ಆ್ಯಪ್ನಗರ

ಕೆಎಸ್‌ಆರ್‌ಪಿ, ಐಆರ್‌ಬಿ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು; ನಾಲ್ವರ ಬಂಧನ

ಕೆಎಸ್ಆರ್​ಪಿ, ಐಆರ್​ಬಿ ಕಾನ್ಸ್​ಟೇಬಲ್​ಗಳ ನೇಮಕಾತಿ ಪರೀಕ್ಷೆಯ ವೇಳೆ ಬೆಂಗಳೂರಿನಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಒಬ್ಬ ಪೊಲೀಸ್ ಕಾನ್ಸ್​ಟೆಬಲ್ ಆಗಿರುವುದು ಬೆಳಕಿಗೆ ಬಂದಿದೆ.

Vijaya Karnataka Web 23 Nov 2020, 1:29 pm
ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಮತ್ತು ಇಂಡಿಯನ್‌ ರಿಸರ್ವ್ ಬೆಟಾಲಿಯನ್‌ (ಐಆರ್‌ಬಿ) ಕಾನ್ಸ್‌ಟೆಬಲ್‌ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಬಂದಿದ್ದ ನಾಲ್ವರು ನಕಲಿ ಅಭ್ಯರ್ಥಿಗಳು, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ನಕಲಿ ಅಭ್ಯರ್ಥಿಗಳ ಪೈಕಿ ಈಗಾಗಲೇ ಸೇವೆಯಲ್ಲಿರುವ ಒಬ್ಬ ಕಾನ್ಸ್ಟೇಬಲ್‌ ಕೂಡ ಸೇರಿದ್ದಾರೆ. ನಾಲ್ವರ ವಿರುದ್ಧ ಎರಡು ಠಾಣೆಗಳಲ್ಲಿ ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿವೆ. ಹಾಲಪ್ಪ ಹಲ್ಲೂರು ಎಂಬ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆದ ಚಿಕ್ಕಮಗಳೂರಿನ ಶೃಂಗೇರಿ ಠಾಣೆಯ ಕಾನ್ಸ್‌ಟೆಬಲ್‌ ನಾಗಪ್ಪ ಪಿ.ಟಿ. ಹಾಗೂ ಹನುಮಂತ ವಗ್ಗಣನವರ್‌ ಪರವಾಗಿ ಪರೀಕ್ಷೆ ಬರೆದ ಮಲ್ಲಿಕಾರ್ಜನ ಸೇರಿ ನಾಲ್ವರ ಬಂಧನವಾಗಿದೆ.

ರಾಜಾಜಿನಗರದಲ್ಲಿರುವ ಎಸ್‌ಜೆಆರ್‌ಸಿ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯಾದ ಹನುಮಂತ ವಗ್ಗಣನವರ್‌ ಪರವಾಗಿ ಪರೀಕ್ಷೆ ಬರೆದ ಮಲ್ಲಿಕಾರ್ಜುನ ಎಂಬುವರನ್ನು ಮತ್ತು ಚನ್ನಸಂದ್ರದಲ್ಲಿರುವ ಜೆಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಹಾಲಪ್ಪ ಹಲ್ಲೂರು ಪರವಾಗಿ ಪೊಲೀಸ್‌ ಠಾಣೆಯ ಕಾನ್ಸ್‌ಟೆಬಲ್‌ ನಾಗಪ್ಪ ಪಿ.ಟಿ. ಎಂಬಾತ ಪರೀಕ್ಷೆಗೆ ಕುಳಿತಿದ್ದ.

ಅಭ್ಯರ್ಥಿಗಳ ಕುರಿತು ಅನುಮಾನಗೊಂಡ ಪರೀಕ್ಷೆ ಕೊಠಡಿ ಮೇಲ್ವಿಚಾರಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಭ್ಯರ್ಥಿಗಳ ಗುರುತಿನ ಚೀಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ನಕಲಿ ಅಭ್ಯರ್ಥಿಗಳು ಎಂದು ಗೊತ್ತಾಗಿದೆ. ಅಕ್ರಮವಾಗಿ ಪರೀಕ್ಷೆ ಬರೆಯುವ ಜಾಲದ ಪ್ರಮುಖ ಕೇಂದ್ರ ಬೆಳಗಾವಿ ಜಿಲ್ಲೆಯ ಗೋಕಾಕ್‌ ಆಗಿದೆ ಎಂದು ತಿಳಿದು ಬಂದಿದ್ದು, ಜಾಲದ ಕುರಿತು ತನಿಖೆ ನಡೆಸಲಾಗುತ್ತಿದೆ.
ಬಾಗಲಕೋಟೆ: ಕಾನ್ಸಟೇಬಲ್ ಲಿಖಿತ ಪರೀಕ್ಷೆಯಲ್ಲಿ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದಾತನ ಬಂಧನ

ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳ ಹೆಸರಿನಲ್ಲಿ ಗಾಂಧಿನಗರದಲ್ಲಿ ಬುಕ್‌ ಮಾಡಲಾಗಿದ್ದ ಹೋಟೆಲ್‌ ಕೊಠಡಿಯಲ್ಲಿ ಶೋಧ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ. ಪಾಟೀಲ್‌ ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆದಿದ್ದು, ಬೆಂಗಳೂರಿನಲ್ಲಿ ಎಂಟು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಬೆಳಗ್ಗೆ 11 ರಿಂದ 12.30ರ ನಡುವೆ ಪರೀಕ್ಷೆ ನಡೆಸಲಾಗಿದೆ.

ಬಸವನಗುಡಿಯಲ್ಲಿ ಇಬ್ಬರ ಬಂಧನ

ಚನ್ನಸಂದ್ರ ಮತ್ತು ರಾಜಾಜಿನಗರ ಪರೀಕ್ಷಾ ಕೇಂದ್ರದಲ್ಲಿ ಸಿಕ್ಕಿ ಬಿದ್ದ ಅಭ್ಯರ್ಥಿಗಳು ನೀಡಿದ ಮಾಹಿತಿ ಆಧರಿಸಿ ಬಸವನಗುಡಿ ಮಹಿಳಾ ಪಿಯು ಕಾಲೇಜಿನಲ್ಲಿ ತಪಾಸಣೆಗೆ ಬಂದಾಗ ಪರೀಕ್ಷೆ ಬರೆದು ಹೊರಗೆ ಬಂದಿದ್ದ ಲಕ್ಷ್ಮಣ ಮತ್ತು ಸೋಮಯ್ಯ ಎಂಬುವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ