ಆ್ಯಪ್ನಗರ

ಸಂಪುಟ ವಿಸ್ತರಣೆಗೆ ಇನ್ನೂ ಬಾರದ ಗ್ರೀನ್‌ ಸಿಗ್ನಲ್, ‌ಬಿಹಾರ ಚುನಾವಣೆವರೆಗೂ ವಿಸ್ತರಣೆ ಇಲ್ಲ?

ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ವರಿಷ್ಠರಿಂದ ಇನ್ನೂ ಸಂದೇಶ ಬಂದಿಲ್ಲ. ಈ ನಡುವೆಯೂ ಕಡೆ ಕ್ಷಣದಲ್ಲಾದರೂ ನಡ್ಡಾ ಅವರಿಂದ ದೂರವಾಣಿ ಕರೆ ಬರಬಹುದು ಎಂಬ ಕಾಯುವಿಕೆಯಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಇದ್ದಾರೆ.

Vijaya Karnataka 20 Sep 2020, 12:33 am
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ದಿಲ್ಲಿಯ ವರಿಷ್ಠರಿಂದ ಶನಿವಾರ ತಡರಾತ್ರಿಯವರೆಗೂ ಯಾವುದೇ ಗ್ರೀನ್‌ ಸಿಗ್ನಲ್‌ ಬಂದಿಲ್ಲ. ಹಾಗಾಗಿ ಅಧಿವೇಶನಕ್ಕೆ ಮುನ್ನವೇ ಈ ಪ್ರಕ್ರಿಯೆ ನಡೆಯುವುದು ಬಹುತೇಕ ಅನುಮಾನ. ಬಿಹಾರ ಚುನಾವಣೆಯವರೆಗೂ ಈ ನಿಟ್ಟಿನಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
Vijaya Karnataka Web BS Yediyurappa


ಸಿಎಂ ಯಡಿಯೂರಪ್ಪ ಅವರು ದಿಲ್ಲಿಯಲ್ಲಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಮತ್ತಿತರರನ್ನು ಭೇಟಿಯಾಗಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ನಡ್ಡಾ ಅವರಿಂದ ದೂರವಾಣಿ ಕರೆ ಬರಬಹುದು ಎಂಬ ಕಾಯುವಿಕೆಯಲ್ಲಿ ಸಿಎಂ ಇದ್ದಾರೆ. ಆದರೆ ಅಲ್ಲಿಂದ ಗ್ರೀನ್‌ ಸಿಗ್ನಲ್‌ ಬರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾದ ಬಳಿಕ ಮಾತನಾಡಿದ್ದ ಸಿಎಂ ಬಿಎಸ್‌ವೈ, "ವರಿಷ್ಠರ ಸಂದೇಶ ನಿರೀಕ್ಷಿಸಲಾಗುತ್ತಿದೆ. ಪ್ರಧಾನಿ ಮತ್ತು ಇತರರನ್ನು ಸಂಪರ್ಕಿಸಿದ ಬಳಿಕ ಮಾಹಿತಿ ತಲುಪಿಸುವುದಾಗಿ ನಡ್ಡಾ ಹೇಳಿದ್ದಾರೆ. ವರಿಷ್ಠರು ಒಪ್ಪಿದರೆ ಭಾನುವಾರವೇ ಸಂಪುಟ ವಿಸ್ತರಣೆಯಾಗಲಿದೆ," ಎಂದಿದ್ದರು. ಶನಿವಾರ ಬೆಳಗ್ಗೆ ದಿಲ್ಲಿಯಿಂದ ನಿರ್ಗಮಿಸುವಾಗಲೂ ಸುದ್ದಿಗಾರರಿಗೆ ಸಿಎಂ ಇದೇ ವಿಷಯ ತಿಳಿಸಿದರು. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಮುಖಾಮುಖಿಯಾದ ಮಾಧ್ಯಮದವರ ಮುಂದೆಯೂ ಬಿಎಸ್‌ವೈ ಇದೇ ಅಭಿಪ್ರಾಯ ಹಂಚಿಕೊಂಡರು.

ಸಚಿವ ಸಂಪುಟ ಸಸ್ಪೆನ್ಸ್‌: ಭಾನುವಾರವೇ ವಿಸ್ತರಣೆಗೆ ಬಿಎಸ್‌ವೈ ರೆಡಿ, ವರಿಷ್ಠರಿಂದ ಇನ್ನೂ ಬಾರದ ಸಂದೇಶ

ಆದರೆ, ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರಿಂದ ಇನ್ನೂ ಸಂದೇಶ ಬಂದಿಲ್ಲ. ಈ ನಡುವೆಯೂ ಕಡೆ ಕ್ಷಣದಲ್ಲಾದರೂ ನಡ್ಡಾ ಅವರಿಂದ ದೂರವಾಣಿ ಕರೆ ಬರಬಹುದು ಎಂಬ ಕಾಯುವಿಕೆಯಲ್ಲಿ ಸಿಎಂ ಇದ್ದಾರೆ. ಒಂದು ವೇಳೆ ಹೈಕಮಾಂಡ್‌ನಿಂದ ತಡರಾತ್ರಿ ಮಾಹಿತಿ ಬಂದರೆ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಕೈಗೊಳ್ಳಲು ಅವರು ಸಿದ್ಧರಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಯವರ ಅಪೇಕ್ಷೆಯೇನೇ ಇದ್ದರೂ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಸಾಧ್ಯತೆಯಿಲ್ಲ. ಆ ಬಳಿಕ ಈ ಸಂಬಂಧ ವರಿಷ್ಠರು ಸಮಾಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಧ್ಯಸ್ಥಿಕೆಯಿಲ್ಲದೆ ಕರ್ನಾಟಕ ಬಿಜೆಪಿ ವಿಚಾರದಲ್ಲಿ ಯಾವುದೇ ತೀರ್ಮಾನವನ್ನು ನಡ್ಡಾ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಸಂಸತ್‌ ಅಧಿವೇಶನದ ಬಳಿಕವೂ ಬಿಹಾರ ಚುನಾವಣೆ ಸಂಬಂಧದಲ್ಲಿ ವರಿಷ್ಠರು ವ್ಯಸ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆಗೆ ತೆರೆಬಿದ್ದ ನಂತರವೇ ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ನಿರೀಕ್ಷಿಸಬಹುದಾಗಿದೆ.

ದಿಲ್ಲಿಯಿಂದ ಹೊರಡುವ ಮುನ್ನ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಸಿಎಂ ಭೇಟಿಯಾದರು.

ಎರಡು ಅಲಗಿನ ಕತ್ತಿಸಂಪುಟ ವಿಸ್ತರಣೆ ಕೈಗೊಳ್ಳುವುದು ಯಾವಾಗಲೂ ಎರಡು ಅಲಗಿನ ಕತ್ತಿಯ ಮೇಲೆ ನಡೆದ ಇಕ್ಕಟ್ಟು ತರುತ್ತದೆ. ಈ ಪ್ರಕ್ರಿಯೆ ಕೈಗೊಂಡರೂ ಕಷ್ಟ. ಕೈಗೊಳ್ಳದೆ ಇದ್ದರೂ ಸಮಸ್ಯೆ ತಪ್ಪುವುದಿಲ್ಲ. ಅದರಲ್ಲೂ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ವಿಸ್ತರಣೆ ಮಾಡಿದರೆ ಸಚಿವ ಸ್ಥಾನ ವಂಚಿತರನ್ನು ನಿಭಾಯಿಸುವುದು ಸವಾಲಾಗಲಿದೆ. ಈ ದೃಷ್ಟಿಯಿಂದಲೂ ವರಿಷ್ಠರು ಯೋಚಿಸಿದ್ದಾರೆ. ರಾಜ್ಯ ಸರಕಾರ ಸುಭದ್ರವಾಗಿದ್ದು, ಯಾವುದೇ ಗೊಂದಲವಿಲ್ಲ. ಇಂತಹ ಹೊತ್ತಿನಲ್ಲಿ ಮಂತ್ರಿಮಂಡಲ ವಿಸ್ತರಿಸಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಿಲ್ಲ ಎನ್ನುವುದೂ ವರಿಷ್ಠರ ನಿಲುವಾಗಿದೆ. ಸಿಎಂ ಅವರಿಗೂ ಈ ಸೂಕ್ಷ್ಮ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ