ಆ್ಯಪ್ನಗರ

ಗೌರಿ ಹತ್ಯೆ ಪ್ರಕರಣ: ಶಿವಸೇನಾ ಮಾಜಿ ಕಾರ್ಪೊರೇಟರ್‌ 12 ದಿನ ಎಸ್‌ಐಟಿ ವಶಕ್ಕೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಶಿವಸೇನಾ ಮಾಜಿ ಕಾರ್ಪೊರೇಟರ್‌ ಶ್ರೀಕಾಂತ್‌ ಪಂಗಾರ್ಕರ್‌ನನ್ನು ನ್ಯಾಯಾಲಯ 12 ದಿನಗಳ ಕಾಲ ರಾಜ್ಯದ ವಿಶೇಷ ತನಿಖಾ ತಂಡದ ವಶಕ್ಕೆ ಒಪ್ಪಿಸಿದೆ.

Vijaya Karnataka 18 Sep 2018, 9:08 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಶಿವಸೇನಾ ಮಾಜಿ ಕಾರ್ಪೊರೇಟರ್‌ ಶ್ರೀಕಾಂತ್‌ ಪಂಗಾರ್ಕರ್‌ನನ್ನು ನ್ಯಾಯಾಲಯ 12 ದಿನಗಳ ಕಾಲ ರಾಜ್ಯದ ವಿಶೇಷ ತನಿಖಾ ತಂಡದ ವಶಕ್ಕೆ ಒಪ್ಪಿಸಿದೆ.
Vijaya Karnataka Web Gauri Lankesh


ದಾಭೋಲ್ಕರ್‌ ಹತ್ಯೆ ಆರೋಪದಲ್ಲಿ ಸಿಬಿಐ ವಶದಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್‌ ಮೂಲಕ ಎಸ್‌ಐಟಿ ಆಧಿಕಾರಿಗಳು ಭಾನುವಾರ ಮುಂಬೈನಿಂದ ತಮ್ಮ ವಶಕ್ಕೆ ಪಡೆದಿದ್ದರು. ಸೋಮವಾರ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಿ ಎಸ್‌ಐಟಿ ವಶಕ್ಕೆ ಪಡೆದಿದೆ.

ವಿಚಾರವಾದಿಗಳ ಹತ್ಯಾ ಸರಣಿಯಲ್ಲಿ ಈತನ ಪಾತ್ರದ ಸುಳಿವು ಎಸ್‌ಐಟಿಗೆ ಸಿಕ್ಕಿತ್ತು. ಕರ್ನಾಟಕ ನೀಡಿದ ಸುಳಿವಿನ ಆಧಾರ ಮೇಲೆ ಮಹಾರಾಷ್ಟ್ರ ಜಲ್ನಾ ಜಿಲ್ಲೆಯ ನಿವಾಸಿಯಾಗಿದ್ದ ಶ್ರೀಕಾಂತ್‌ನನ್ನು ಮಹಾರಾಷ್ಟ್ರ ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಂತರ ಸಿಬಿಐಗೆ ಒಪ್ಪಿಸಿದ್ದರು. ಮುಂಬೈ ನ್ಯಾಯಾಲಯ ಈತನನ್ನು 20 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿತ್ತು. ಅಲ್ಲಿ ಸಿಬಿಐ ಅವಧಿ ಮುಗಿಯುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗಾಗಿ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಬಾಡಿ ವಾರೆಂಟ್‌ ಮತ್ತು ಮುಂಬೈನಿಂದ ಬೆಂಗಳೂರಿಗೆ ಆರೋಪಿಯನ್ನು ಕರೆತರಲು ಪ್ರಯಾಣ ವಾರೆಂಟ್‌ ಕೂಡ ನೀಡಿತ್ತು.

ಡೈರಿಯಲ್ಲಿತ್ತು ಸುಳಿವು


ಗೌರಿ ತನಿಖೆ ವೇಳೆ ಪುಣೆಯ ಅಮೋಲ್‌ ಕಾಳೆಯನ್ನು ಬಂಧಿಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಶ್ರೀಕಾಂತ್‌ ಪಂಗಾರ್ಕರ್‌ ಮೊಬೈಲ್‌ ನಂಬರ್‌ ಸಹ ಬರೆದಿತ್ತು. ಈ ನಂಬರಿನ ಮೊಬೈಲ್‌ ಟವರ್‌ಗಳನ್ನು ಪರಿಶೀಲಿಸಿದಾಗ ಉತ್ತರ ಪ್ರದೇಶದಲ್ಲಿ ನಾಡ ಪಿಸ್ತೂಲುಗಳನ್ನು ಮಾರಾಟ ಮಾಡುವ ಪ್ರದೇಶದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತು. ಶ್ರೀಕಾಂತ್‌ ಆ ಭಾಗದಲ್ಲಿದ್ದಾಗಲೇ ಕಾಳೆ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಈ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಸಿಬಿಐಗೆ ರವಾನಿಸಿದ್ದರು. ಸಿಬಿಐ ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಉತ್ತರ ಭಾರತದಿಂದ ನಾಡ ಪಿಸ್ತೂಲುಗಳನ್ನು ಖರೀದಿಸಿ ತಂದು ಈತನೇ ಅಮೋಲ್‌ ಕಾಳೆ ಗ್ಯಾಂಗ್‌ಗೆ ಕೊಡುತ್ತಿದ್ದ ಎನ್ನುವ ಸಂಗತಿ ಹೊರಗೆ ಬಂದಿತ್ತು.

ಕೋಕಾ ಅಡಿ ಶ್ರೀಕಾಂತ್‌

ಗೌರಿ ಹತ್ಯೆ ಆರೋಪಿಗಳ ಮೇಲೆ ಸಂಘಟಿತ ಅಪರಾಧ ಕಾಯಿದೆ (ಕೋಕ) ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಹತ್ಯೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ, ನೆರವು ನೀಡಿದವರೂ ಕೂಡ ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತಾರೆ. ಶ್ರೀಕಾಂತ್‌ ವಿರುದ್ಧ ಲಭ್ಯ ಆಗಿರುವ ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್‌ಐಟಿ ಮೂಲಗಳು 'ವಿಜಯ ಕರ್ನಾಟಕ'ಕ್ಕೆ ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ