ಆ್ಯಪ್ನಗರ

Karnataka Crisis: ಸ್ಪೀಕರ್‌ ರಮೇಶ್‌ ಕುಮಾರ್‌ ವಾರ್ನಿಂಗ್‌: ನನ್ನ ಸುದ್ದಿಗೆ ಬರದಿರಿ....

ಸರಕಾರ ಉಳಿಸುವ ಪ್ರಯತ್ನ ಸ್ಪೀಕರ್‌ ಅವರಿಂದ ನಡೆಯುತ್ತಿದೆ ಎಂಬ ಆರೋಪಕ್ಕೆ ರಮೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಸದನ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ ಅವರು, ನನ್ನ ಚಾರಿತ್ರ್ಯ ವಧೆಗೆ ಪ್ರಯತ್ನಿಸುವ ಮುನ್ನ ನಿಮ್ಮ ಹಿನ್ನೆಲೆ ನೋಡಿಕೊಳ್ಳಿ ಎಂದರು.

Vijaya Karnataka Web 19 Jul 2019, 12:07 pm
ಬೆಂಗಳೂರು: ನನ್ನ ಚಾರಿತ್ರ್ಯ ವಧೆ ಮಾಡುವ ಮುನ್ನ ನಿಮ್ಮ ಹಿನ್ನೆಲೆ ನೋಡಿಕೊಳ್ಳಿ. ನಾನು ಇಲ್ಲಿ ಸುಮ್ಮನೆ ಕೂರಲು ಬಂದಿಲ್ಲ. ನನ್ನ ಸುದ್ದಿಗೆ ಬರುವ ಮುನ್ನ ಎಚ್ಚರ ವಹಿಸಿ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.
Vijaya Karnataka Web ramesh kumar


ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಚರ್ಚೆಯ ಸಂಬಂಧ ಏರ್ಪಟ್ಟಿರುವ ಬಿಕ್ಕಟ್ಟಿನ ಕುರಿತು ಕಲಾಪ ಆರಂಭವಾಗುತ್ತಿದ್ದಂತೆಯೇ ರಮೇಶ್‌ ಕುಮಾರ್‌ ತಮ್ಮ ಕಾರ್ಯವ್ಯಾಪ್ತಿ ಹಾಗೂ ತಮ್ಮ ನಿಲುವಿನ ಕುರಿತು ಸ್ಪಷ್ಟನೆ ನೀಡಿದರು.

ನಾನು ವಿಶ್ವಾಸಮತ ಯಾಚನೆಗೆ ವಿಳಂಬ ಮಾಡುತ್ತಿದ್ದೇನೆ ಎಂಬ ಮಾತುಗಳು ಕೇಳಿ ಬರುತ್ತಿದೆ. ನನಗೆ ನನ್ನ ನಿರ್ಧಾರ ತೆಗೆದುಕೊಳ್ಳಲು ಬರುತ್ತದೆ. ಅಷ್ಟೇ ಅಲ್ಲ ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿ ಕೆಲಸ ಮಾಡಲು ಬಂದಿಲ್ಲ. ನಿಯಮಗಳ ಅನುಸಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನನಗಿದೆ. ಎಂದು ಭಾವೋದ್ವೇಗದ ಮಾತುಗಳನ್ನಾಡಿದರು.

ನಿಯಮ ಗಾಳಿಗೆ ತೂರಲು ನಾನು ಸಿದ್ಧನಿಲ್ಲ. ಪಕ್ಷಪಾತಮಾಡುವ ಇರಾದೆ ನನಗಿಲ್ಲ. ಒಂದು ದಿನದ ಕಲಾಪ ಮುಂದುಕ್ಕೆ ಹಾಕಿದರೆ 12 ಕೋಟಿ ರೂ. ನಷ್ಟವಾಗುತ್ತದೆ. ನನ್ನ ಬಳಿ ಸಾವಿರ ಕೋಟಿಗಳಿಲ್ಲ. ನನ್ನ ಕುಟುಂಬ ನೋಡಿದರೆ ನಿಮಗೆ ಗೊತ್ತಾಗುತ್ತದೆ. ನನ್ನ ತಂದೆ ತಾಯಿ ನನಗೆ ಸತ್ಯದ ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ್ದಾರೆ. ಜಾತಿ ಬಲ ಇಲ್ಲದೇ ಬಂದವನನು ನಾನು. ಹೀಗಾಗಿ ನನ್ನ ಚಾರಿತ್ರ್ಯವಧೆ ಮಾಡುವ ಕೆಲಸಕ್ಕೆ ಬರಬೇಡಿ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು.


ಇದಕ್ಕೂ ಮುನ್ನ, ಕಲಾಪ ಆರಂಭವಾಗುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ಅಡ್ವಕೇಟ್ ಜನರಲ್‌ ಅವರ ಸಲಹೆ ಪಡೆಯಲಾಗಿದೆ. ಇದರ ಬಗ್ಗೆ ಕೂಲಂಕುಷವಾಗಿ ನಾನು ನೋಡಬೇಕಿದ್ದು, ರೂಲಿಂಗ್‌ ಕಾಯ್ದಿರಿಸಿದ್ದೇನೆ ಎಂದು ತಿಳಿಸಿದರು.

ಸರಕಾರ ಉಳಿಸುವ ಪ್ರಯತ್ನ ನಾನು ಮಾಡುತ್ತಿದ್ದೇನೆ ಎಂದೆಲ್ಲ ಹೇಳಲಾಗುತ್ತಿದೆ. ನಾನು ಇಲ್ಲೇ ಕೂರಲು ಬಂದಿಲ್ಲ. ಇಲ್ಲಿ ಕುಳಿತು ಇತಿಹಾಸ ಮೆಚ್ಚುವ ರೂಲಿಂಗ್‌ ನೀಡಲು ಬಂದಿದ್ದೇನೆ. ಇಲ್ಲಿ ಕುಳಿತು ನಾನು ಯಾವುದೇ ಪಕ್ಷದ ಪರವಾಗಿ ನನ್ನ ನಿರ್ಧಾರ ಪ್ರಕಟಿಸುವುದಿಲ್ಲ. ಈ ಎಲ್ಲ ವಿಚಾರವನ್ನು ಗಮನದಲ್ಲಿರಿಸಿ. ಸೌಮ್ಯ ಶಬ್ಧಗಳಿಂದ ಹೇಳುತ್ತಿದ್ದೇನೆ, ನನ್ನ ತೇಜೋವಧೆ ಮಾಡುವ ಮುನ್ನ, ನಿಮ್ಮ ಹಿನ್ನೆಲೆಗಳನ್ನು ನೋಡಿಕೊಳ್ಳಿ. ನನ್ನ ಸುದ್ದಿಗೆ ಬರದಿರಿ ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ