ಟಿಐ ಕಾರ‍್ಯಕರ್ತ


ಯಾರೋ ಇಬ್ಬರು ಬಂದು ಬಾಂಡ್‌ ಕೊಟ್ಟು ಸುಬ್ಬಾರೆಡ್ಡಿಗೆ ಮತ ಹಾಕಿ. ಇನ್ನು 100 ಜನರಿಗೆ ಬಾಂಡ್‌ ಕೊಟ್ಟು ಮತ ಹಾಕಿಸಿದರೆ, 5 ಲಕ್ಷ ರೂ.ಗಳ ಇನ್ನೊಂದು ಬಾಂಡ್‌ ಕೊಡುವುದಾಗಿ ಹೇಳಿದರು. ಅದನ್ನು ನಂಬಿ ನಾವೂ 100 ಜನಕ್ಕೆ ಬಾಂಡ್‌ ವಿತರಿಸಿದ್ದೇವೆ.

-ಅಶ್ವತ್ಥಪ್ಪ, ವಡ್ಡರಪಾಳ್ಯ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ