ಆ್ಯಪ್ನಗರ

ಮುಗಿಯದ ಭಿನ್ನಮತ, ಅತೃಪ್ತರಿಗೆ ಯಡಿಯೂರಪ್ಪ ಖಡಕ್‌ ಎಚ್ಚರಿಕೆ

'ಪಕ್ಷ ಹಾಕಿದ ಗೆರಯನ್ನು ದಾಟಬೇಡಿ, ಇಲ್ಲವೇ ಸಚಿವರಾಗುವ ಅವಕಾಶವನ್ನು ಕಳೆದುಕೊಳ್ಳಿ' ಎಂಬುದಾಗಿ ಶಾಸಕರಾದ ಗೂಳಿಹಟ್ಟಿ ಶೇಖರ್‌ ಮತ್ತು ತಿಪ್ಪಾರೆಡ್ಡಿಯವರಿಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

TIMESOFINDIA.COM 29 Aug 2019, 12:30 pm
ಬೆಂಗಳೂರು: ಇನ್ನೂ ಹೊಗೆಯಾಡುತ್ತಿರುವ ಭಿನ್ನಮತಕ್ಕೆ ನೀರೆರಚಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅತೃಪ್ತರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಬುಧವಾರ ತಮ್ಮನ್ನು ಭೇಟಿಯಾದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಮತ್ತು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿಯವರಿಗೆ ಪಕ್ಷದ ಶಿಸ್ತನ್ನು ಪಾಲಿಸುವಂತೆ ಅವರು ಸೂಚಿಸಿದ್ದಾರೆ.
Vijaya Karnataka Web BS Yediyurappa


'ಪಕ್ಷ ಹಾಕಿದ ಗೆರಯನ್ನು ದಾಟಬೇಡಿ, ಇಲ್ಲವೇ ಸಚಿವರಾಗುವ ಅವಕಾಶವನ್ನು ಕಳೆದುಕೊಳ್ಳಿ' ಎಂದು ಗೂಳಿಹಟ್ಟಿ ಶೇಖರ್‌ ಮತ್ತು ತಿಪ್ಪಾರೆಡ್ಡಿಯವರಿಗೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನೀವು ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳುವುದು ಉತ್ತಮ ಮತ್ತು ನಿಮ್ಮ ಸರದಿಗಾಗಿ ಕಾಯುವುದು ಸೂಕ್ತ,” ಎಂಬುದಾಗಿ ಮುಖ್ಯಮಂತ್ರಿ ಇಬ್ಬರಿಗೂ ಸೂಚಿಸಿದ್ದಾರಂತೆ.

ಇದಕ್ಕೆ ಪೂರಕವಾಗಿ ಭೇಟಿ ನಂತರ, ಸಂಪುಟದಲ್ಲಿ ಅವಕಾಶ ಸಿಗದ್ದಕ್ಕೆ ತಮಗೇನೂ ಬೇಜಾರಿಲ್ಲ ಎಂಬ ಅರ್ಥದಲ್ಲಿ ತಿಪ್ಪರಾಜು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. “ಹೈಕಮಾಂಡ್‌ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಯಡಿಯೂರಪ್ಪ ನಾಯಕತ್ವದಲ್ಲಿ ನಮಗೆ ವಿಶ್ವಾಸವಿದೆ,'' ಎಂಬುದಾಗಿ ಅವರು ಅಸಮಧಾನ ತಣ್ಣಗಾಗಿರುವ ಸೂಚನೆ ನೀಡಿದ್ದಾರೆ.

ಆದರೆ ಇನ್ನೋರ್ವ ಅತೃಪ್ತ ನಾಯಕ, 8 ಬಾರಿಯ ಶಾಸಕ ಉಮೇಶ್‌ ಕತ್ತಿ ಮಾತ್ರ ಭುಸುಗುಡುತ್ತಲೇ ಇರುವಂತಿದೆ. ಲಕ್ಷಣ ಸವದಿಗೆ ಡಿಸಿಎಂ ಪಟ್ಟ ಕೊಟ್ಟಿರುವುದರಿಂದ ಮತ್ತಷ್ಟು ಕೆರಳಿರುವ ಕತ್ತಿ ಬೆಳಗಾವಿಯ ಅರ್ಧ ಡಜನ್‌ಗೂ ಹೆಚ್ಚು ಶಾಸಕರ ಗುಂಪು ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಒಂದೆರಡು ದಿನ ಕಾದು ನಂತರ ಯಡಿಯೂರಪ್ಪನವರನ್ನು ಭೇಟಿಯಾಗಿ ಬೇಡಿಕೆ ಇಡೇರಿಕೆ ಬಗ್ಗೆ ಸ್ಪಷ್ಟನೆ ಪಡೆಯಲು ಕತ್ತಿ ನಿರ್ಧಸಿದ್ದಾರೆ.

ಆದರೆ, ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಕತ್ತಿ ಬೆಳವಣಿಗೆಯನ್ನು ಅಲ್ಲಗಳೆದಿದ್ದಾರೆ. “ನಾನು ಹಾವೇರಿಯ ತೋಟದ ಮನೆಯಲ್ಲಿದ್ದು, ನನಗೆ ಈ ಬೆಳವಣಿಗೆ ಬಗ್ಗೆ ಗೊತ್ತಿಲ್ಲ,” ಎಂಬುದಾಗಿ ಅವರು ಜಾರಿಕೊಂಡಿದ್ದಾರೆ. “ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದು ಯಾವಾಗ ಆಗುತ್ತದೆ ಎಂದು ನನಗೆ ಗೊತ್ತಿಲ್ಲ. ನಾನು ಈಗ ಈ ಬಗ್ಗೆ ಕನಿಷ್ಠ ಗಮನವನ್ನೂ ಕೊಡುತ್ತಿಲ್ಲ,” ಎಂದಿದ್ದಾರೆ. ಈ ಹೇಳಿಕೆ ಮೂಲಕವೇ ಅವರು ತಮ್ಮ ಅಸಮಧಾನವನ್ನು ತೆರೆದಿಟ್ಟಿದ್ದಾರೆ.

ಇದೇ ವೇಳೆ ಶ್ರೀರಾಮುಲು ಬೆಂಬಲಿಗರು ತಮ್ಮ ನಾಯಕನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿ, ಚಿತ್ರದುರ್ಗ, ರಾಯಚೂರಿನಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆ ಕೈ ಬಿಡುವಂತೆ ರಾಮುಲು ಮಾಡಿದ ಮನವಿಗೆ ಬೆಂಬಲಿಗರು ಇನ್ನೂ ಸ್ಪಂದಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ