ಆ್ಯಪ್ನಗರ

ನಿಮಗೆ ಆ ತೊಂದರೆ ಬೇಡ! ನನ್ನ ನಾನೇ ಟ್ರೋಲ್‌ ಮಾಡ್ಕೋತಿನಿ: ಡಿಕೆಶಿ ವಿರುದ್ಧ ಸಿಡಿದೆದ್ದ ರಮ್ಯಾ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ದಿಢೀರನೆ ಸಿಡಿದೆದ್ದಿದ್ದಾರೆ. ನನ್ನನ್ನು ನಾನೇ ಟ್ರೋಲ್‌ ಮಾಡಿಕೊಳ್ತೀನಿ, ನಿಮಗೆ ಆ ತೊಂದರೆ ಬೇಡ ಎಂದು ಕಿಡಿಕಾರಿರುವ ರಮ್ಯಾ, ಎಂಬಿ ಪಾಟೀಲ್‌ ಪರ ಮಾತಾಡಿದ್ದಕ್ಕೆ ತಮ್ಮ ವಿರುದ್ಧ ರವಾನೆಯಾಗುತ್ತಿದ್ದ ಸಂದೇಶಗಳ ಪಟ್ಟಿಯನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ. ಅದಲ್ಲದೇ ಡಿಕೆ ಶಿವಕುಮಾರ್‌ ಅವರಿಗೂ ಟ್ಯಾಗ್‌ ಮಾಡಿದ್ದಾರೆ.

Authored byಅವಿನಾಶ ವಗರನಾಳ | Vijaya Karnataka Web 12 May 2022, 10:16 am

ಹೈಲೈಟ್ಸ್‌:


  • ಡಿಕೆ ಶಿವಕುಮಾರ್‌ ವಿರುದ್ಧ ಸಿಡಿದೆದ್ದ ಮಾಜಿ ಸಂಸದೆ, ನಟಿ ರಮ್ಯಾ
  • ʼನನ್ನನ್ನು ನಾನೇ ಟ್ರೋಲ್‌ ಮಾಡ್ಕೋತಿನಿ, ನಿಮಗೆ ಆ ತೊಂದರೆ ಬೇಡʼ
  • ಎಂಬಿ ಪಾಟೀಲ್‌ ಪರ ಮಾತಾಡಿದ್ದಕ್ಕೆ ರಮ್ಯಾ ವಿರುದ್ಧ ಆಕ್ರೋಶ
  • ಕಚೇರಿಯಿಂದಲೇ ರಮ್ಯಾಗೆ ಕೌಂಟರ್‌ ನೀಡಲು ರವಾನೆಯಾಗಿದ್ದ ಸಂದೇಶ ಪಟ್ಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ramya dks
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಜಿ ಸಚಿವ ಎಂಬಿ ಪಾಟೀಲ್‌ ಅವರ ಬಗ್ಗೆ ಡಿಕೆ ಶಿವಕುಮಾರ್‌ ನೀಡಿದ್ದ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ರಮ್ಯಾ ಈಗ ಮತ್ತೊಂದು ಟ್ವೀಟ್‌ ಮೂಲಕ‌ ಕನಕಪುರ ಬಂಡೆ ಡಿಕೆಶಿಗೆ ಟಾಂಗ್‌ ನೀಡಿದ್ದಾರೆ. ಈ ಹಿನ್ನೆಲೆ ರಮ್ಯಾ ಅವರ ನಡೆ ಭಾರೀ ಕುತೂಹಲ ಕೆರಳಿಸಿದೆ.
ಎಂಬಿ ಪಾಟೀಲ್‌ ಪರ ಟ್ವೀಟ್‌ ಬೆನ್ನಲ್ಲೇ ರಮ್ಯಾ ವಿರುದ್ಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅದಲ್ಲದೇ ರಮ್ಯಾ ಅವರನ್ನು ಟ್ರೋಲ್‌ ಮಾಡಿ, ಆಕ್ರೋಶ ವ್ಯಕ್ತಪಡಿಸಿ ಎಂದು ಕಾಂಗ್ರೆಸ್‌ ಕಚೇರಿಯಿಂದ ಕಾಂಗ್ರೆಸ್‌ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶ ಹೋಗಿದೆ ಎನ್ನಲಾಗಿದೆ. ಇದಕ್ಕೆ ರಮ್ಯಾ ಈಗ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಕಳಿಸಿದ್ದ ಸಂದೇಶವನ್ನು ಕೂಡ ಲಗತ್ತಿಸಿದ್ದಾರೆ.

ನನ್ನನ್ನು ಟ್ರೋಲ್‌ ಮಾಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಕಚೇರಿಯಿಂದ ಈ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ನಿಮಗೆ ಆ ತೊಂದರೆ ಬೇಡ. ನಾನೇ ನನ್ನನ್ನು ಟ್ರೋಲ್‌ ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಚಾರ ಸಮಿತಿ ಮುಖ್ಯಸ್ಥ ಶ್ರೀವಸ್ತ ವೈ ಬಿ ಅವರನ್ನು ಟ್ಯಾಗ್‌ ಮಾಡಿ ರಮ್ಯಾ ಅವರು ಟ್ವೀಟ್‌ ಮಾಡಿದ್ದಾರೆ.


ಅದಲ್ಲದೇ, ಕರ್ನಾಟಕ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಿಆರ್‌ ನಾಯ್ಡು ಅವರ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿ, ಉತ್ತಮ ಕಾಪಿ, ಪೇಸ್ಟ್‌ ಜಾಬ್‌ ಎಂದು ವ್ಯಂಗ್ಯವಾಡಿದ್ದಾರೆ.

ಎಂಬಿ ಪಾಟೀಲ್‌ ಬಗ್ಗೆ ಡಿಕೆ ಶಿವಕುಮಾರ್‌ ಹೇಳಿಕೆಗೆ ರಮ್ಯಾ ಅಚ್ಚರಿ! ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಪ್ರಶ್ನೆ
ರಮ್ಯಾ ಅವರು ಟ್ವೀಟ್‌ ಮಾಡಿದಂತೆ ಕಾಂಗ್ರೆಸ್‌ ಕಚೇರಿಯಿಂದ ಕೈ ನಾಯಕರು ಮತ್ತು ಕಾರ್ಯಕರ್ತರಿಗೆ ರಮ್ಯಾ ಅವರನ್ನು ಟ್ರೋಲ್‌ ಮಾಡುವಂತೆ ಕಳುಹಿಸಿದ ಸಂದೇಶಗಳ ಪಟ್ಟಿ ಇಲ್ಲಿದೆ.
  • ಅವಕಾಶ ಕೊಟ್ಟ ನಾಯಕರಿಗೆ ಬೆಲೆ ಕೊಡಲಿಲ್ಲ, ಅವಕಾಶ ಕೊಟ್ಟ ಜನರಿಗೂ ನ್ಯಾಯ ಕೊಡಲಿಲ್ಲ, ಇದೀಗ ಪ್ರತ್ಯಕ್ಷವಾಗಲು ಕಾರಣವೇನು? ದಯವಿಟ್ಟು ನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ.
  • ಒಬ್ಬ ನಾಯಕರನ್ನು ಮೆಚ್ಚಿಸಲು ಸತ್ಯವನ್ನೇ ತಿಳಿಯದೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ನಿಮ್ಮ ಘನತೆ ಏನು ಎಂದು ತೋರುತ್ತಿದೆ.
  • ಕೆಪಿಸಿಸಿ ಅಧ್ಯಕ್ಷರು ಯಾವ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂದು ಮಾಧ್ಯಮಗಳನ್ನು ಒಮ್ಮೆ ನೋಡಿ ಪರಿಶೀಲಿಸಿಕೊಳ್ಳಿ!
  • ಅಂದು ಅಂಬರೀಷ್‌ ಅಂತ್ಯ ಸಂಸ್ಕಾರಕ್ಕೂ ಬಾರದ ನೀವು ಇಂದು ಒಬ್ಬ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಂಡಿದ್ದಿರಿಯೇ? ಒಮ್ಮೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ.
  • ನಿಂಗೆ ಅವಕಾಶ ಕೊಟ್ಟ ನಾಯಕರನ್ನೇ ಮರೆತು ಮಾತನಾಡುತ್ತಿದ್ದೀಯಾ? ಏಣಿ ಹತ್ತಿದ ಮೇಲೆ ಒದೆಯುವುದು ಎಂದರೆ ಇದೇ. ನಮ್ಮ ನಾಯಕರ ಬಗ್ಗೆ ನೀವು ಮಾತನಾಡುವ ಅಗತ್ಯ ಇಲ್ಲ.
  • ಡಿಕೆ ಶಿವಕುಮಾರ್‌ ಅವರೇ ನಿಮ್ಮನ್ನು 2010ರಲ್ಲಿ ಸದಸ್ಯತ್ವ ನೋಂದಣಿಯ ಕಾರ್ಯಕ್ರಮದ ಮೂಲಕ ಪಕ್ಷಕ್ಕೆ ಪರಿಚಯಿಸಿದ್ದು, ಈಗ ನೀವೇ ಅವರಿಗೆ ಪಕ್ಷದ ಆಗುಹೋಗುಗಳ ಬಗ್ಗೆ ಪಾಠ ಮಾಡುತ್ತಿದ್ದೀರಾ?
  • ರಮ್ಯಾ ಅವರೇ, ನಿಮ್ಮನ್ನು ಪಕ್ಷಕ್ಕೆ ಪರಿಚಯಿಸಿ ಅವಕಾಶ ನೀಡಿದವರು ಡಿಕೆ ಶಿವಕುಮಾರ್‌. ಪಕ್ಷಕ್ಕಾಗಿ ಅವರ ತ್ಯಾಗ ಮತ್ತು ಸೇವೆಗಳ ಅರಿವಿದೆಯೇ ನಿಮಗೆ? ಅರಿತು ಮಾತನಾಡಿ.
  • ಸಂಸದೆ ಆದ ಬಳಿಕ ಜನರ ಕಡೆ ತಿರುಗಿಯೂ ನೋಡಲಿಲ್ಲ. ಏಕಾಏಕಿ ಎಲ್ಲ ಸಾಮಾಜಿಕ ಜಾಲತಾಣವನ್ನು ಡಿಲೀಟ್‌ ಮಾಡಿ ಕಾಣೆಯಾಗಿದ್ದ ನೀವು ಇದೀಗ ಪ್ರತ್ಯಕ್ಷ ಆಗಲು ಕಾರಣವೇನು?
  • ಮಂಡ್ಯದಲ್ಲಿ ಜನಪರ ಕೆಲಸ ಮಾಡಲಿಲ್ಲ, ಪಕ್ಷಕ್ಕಾಗಿ ದುಡಿಯಲು ಇಲ್ಲ, ಈಗ ನಾಯಕರ ಮಧ್ಯೆ ತುಪ್ಪ ಸುರಿಯುವ ಕೆಲಸವೇಕೆ?
  • ಮಂಡ್ಯದಿಂದ ರಾತ್ರಿ ಪಲಾಯನವಾದ ಮಾಜಿ ಸಂಸದರೇ ಈಗ ಏಕಾಏಕಿ ಕಾಂಗ್ರೆಸ್‌ ಪಕ್ಷದ ಮೇಲೆ, ಕಾಂಗ್ರೆಸ್‌ ಮುಖಂಡರ ಮೇಲೆ ಪ್ರೀತಿ ಬಂದಿದ್ದು ಏಕೆ ಎಂದು ಒಮ್ಮೆ ತಿಳಿಸಿ.
  • ಮಾನ್ಯ ಮಾಜಿ ಸಂಸದೆ @divyaspandana ಅವರೇ ನಿಮಗೆ ರಾಜಕೀಯಕ್ಕೆ ನೆಲೆ ಕೊಟ್ಟವರು ಯಾರು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.
ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್‌ ಮನೆಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ ನೀಡಿದ್ದು ನಿಜವೇ..?
ಮೊದಲ ಟ್ವೀಟ್‌ನಲ್ಲಿ ಏನಿತ್ತು?

ಜನರು ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ. ಸಮಾರಂಭಗಳಿಗೆ ಹೋಗುತ್ತಾರೆ. ಕೆಲವರು ಆ ಕುಟುಂಬಗಳಲ್ಲಿ ಮದುವೆ ಕೂಡ ಆಗುತ್ತಾರೆ. ಆದರೆ, ಕಟ್ಟಾ ಕಾಂಗ್ರೆಸ್ಸಿಗ ಆಗಿರುವ ಎಂಬಿ ಪಾಟೀಲ್‌ ಅವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ರೀತಿ ಹೇಳಿಕೆ ನೀಡಿರುವುದು ನನಗೆ ಆಶ್ಚರ್ಯ ತಂದಿದೆ. ಪಕ್ಷವೂ ಒಂದೇ ತಂಡವಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದರು.

ಅವರ ಕರ್ಮಕಾಂಡಕ್ಕೆ ಪರ್ಮನೆಂಟ್‌ ಜಾಗ ತಿಹಾರ್‌ ಜೈಲು: ಡಿಕೆ ಶಿವಕುಮಾರ್‌ಗೆ ಅಶ್ವತ್ಥ್‌ ನಾರಾಯಣ ತಿರುಗೇಟು
ಬಿಜೆಪಿ ಸೇರ್ತಾರಾ ರಮ್ಯಾ?
ಸಾಮಾಜಿಕ ಜಾಲತಾಣದಲ್ಲಿ ದಿಢೀರನೇ ಪ್ರತ್ಯಕ್ಷರಾಗಿರುವ ನಟಿ ರಮ್ಯಾ ಬಿಜೆಪಿ ಸೇರ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನೇ ಗುರಿಯಾಗಿಸಿಕೊಂಡು ಟ್ವೀಟ್‌ ಮಾಡುತ್ತಿದ್ದು, ರಮ್ಯಾ ಅವರಿಗೆ ಮುಂದಿನ ರಾಜಕೀಯ ನೆಲೆ ಬಿಜೆಪಿಯೇ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ