ಆ್ಯಪ್ನಗರ

ಕರ್ನಾಟಕ ಸೇರಿ ಹಲವೆಡೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳ ಖರೀದಿ ಶುರು

ಮುಂಗಾರು ಹಂಗಾ­ಮಿನ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಲ್ಲಿ ಖರೀದಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಆರಂಭಿಸಿದ್ದು ಕರ್ನಾಟಕದಲ್ಲಿ ಬೇಳೆ ಕಾಳುಗಳು, ಎಣ್ಣೆ ಬೀಜಗಳು ಹಾಗೂ ಕೊಬ್ಬರಿ ಖರೀದಿಗೆ ಅನುಮತಿ ನೀಡಲಾಗಿದೆ.

Agencies 19 Oct 2020, 11:43 pm
ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಹಂಗಾಮಿನ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಲ್ಲಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
Vijaya Karnataka Web food grain production getty


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆ ಆಧರಿಸಿ 41.67 ಲಕ್ಷ ಮೆಟ್ರಿಕ್‌ ಟನ್‌ ಬೇಳೆ ಕಾಳುಗಳು ಮತ್ತು ತೈಲ (ಎಣ್ಣೆ) ಬೀಜಗಳ ಖರೀದಿಗೆ ಅನುಮತಿ ನೀಡಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ರಾಜ್ಯಗಳಲ್ಲಿ ಬೇಳೆ ­ಕಾಳುಗಳು ಮತ್ತು ಎಣ್ಣೆ ಬೀಜಗಳ ಖರೀದಿಗೆ ಅನುಮೋದನೆ ನೀಡಿದೆ.

ಜೊತೆಗೆ, ಕರ್ನಾಟಕ, ಕೇರಳ, ಆಂಧ್ರಪ್ರ ದೇಶ ಮತ್ತು ತಮಿಳುನಾಡುಗಳಲ್ಲಿ 1.23 ಲಕ್ಷ ಮೆಟ್ರಿಕ್‌ ಟನ್‌ ಕೊಬ್ಬರಿ ಖರೀದಿಗೂ ಅನುಮತಿ ನೀಡಲಾಗಿದ್ದು, ಈವರೆಗೆ ಕರ್ನಾಟಕ ಮತ್ತು ತಮಿಳುನಾಡಿನ 3,961 ತೆಂಗು ಬೆಳೆಗಾರ­ರಿಂದ 52.40 ಕೋಟಿ ರೂ. ಮೊತ್ತದ 5,089 ಮೆಟ್ರಿಕ್‌ ಟನ್‌ ಕೊಬ್ಬರಿ ಖರೀದಿಸಲಾಗಿದೆ.

2020-21ನೇ ಸಾಲಿಗೆ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯಂತೆ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಂದಾಯಿತ ರೈತರಿಂದ ನೇರವಾಗಿ ಆಹಾರ ಧಾನ್ಯಗಳನ್ನು ಖರೀದಿಸಲಿವೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ಪಂಜಾಬ್‌, ಹರಿಯಾಣ, ಉತ್ತರ­ ಪ್ರದೇಶ, ತಮಿಳುನಾಡು, ಉತ್ತರಾ­ಖಂಡ, ಚಂಡೀಗಢ, ಕೇರಳ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ಭತ್ತವನ್ನು ಅಧಿಕವಾಗಿ ಬೆಳೆ­ಯುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಅ.17ರವರೆಗೆ 7.38 ಲಕ್ಷ ರೈತರಿಂದ 84.46 ಮೆಟ್ರಿಕ್‌ ಟನ್‌ ಭತ್ತ ಖರೀದಿ ಮಾಡಲಾಗಿದೆ.

ಮುಂಗಾರು ಹಂಗಾಮು ಮಾರುಕಟ್ಟೆ 2020-21ನೇ ಸಾಲಿನ ಹತ್ತಿ ಖರೀದಿ ಪ್ರಕ್ರಿಯೆ 2020 ಅ.1ರಿಂದಲೇ ಆರಂಭವಾಗಿದೆ. ಭಾರತೀಯ ಹತ್ತಿ ನಿಗಮವು ಅ.17ರವರೆಗೆ ಒಟ್ಟು 1,65,369 ಬೇಲ್‌ ಹತ್ತಿ ಖರೀದಿಸಿದೆ ಎಂದೂ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ