ಆ್ಯಪ್ನಗರ

ಮಳೆ ಹಾನಿ ವೀಕ್ಷಣೆ ನೆಪದಲ್ಲಿ ಫೋಟೋ ಶೂಟ್ ಬೇಡ: ಬಸವರಾಜ ಬೊಮ್ಮಾಯಿಗೆ ಎಚ್ ಡಿಕೆ ಟಾಂಗ್

ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ? ಸರ್ಕಾರ ಹಾಗೂ ಕಾರ್ಪೊರೇಷನ್ ನಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಲೂಟಿಯಾಗುತ್ತಿದೆ ಅಷ್ಟೇ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದರು.

Vijaya Karnataka Web 21 May 2022, 4:14 pm

ಹೈಲೈಟ್ಸ್‌:

  • ಮಳೆ ಹಾನಿ ವೀಕ್ಷಣೆ ನೆಪದಲ್ಲಿ ಫೋಟೋ ಶೂಟ್ ಬೇಡ
  • ಬಸವರಾಜ ಬೊಮ್ಮಾಯಿಗೆ ಎಚ್ ಡಿಕೆ ಟಾಂಗ್
  • ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web hdk
ಬೆಂಗಳೂರು: ಫೋಟೋ ಶೂಟ್ ಗೆ ಬಂದು ಹೋಗುವುದು ಬೇಡ, ಮಳೆಹಾನಿ ಪ್ರದೇಶಗಳಲ್ಲಿ ಪರಿಹಾರ ಕೊಡುವುದಕ್ಕೆ ಮಾಹಿತಿಯನ್ನೇ ಇದುವರೆಗೂ ಸರಕಾರ ತೆಗೆದುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೂರಿದರು.

ಬ್ಯಾಟರಾಯನಪುರ ಕ್ಷೇತ್ರದ ನಾಗವಾರ ರಿಂಗ್ ರೋಡ್ ಜಂಕ್ಷನ್, ಥಣಿಸಂದ್ರ, ಹೆಬ್ಬಾಳ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಚ್ ಡಿಕೆ, ಬೆಂಗಳೂರಲ್ಲಿ ಏಳು ಜನರು ಮಂತ್ರಿ ಇದ್ದರೂ ಏನು ಪ್ರಯೋಜನ ಹೇಳಿ? ಸರ್ಕಾರ ಹಾಗೂ ಕಾರ್ಪೊರೇಷನ್ ನಲ್ಲಿ ಹಣದ ಕೊರತೆ ಇಲ್ಲ. ಆದರೆ, ಹಣ ಲೂಟಿಯಾಗುತ್ತಿದೆ ಅಷ್ಟೇ ಎಂದು ಆರೋಪಿಸಿದರು.

ಕಾಮಗಾರಿ ನೋಡಿದರೆ ಅದು ಗುಣಾತ್ಮಕವಾಗಿ ಆಗಿಲ್ಲ ಅನ್ನಿಸುತ್ತದೆ. ರಾಜಕಾರಣದಲ್ಲಿ ಶ್ರೀಮಂತಿಕೆ ಇರುವವರು ಇದ್ದಾರೆ. ಆ ರಾಜಕಾರಣಿಯಿಂದ ಜನರು ಸಮಸ್ಯೆ ಎದುರಿಸುತ್ತಾರೆ ಎಂದು ದೂರು ಬಂದಿವೆ. ಪ್ರಮುಖ ಮತ್ತು ಪ್ರಭಾವೀ ರಾಜಕಾರಣಿಗಳು ಈ ಜಾಗದಲ್ಲಿ ಕಾಂಪೌಂಡ್ ಹಾಕಿದ್ದೇ ವಸತಿ ಸಮುಚ್ಚಯಕ್ಕೆ ನೀರು ನುಗ್ಗಲು ಕಾರಣ. ಅವರು ತಮ್ಮ ಹಿತ ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕೆ ಸಾಮಾನ್ಯ ಜನರಿಗೆ ಕಷ್ಟವಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.

ಬೆಂಗಳೂರು ಮಳೆ ಹಾನಿ: ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್ ಬೆನ್ನಲ್ಲೇ ಸಿದ್ದರಾಮಯ್ಯ ಅಖಾಡಕ್ಕೆ..!

ಜನರು ಸಾಲ ಮಾಡಿ ಇಲ್ಲಿ ಪ್ಲ್ಯಾಟ್ ಖರೀದಿಸಿ ವಾಸ ಮಾಡ್ತಿದ್ದಾರೆ. ಅಧಿಕಾರಿಗಳು ಅನುಮತಿ, ಕೊಡುವ ಮೊದಲೇ ಯೋಚನೆ ಮಾಡಬೇಕಿತ್ತು. ಹವಾಮಾನ ಇಲಾಖೆ ಮಳೆ ಜೋರಾಗಿ ಬರುತ್ತದೆ ಅಂದಾಗ ಅಧಿಕಾರಿಗಳು ಮಳೆ ಬರಲ್ಲ ಎಂದು ನಿರ್ಲಕ್ಷ್ಯ ಮಾಡಿದರು. ಯಾವೆಲ್ಲಾ ಭಾಗದಲ್ಲಿ ನೀರು ನಿಲ್ಲುವ ಸ್ಥಳ ಗುರುತಿಸಿ ಪರಿಹಾರ ನೀಡಬೇಕು. ಮೊದಲು ಫೆಬ್ರವರಿಯಲ್ಲಿ ‌ಬರುವ ಮಳೆಗೆ ಬಹಳಷ್ಟು ತೊಂದರೆ ಆಗ್ತಿತ್ತು. ಸರ್ಕಾರ ತಾತ್ಕಾಲಿಕವಾಗಿ ಮಳೆ‌‌ ನುಗ್ಗದ ಹಾಗೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಗೆ ಹೊಟ್ಟೆ ಉರಿ

ಬಿಜೆಪಿಯವರಿಗೆ ಹೊಟ್ಟೆ ಹುರಿ ಶುರುವಾಗಿರಬೇಕು. ಹಣ, ಅಧಿಕಾರದ ಮತ್ತಲ್ಲಿ ತೇಲಾಡುತ್ತಿದ್ದಿರಾ? ಪ್ರಧಾನಿ ನರೇಂದ್ರ ಮೋದಿ ನೋಡಿ ಮತ ತಂದು ಕೊಡುತ್ತಾರೆ ಅಂದುಕೊಂಡರೆ ಅದು ಸುಳ್ಳು. ಇಡೀ ಬೆಂಗಳೂರನ್ನು ಆವರಿಸಿಕೊಳ್ಳುತ್ತಿರಾ ಅಂದರೆ ಅದೂ ಸುಳ್ಳು. ಬನ್ನಿ ಜನರ ಕಥೆ ನೋಡಿ, ಅಭಿವೃದ್ಧಿ ಹೆಸರಲ್ಲಿ ತಿಂದಿದ್ದು ಸಾಕು ಎಂದು ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು ಕುಮಾರಸ್ವಾಮಿ.

ರಾಜಕಾಲುವೆಗೆ ಹಣ ಕೊಡುತ್ತೇವೆಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರಲ್ಲಾ, ಅದನ್ನಾದರೂ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಬಿಜೆಪಿ ಸಚಿವರಿಗೆ ಸಲಹೆ ನೀಡಿದರು.

ಬೆಂಗಳೂರು ನಗರ ಜನತೆಗೆ ಹೊಸ ಪ್ರಣಾಳಿಕೆ ಅಂತ ಕಾಂಗ್ರೆಸ್ ಹೇಳುತ್ತೆ. ಐದು ವರ್ಷ ಹಾಗಾದ್ರೆ ಏನು ಮಾಡಿದ್ರಿ. ನಾನು ಐದು ಟೌನ್ ಶಿಪ್ ಮಾಡಲು ನೀಲಿ ನಕ್ಷೆ ತಯಾರು ಮಾಡಿದ್ದೆ. ನೀವು ಯಾರಾದರು ಸಹಕಾರ ಕೊಟ್ಟಿರಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಕೊರಿಯನ್ ಕಂಪನಿ ಬಂದಿತ್ತು ಇದಕ್ಕೆ. ಆದರೆ ಕ್ಲಿಯರೆನ್ಸ್ ಕೊಡಲು ಮುಂದಾಗಿದ್ದೆ. ಬಿಜೆಪಿ ಸರ್ಕಾರ ಏನು ಮಾಡಿತು. ನಮ್ಮ ಬಗ್ಗೆ ಚರ್ಚೆ ಮಾಡ್ತೀರಾ?. ಕೆರೆ ಕಟ್ಟೆ ನುಂಗಿರುವವರು ನೀವು. ಇದರ ಬಗ್ಗೆ ಜನ ಹೇಳುತ್ತಿದ್ದಾರೆ. ಒಂದು ಕಾಂಪೌಂಡ್ ತೆಗೆಸಲು ಯೋಗ್ಯತೆ ಇದೆಯೇ? ಕಾಟಾಚಾರಕ್ಕೆ ನಾನು ಪ್ರದಕ್ಷಿಣೆ ಹಾಕುತ್ತಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದರು.

ದೇವೇಗೌಡರ ಕೊಡುಗೆ ನೆನಪಿಸಿದ ಎಚ್ ಡಿಕೆ:

1994 ರಲ್ಲಿ ದೇವೇಗೌಡರು ಸಿಎಂ ಆದಾಗ ಏಳು ನಗರ ಸಭೆ, ಪಟ್ಟಣ ಪಂಚಾಯ್ತು ಆಯ್ತು. ದೊಡ್ಡ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದ್ದಾಗ ಮೂಲಭೂತ ಸೌಲಭ್ಯ ಇರಲಿಲ್ಲ. ಆಗ ದೇವೇಗೌಡರು 97 ವಾರ್ಡ್ ಮಾಡಿ ಏಳು ನಗರ ಸಭೆ, ಒಂದು ಪಟ್ಟಣ ಪಂಚಾಯ್ತಿ ಮಾಡಿದರು. ನಗರ ಸಭೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು. ಬೇರೆ ಬೇರೆ ಹಳ್ಳಿಯಿಂದ ಬಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರು ಎಂದು ಅವರು ಹೇಳಿದರು.

ನಾನು ಅಕಸ್ಮಾತ್ ಸಿಎಂ ಆದಾಗ, ಮೆಟ್ರೋ ಯೋಜನೆಗೆ ಗುತ್ತಿಗೆದಾರರಿಗೆ ಹಣ ಕೊಡಿಸಲಿಲ್ಲ. ನಾನು ಅವರ ಮುಖ ನೋಡದೆ ಗುತ್ತಿಗೆ ಕೊಟ್ಟೆ. ಲಘುವಾಗಿ ಮಾತನಾಡೋದು ಸರಿಯಲ್ಲ. ಮಾತನಾಡಿದರೆ ಅವರದ್ದು ಬಹಳ ಇದೆ.

ಇವರು ಕಾಂಗ್ರೆಸ್ ಶಾಸಕರಾದಾಗ ನಿಮ್ಮನ್ನು ಯಾರನ್ನೂ ಕೇಳಲಿಲ್ಲ. ವೈಯಕ್ತಿಕ ತೀರ್ಮಾನ ಮಾಡಿ ಕೇಂದ್ರ ಸರ್ಕಾರದ ಸ್ಕೀಂ ಬಂತು. ಬಿಬಿಎಂಪಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೂರು ಪಾಲು ಹಾಕಬೇಕಿತ್ತು. ಆ ಸ್ಕೀಂ ಗೆ 25 ಸಾವಿರ ಕೋಟಿ ಕೊಟ್ಟು ಬೆಂಗಳೂರು, ಮೈಸೂರು ಸಿಟಿ ಅಭಿವೃದ್ಧಿ ಮಾಡಲು ಮುಂದಾದೆ. ಆ ಸ್ಕೀಂ ತರಲು ಪ್ರಯತ್ನ ಪಟ್ಟೆ. ಐದು ವರ್ಷ ತಿಂದು ತೇಗಿದಿರಿ ಎಂದು ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ ಎ ಶರವಣ, ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್ ಪ್ರಕಾಶ್ ಮುಂತಾದವರು ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ