ಆ್ಯಪ್ನಗರ

ಪ್ರವಾಹ ಹಿನ್ನೆಲೆ, ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲು ಸಚಿವರಿಗೆ ಸಿಎಂ ಸೂಚನೆ

ಪ್ರವಾಹ ಇದ್ದರೂ ಉಸ್ತುವಾರಿ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಆಕ್ಷೇಪವಿದೆ. ಪ್ರತಿಪಕ್ಷದವರು ಇದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಉಸ್ತುವಾರಿ ಸಚಿವರು ಕಾಳಜಿ ವಹಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು ಎನ್ನಲಾಗಿದೆ.

Vijaya Karnataka 22 Oct 2020, 9:21 pm
ಬೆಂಗಳೂರು : ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ತುರ್ತು ಪರಿಹಾರ ಒದಗಿಸಲು ಮುತುವರ್ಜಿ ವಹಿಸುವಂತೆ ಉಸ್ತುವಾರಿ ಸಚಿವರುಗಳಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಸೂಚಿಸಿದ್ದಾರೆ.
Vijaya Karnataka Web BS Yediyurappa


ಸಂಪುಟ ಸಭೆಯಲ್ಲಿ ಪ್ರಾಸಂಗಿಕವಾಗಿ ಈ ವಿಚಾರ ಪ್ರಸ್ತಾಪಿಸಿದ ಅವರು, ಪ್ರವಾಹ ಬಂದಿದ್ದರೂ ಉಸ್ತುವಾರಿ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಆಕ್ಷೇಪವಿದೆ. ಪ್ರತಿಪಕ್ಷದವರು ಇದನ್ನೇ ಅಸ್ತ್ರ ಮಾಡಿಕೊಂಡು ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಉಸ್ತುವಾರಿ ಸಚಿವರು ಕಾಳಜಿ ವಹಿಸಬೇಕು. ಜಿಲ್ಲೆಗಳಲ್ಲೇ ವಾಸ್ತವ್ಯ ಹೂಡಬೇಕು ಎಂಬ ನಿರ್ದೇಶನ ಕೊಟ್ಟರು ಎನ್ನಲಾಗಿದೆ.

ಈ ಮಧ್ಯೆ ಆಡಳಿತ ಪಕ್ಷದ ಶಾಸಕರು ಕೂಡ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿಲ್ಲ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುತ್ತಿಲ್ಲ ಎಂಬ ದೂರು ಬರುತ್ತಿದೆ. ಹಾಗಾಗಿ ಶಾಸಕರನ್ನೂ ಜೊತೆಗೆ ಕರೆದೊಯ್ಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾಉಸ್ತುವಾರಿ ಸಚಿವರು ಸಮನ್ವಯ ಕೈಗೊಳ್ಳಬೇಕು ಎಂಬ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ.

ಪ್ರವಾಹ ಸಂಕಷ್ಟ: ಸೂಕ್ತ ಪರಿಹಾರ ಕಲ್ಪಿಸಲು ಕ್ರಮ, ಬಿಎಸ್‌ವೈ ಭರವಸೆ
ಕೆರಳಬೇಡಿ

ಪ್ರವಾಹ ನಿರ್ವಹಣೆ ಸಂಬಂಧದಲ್ಲಿ ಸರಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಈಗ ಉಪ ಚುನಾವಣೆಯೂ ಇರುವುದರಿಂದ ಎಚ್ಚರಿಕೆ ಹೆಜ್ಜೆಯಿರಿಸಬೇಕು. ಅವರು ಕೆಣಕಿದರೂ ಕೆರಳಬಾರದು ಎಂದು ಸಿಎಂ ಸೂಚನೆ ಕೊಟ್ಟರು ಎನ್ನಲಾಗಿದೆ.

ಉಪ ಚುನಾವಣೆಯೂ ಮುಖ್ಯ

ಎರಡು ಕ್ಷೇತ್ರಗಳ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಚುನಾವಣೆ ಫಲಿತಾಂಶದಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಆದರೆ, ಆಡಳಿತ ಪಕ್ಷದ ಅಭ್ಯರ್ಥಿಗಳ ಪರ ಎಲ್ಲರೂ ಕೆಲಸ ಮಾಡಬೇಕು. ಸಚಿವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ಷೇತ್ರ ಉಸ್ತುವಾರಿ ನೀಡಿಲ್ಲವೆಂಬ ಕಾರಣಕ್ಕೆ ದೂರವಿರಬಾರದು. ಈ ಜವಾಬ್ದಾರಿ ಇಲ್ಲದಿದ್ದರೂ ಸಚಿವರು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಸಿಎಂ ಸೂಚನೆ ಕೊಟ್ಟರು ಎನ್ನಲಾಗಿದೆ.

ಶಿರಾ ಆರ್‌ಆರ್‌ ನಗರ ಬೈಎಲೆಕ್ಷನ್: ಸಂಪುಟ ಸಭೆಯಲ್ಲಿ ಸಚಿವರಿಗೆ ಬಿಎಸ್‌ವೈ ನೀಡಿದ ಸೂಚನೆ ಏನು?
ಪ್ರತಿಪಕ್ಷಗಳ ಅಭ್ಯರ್ಥಿಗಳ ವಿರುದ್ಧ ವೈಯಕ್ತಿಕ ಟೀಕೆ ಮಾಡಬಾರದು. ಸರಕಾರದ ಕಾರ್ಯಕ್ರಮ ಸಮರ್ಥಿಸಿಕೊಳ್ಳಬೇಕು. ಪ್ರವಾಹ ಹಾಗೂ ಕೋವಿಡ್‌ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಂಡದ್ದರ ಬಗ್ಗೆ ಪ್ರಚಾರದಲ್ಲಿ ಪ್ರಸ್ತಾಪಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ವಿರುದ್ಧ ಕಟು ಟೀಕೆ ಮಾಡಿದ್ದ ಪ್ರತಿಪಕ್ಷಗಳು ಬೆಲೆ ತೆತ್ತಿದ್ದವು. ಚುನಾವಣೆಯಲ್ಲಿ ಇಂತಹ ಸೂಕ್ಷ್ಮ ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರೆಂದು ತಿಳಿದು ಬಂದಿದೆ.

ಕಟೀಲ್‌ ಧೋರಣೆಗೆ ಸಿಎಂ ಬೇಸರ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಶಾಸಕ ಬನಸಗೌಡ ಪಾಟೀಲ ಯತ್ನಾಳ್‌ ನೀಡಿದ ಹೇಳಿಕೆ ಬಹಳ ಚರ್ಚೆಯಾಗುತ್ತಿದೆ. ಈ ನಡುವೆಯೂ ಅವರಿಗೆ ಎಚ್ಚರಿಕೆ ಕೊಡುವ ಕ್ರಮವಾಗಿಲ್ಲವೆಂದು ನೇರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎದುರು ಸಿಎಂ ಅಸಮಾಧಾನ ಹೊರಹಾಕಿದ್ದಾರೆ.

ಸಂಪುಟ ಸಭೆ ನೇಪಥ್ಯದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಟೀಲ್‌ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಸಿಎಂ ಈ ವಿಚಾರ ಪ್ರಸ್ತಾಪಿಸಿದರು. ನಾಯಕತ್ವ ಬದಲಾವಣೆ ಕುರಿತು ಯತ್ನಾಳ್‌ ನೀಡಿದ ಹೇಳಿಕೆ ಪ್ರತಿಪಕ್ಷಗಳ ಬಾಯಿಗೂ ಆಹಾರವಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಕ್ರಮವೇಕಿಲ್ಲಎಂದು ಪ್ರಶ್ನಿಸಿದರು ಎನ್ನಲಾಗಿದೆ.

ನೋಟಿಸ್‌ ನಿರೀಕ್ಷೆ

ಸಮಜಾಯಿಷಿ ಕೊಟ್ಟ ಕಟೀಲ್‌, ಈಗಾಗಲೇ ಯತ್ನಾಳ್‌ ಹೇಳಿಕೆಯ ಧ್ವನಿಮುದ್ರಿಕೆಯನ್ನು ದಿಲ್ಲಿಗೆ ರವಾನಿಸಲಾಗಿದೆ. ಜತೆಗೆ ಯತ್ನಾಳ್‌ ಅವರಿಗೆ ಒಂದೆರಡು ದಿನದಲ್ಲಿ ಕಾರಣ ಕೇಳುವ ನೋಟಿಸ್‌ ಜಾರಿ ಮಾಡುವುದಾಗಿಯೂ ಹೇಳಿದರು ಎಂದು ತಿಳಿದು ಬಂದಿದೆ.

ಯತ್ನಾಳ್‌ ಹೇಳಿಕೆ ವಿಚಾರವನ್ನು ಸಂಪುಟ ಸಭೆಯಲ್ಲೂ ಪರೋಕ್ಷವಾಗಿ ಸಿಎಂ ಪ್ರಸ್ತಾಪಿಸಿದರು. ಈ ವೇಳೆ ಸಿಎಂ ಪರ ನಿಂತ ಸಚಿವರು, ತಮ್ಮ ನಾಯಕತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ