ಆ್ಯಪ್ನಗರ

ಅತ್ಯಾಚಾರ ಸಂತ್ರಸ್ತೆಯ ಭ್ರೂಣ ತೆಗೆಯಲು ಅನುಮತಿ

ಚಿತ್ರದುರ್ಗ ಮೂಲದ 17 ವರ್ಷದ ಅಪ್ರಾಪ್ತೆಯು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಮಾನ್ಯ ಮಾಡಿದೆ.

Vijaya Karnataka 12 Mar 2019, 9:02 pm
ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯೊಬ್ಬರ ಗರ್ಭದಲ್ಲಿರುವ ಸುಮಾರು 24 ವಾರದ ಭ್ರೂಣದ ಬೆಳವಣಿಗೆ ನ್ಯೂನ್ಯತೆಯಿಂದ ಕೂಡಿರುವ ಕಾರಣ ಅದನ್ನು ತೆಗೆಯಲು ಹೈಕೋರ್ಟ್‌ ಅನುಮತಿ ನೀಡಿದೆ.
Vijaya Karnataka Web high court


ಚಿತ್ರದುರ್ಗ ಮೂಲದ 17 ವರ್ಷದ ಅಪ್ರಾಪ್ತೆಯು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಮಾನ್ಯ ಮಾಡಿದೆ.

ನ್ಯಾಯಪೀಠದ ಹಿಂದಿನ ವಿಚಾರಣೆ ವೇಳೆ, ಅಪ್ರಾಪ್ತೆಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ವಾಣಿ ವಿಲಾಸ ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯರ ತಂಡಕ್ಕೆ ನಿರ್ದೇಶಿಸಿತ್ತು.

ಅದರಂತೆ ಮಂಗಳವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪರ ವಕೀಲೆ ಎಂ.ಸಿ.ನಾಗಶ್ರೀ ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ವರದಿ ಸಲ್ಲಿಸಿದರು.

''ಭ್ರೂಣಕ್ಕೆ ಸದ್ಯ 24 ವಾರವಾಗಿದೆ.ಭ್ರೂಣದ ತಲೆಭಾಗದಲ್ಲಿ ಸೀಳು ಕಾಣಿಸಿಕೊಂಡಿದೆ.ಮಗು ಜನಿಸಿದರೂ ಭವಿಷ್ಯದಲ್ಲಿ ಮತ್ತೆ ಆರೋಗ್ಯ ಸಮಸ್ಯೆ ಎದುರಾಗುವ ಸಂಭವವಿದೆ, ಹಾಗಾಗಿ ಗರ್ಭಪಾತ ನಡೆಸುವುದೇ ಸೂಕ್ತ''ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಅದನ್ನು ಗಮನಿಸಿದ ಜಡ್ಜ್‌, ''ಭ್ರೂಣದ ಬೆಳವಣಿಗೆ ನ್ಯೂನ್ಯತೆಯಿಂದ ಕೂಡಿದೆ ಎಂದು ತಜ್ಞ ವೈದ್ಯರ ವರದಿ ತಿಳಿಸಿದೆ. ಅದನ್ನು ಆಧರಿಸಿ ಅಪ್ರಾಪ್ತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ,'' ಎಂದು ಆದೇಶಿಸಿದರು.

'' ಗರ್ಭದಿಂದ ಹೊರ ತೆಗೆದ ಭ್ರೂಣವನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಸಂರಕ್ಷಿಸಬೇಕು ಹಾಗೂ ಅದರ ಡಿಎನ್‌ಎ ಪರೀಕ್ಷೆ ಮಾಡಬೇಕು. ಹೊಳಲ್ಕೆರೆ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌, ಸಂತ್ರಸ್ತೆ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ದೃಷ್ಟಿಯಿಂದ ಆ ಡಿಎನ್‌ಎ ಪರೀಕ್ಷೆಯ ವರದಿ ಪಡೆದುಕೊಳ್ಳಬೇಕು,'' ಎಂದೂ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಸಂತ್ರಸ್ತೆಗೆ ಪರಿಹಾರ ನೀಡುವ ಮತ್ತು ಗರ್ಭಪಾತಕ್ಕೆ ತಗಲುವ ವೆಚ್ಚ 70 ಸಾವಿರ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ