ಬೆಂಗಳೂರು: ''ಭ್ರಷ್ಟಾಚಾರಕ್ಕೆ ಸಂಬಂಧಿಸಿ ಹಲವು ದೂರುಗಳನ್ನು ನೀಡಿದ್ದೆ. ಆದರೆ, ಯಾವೊಂದು ಪ್ರಕರಣದಲ್ಲೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಸಾಕ್ಷಿ ಇಲ್ಲ, ಅಧಿಕಾರಿಗಳು ತಪ್ಪು ಮಾಡಿಲ್ಲ ಎಂದು ಹೇಳಿ ಪ್ರಕರಣ ಮುಕ್ತಾಯ ಮಾಡಿದ್ದರು. ಇದರಿಂದ ನನಗೆ ತೀರಾ ಬೇಸರವಾಗಿತ್ತು. ಲೋಕಾಯುಕ್ತರ ಬಳಿ ಇದ್ದ ಪ್ರಕರಣದಲ್ಲಾದರೂ ಕ್ರಮ ಕೈಗೊಳ್ಳುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಅವರು ಕೂಡಾ ವಿಚಾರಣೆ ನಡೆಸೋಣಾ, ನೋಡೋಣ ಎಂದು ಹೇಳಿ ಕಳುಹಿಸುತ್ತಿದ್ದರು. ನಾನು ಅವರನ್ನು ಖುದ್ದಾಗಿ ಮೂರು ಬಾರಿ ಭೇಟಿ ಮಾಡಿ ಭ್ರಷ್ಟಾಚಾರದ ದೂರುಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದೆ. ಆದರೆ, ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಕುಪಿತಗೊಂಡು ಚಾಕುವಿನಿಂದ ಇರಿದಿದ್ದೇನೆ,'' ಎಂದು ತೇಜ್ರಾಜ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಲೋಕಾಯುಕ್ತ ನ್ಯಾಯಮೂರ್ತಿ ಕೊಠಡಿಯಲ್ಲಿ ಎರಡು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ ಒಳಗೆ ಕಂಪ್ಯೂಟರ್ ಪರದೆ ಮೇಲೆ ಹೊರಗೆ ಇರುವವರು ಹಾಗೂ ಒಳಗೆ ಬಂದವರನ್ನು ಕೂಡ ನೋಡಬಹುದಾಗಿದೆ. ಹೀಗಾಗಿ, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಮೂಲಗಳ ಪ್ರಕಾರ ಘಟನೆ ವೇಳೆ ಸಿಸಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿದ್ದು, ಕೃತ್ಯ ಸೆರೆಯಾಗಿದೆ.
ಬುಧವಾರದಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ತೇಜರಾಜ್ ಶರ್ಮಾ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ. ಈ ಘಟನೆ ಸಾರ್ವಜನಕ ವಲಯದಲ್ಲಿ ಭಾರೀ ಚರ್ಚೆಗೆ ಕೂಡಾ ಗ್ರಾಸವಾಗಿತ್ತು.