ಆ್ಯಪ್ನಗರ

ಸುನಂದಾ ಕೊಲೆ ಪ್ರಕರಣ; ಸೈನೈಡ್‌ ಮೋಹನ್‌ಗೆ ಗಲ್ಲು ಕಾಯಂಗೊಳಿಸಿದ ಹೈಕೋರ್ಟ್‌

ಸುನಂದಾ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ಅಪರಾಧಿ ಸೈನೈಡ್‌ ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ.

Vijaya Karnataka 15 Nov 2017, 8:49 pm

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸುನಂದಾ ಎಂಬ ಮಹಿಳೆಯ ಕೊಲೆ ಹಾಗೂ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ಅಪರಾಧಿ ಸೈನೈಡ್‌ ಮೋಹನ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

Vijaya Karnataka Web gallows for cyanide mohan
ಸುನಂದಾ ಕೊಲೆ ಪ್ರಕರಣ; ಸೈನೈಡ್‌ ಮೋಹನ್‌ಗೆ ಗಲ್ಲು ಕಾಯಂಗೊಳಿಸಿದ ಹೈಕೋರ್ಟ್‌


ಗಲ್ಲು ಶಿಕ್ಷೆ ರದ್ದು ಕೋರಿ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ.ರವಿ ಮಳೀಮಠ್‌ ಮತ್ತು ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಬುಧವಾರ ಈ ಆದೇಶ ನೀಡಿದೆ.

''ಮೋಹನ್‌ ಅಪರಾಧ ಎಸಗಿರುವುದು ಸಾಬೀತಾಗಿದೆ.ಅಧೀನ ನ್ಯಾಯಾಲಯ ಎಲ್ಲ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಈ ಪ್ರಕರಣವನ್ನು 'ಅಪರೂಪದಲ್ಲಿ ಅಪರೂಪದ' ಪ್ರಕರಣವೆಂದು ಪರಿಗಣಿಸಿದೆ ಮತ್ತು ಮರಣದಂಡನೆ ಶಿಕ್ಷೆ ವಿಧಿಸಲು ಭಜನ್‌ ಸಿಂಗ್‌ ಪ್ರಕರಣದಲ್ಲಿ ನೀಡಿರುವ ಮಾನದಂಡಗಳನ್ನು ಅನುಸರಿಸಿದೆ.ಹಾಗಾಗಿ ಅಧೀನ ನ್ಯಾಯಾಲಯದ ತೀರ್ಪು ಸರಿ ಇದೆ''ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅಪರಾಧಿಯು ಇದೇ ರೀತಿ ಅಮಾಯಕ ಮಹಿಳೆಯರನ್ನು ವಂಚಿಸಿ ಅವರ ಮೇಲೆ ಅತ್ಯಾಚಾರ ನಡೆಸಿ,ಅವರಿಗೆ ಸೈನೈಡ್‌ ನೀಡಿ ಕೊಲೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ.ಆತ ಸುಧಾರಣೆಯಾಗುವ ಸಾಧ್ಯತೆಗಳಿಲ್ಲ.ಆತ ಸಮಾಜಕ್ಕೆ ಅದರಲ್ಲೂ ಮಹಿಳೆಯರಿಗೆ ಕಂಟಕ.ಸಾಕ್ಷ್ಯಗಳೆಲ್ಲಾ ಆತನ ವಿರುದ್ಧವೇ ಇವೆ.ಹಾಗಾಗಿ ಗಲ್ಲು ಶಿಕ್ಷೆ ಕಾಯಂಗೊಳಿಸುವುದಾಗಿ ವಿಭಾಗೀಯಪೀಠ ತೀರ್ಪಿತ್ತಿದೆ.

'' ಸೈನೈಡ್‌ ಮೋಹನನಿಗೆ ಒಂದು ಪ್ರಕರಣದಲ್ಲಿ ಹೈಕೋರ್ಟ್‌ ಈಗಾಗಲೇ ಜೀವನಪೂರ್ತಿ ಜೈಲಿನಲ್ಲೇ ಇರಬೇಕು ಎಂಬ ಶಿಕ್ಷೆ ನೀಡಿದೆ.ಮತ್ತೊಂದು ಪ್ರಕರಣದಲ್ಲಿ ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ್ದರೂ ದರೋಡೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆ ವಿಧಿಸಿದೆ.ಅಧೀನ ನ್ಯಾಯಾಲಯಗಳಲ್ಲಿ ಆತನ ವಿರುದ್ಧದ 16 ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಆತನ ಕಪಿಮುಷ್ಠಿಯಿಂದ ಇಬ್ಬರು ಮಹಿಳೆಯರು ಪಾರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಆತ ಬಗ್ಗೆ ಕ್ಷಮೆಗೆ ಅಥವಾ ಶಿಕ್ಷೆ ಕಡಿತಕ್ಕೆ ಅರ್ಹನಲ್ಲ , ಆತನಿಗೆ ಅಧೀನ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯೇ ಸರಿ ಇದೆ,'' ಎಂದು ನ್ಯಾಯಾಲಯ ಹೇಳಿದೆ.

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಎಸ್‌ಪಿಪಿ ವಿಜಯ್‌ ಕುಮಾರ್‌ ಮಜಗೆ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: 2008ರಲ್ಲಿ ಮೋಹನ್‌, ಸುಳ್ಯದ ಸಮೀಪದ ಪೆರುವಾಜೆ ಗ್ರಾಮದ ಸುನಂದಾ(32) ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ಶ್ರೀಉಮಾಮಹೇಶ್ವರಿ ಲಾಡ್ಜ್‌ನಲ್ಲಿ ತಂಗಿದ್ದ.ಅದೇ ದಿನ ರಾತ್ರಿ 8 ಗಂಟೆ ಸಮಯದಲ್ಲಿ ಸುನಂದಾ ಮೃತದೇಹ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಿಕ್ಕಿತ್ತು. ಮರಣೋತ್ತರ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಮೇಲೆ ಆಕೆ ಸೈನೈಡ್‌ ಸೇವಿಸಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು. 2010ರಲ್ಲಿ ಮೋಹನ ಬಂಧನವಾದ ನಂತರ, ಆತನ ಮನೆಯಲ್ಲಿ ಸುನಂದಾಳಿಗೆ ಸೇರಿದ ಒಡವೆಗಳು ಸಿಕ್ಕಿದ್ದವು. ಜೊತೆಗೆ ಮೈಸೂರಿನ ಲಾಡ್ಜ್‌ ಮಾಲೀಕರು ಹಾಗೂ ರೂಂ ಬಾಯ್‌ ಮೋಹನನ ವಿರುದ್ಧ ಸಾಕ್ಷ್ಯ ನುಡಿದಿದ್ದರು.

ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 4ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ 2013ರ ಡಿ.21ರಂದು ಮೋಹನ್‌ ಅಲಿಯಾಸ್‌ ಮೋಹನ್‌ ಕುಮಾರ್‌ಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು.

Gallows for Cyanide Mohan

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ