ಆ್ಯಪ್ನಗರ

ರಾಜೀನಾಮೆ ಹಿಂಪಡೆಯಲು ಒತ್ತಡ ಹೇರಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ: ವಿಶ್ವನಾಥ್ ಎಚ್ಚರಿಕೆ

ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ದೋಸ್ತಿ ಸರಕಾರದ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಬಿಜೆಪಿ ಸದ್ಯಕ್ಕೆ ತನ್ನ ಆಪರೇಶನ್‌ ಕಮಲವನ್ನು ಕೈಬಿಟ್ಟಿದ್ದರೂ, ದೋಸ್ತಿ ಪಕ್ಷಗಳೇ ಪರಸ್ಪರ ಕತ್ತಿ ಮಸೆಯುವುದನ್ನು ಮುಂದುವರಿಸಿವೆ. ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ಆಂತರಿಕ ಸಮಸ್ಯೆಗಳಿಂದ ನಲುಗುತ್ತಿವೆ.

Vijaya Karnataka Web 20 Jun 2019, 11:16 am
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೇ ವಹಿಸಿಕೊಳ್ಳಬೇಕು ಎಂದು ಶಾಸಕ ಎಚ್‌. ವಿಶ್ವನಾಥ್‌ ಆಗ್ರಹಿಸಿದ್ದಾರೆ.
Vijaya Karnataka Web H Vishwanath


ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಒಂದೊಮ್ಮೆ ರಾಜೀನಾಮೆ ಹಿಂಪಡೆಯಲು ಒತ್ತಡ ಹೇರಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ವಿಶ್ವನಾಥ್ ಎಚ್ಚರಿಸಿದರು.

ನನ್ನ ಅನುಭವಗಳನ್ನು ಮುಖ್ಯಮಂತ್ರಿ ಬಳಸಿಕೊಳ್ಳಲಿಲ್ಲ. ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ಧರಾಮಯ್ಯ ಕೂಡ ನನ್ನ ಅನುಭವಗಳನ್ನು ಬಳಸಿಕೊಳ್ಳಲಿಲ್ಲ ಎಂದು ವಿಶ್ವನಾಥ್ ವಿಷಾದಿಸಿದರು.

ಕಾಂಗ್ರೆಸ್‌ನಲ್ಲೂ ತೀವ್ರ ಆಂತರಿಕ ಬೆಳವಣಿಗೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಬಣದ ಕೈ ಮೇಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಜತೆ ಹಲವು ವಿಷಯಗಳನ್ನು ಚರ್ಚಿಸಿದ್ದು ದೋಸ್ತಿ ಸಹವಾಸ ಸಾಕು ಎಂದಿದ್ದಾರೆ. ಅಂತಿಮ ನಿರ್ಧಾರ ಹೈಕಮಾಂಡ್‌ಗೇ ಬಿಟ್ಟಿದ್ದು ಎಂದೂ ಹೇಳಿದ್ದಾರೆ.

ಸಿದ್ದು ಮೇಲುಗೈ: ಕೆಪಿಸಿಸಿ ಬರ್ಖಾಸ್ತಿನಿಂದ ಕಾಂಗ್ರೆಸ್ ಹಿರಿಯ ಮುಖಂಡರಿಗೆ ಶಾಕ್

ಹೈಕಮಾಂಡ್ ಜತೆ ಸಿದ್ದರಾಮಯ್ಯ ಚರ್ಚೆಯ ಪರಿಣಾಮ ರಾಜ್ಯ ಕಾಂಗ್ರೆಸ್ ಘಟಕವನ್ನೇ ಹೈಕಮಾಂಡ್ ವಿಸರ್ಜಿಸಿದೆ. ಬುಧವಾರ ಕೆಪಿಸಿಸಿಯನ್ನು ವಿಸರ್ಜಿಸಲಾಗಿದ್ದು, ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸ್ಥಾನ ಮಾತ್ರ ಭದ್ರವಾಗಿದೆ. ಈ ದಿಢೀರ್‌ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್‌ ತಲ್ಲಣಗೊಂಡಿದೆ.

ಕಾಂಗ್ರೆಸ್‌ನಲ್ಲಾದ ಈ ಬೆಳವಣಿಗೆಯಿಂದ ದೋಸ್ತಿ ಸರಕಾರದ ಭವಿಷ್ಯದ ಮೇಲೆ ಮತ್ತೆ ಕಾರ್ಮೋಡ ಕವಿದಿದೆ. ಅದಕ್ಕನುಗುಣವಾಗಿಯೇ ಜೆಡಿಎಸ್‌ನಲ್ಲೂ ಬೆಳವಣಿಗೆಗಳು ನಡೆಯುತ್ತಿವೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ವಿಶ್ವನಾಥ್ ಅವರು ಬೆದರಿಕೆ ಹಾಕಿರುವುದು ಮುಂದಿನ ಬೆಳವಣಿಗೆಗಳಿಗೆ ಕನ್ನಡಿ ಹಿಡಿದಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ