ಆ್ಯಪ್ನಗರ

ಖಾತೆ ಹಂಚಿಕೆಗೆ ಮೊದಲೇ ಎಚ್‌.ಡಿ. ರೇವಣ್ಣ ಮ್ಯಾಜಿಕ್‌

ಜೂನ್‌ 6 ರಂದು ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂಪುಟದ ನೂತನ ಸದಸ್ಯರು ಸಂಭ್ರಮದ ಜತೆಗೆ ಯಾವ ಖಾತೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು.

Vijaya Karnataka 14 Jun 2018, 10:07 am
ಶಶಿಧರ ಹೆಗಡೆ
Vijaya Karnataka Web HD Revanna


ಬೆಂಗಳೂರು : ಜೂನ್‌ 6 ರಂದು ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂಪುಟದ ನೂತನ ಸದಸ್ಯರು ಸಂಭ್ರಮದ ಜತೆಗೆ ಯಾವ ಖಾತೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈ ಬಗ್ಗೆ ಕಿಂಚಿತ್‌ ತಲೆಕೆಡಿಸಿಕೊಳ್ಳದ ಹಿರಿಯ ಸಚಿವರೊಬ್ಬರು ಖಾತೆ ಹಂಚಿಕೆಗೆ ಮುನ್ನವೇ ಹಾಸನ ಜಿಲ್ಲೆಯ ಬೃಹತ್‌ ಅಭಿವೃದ್ಧಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕೊಡಿಸಿದ್ದರು! ಅಂದಹಾಗೆ ಈ ಸಚಿವರ ಹೆಸರು ಎಚ್‌.ಡಿ. ರೇವಣ್ಣ!!

ಮೈತ್ರಿ ಸರಕಾರ ಮುನ್ನಡೆಸಲು ಮಾಡಿಕೊಂಡ ಒಪ್ಪಂದದಂತೆ ಲೋಕೋಪಯೋಗಿ ಇಲಾಖೆ ಜೆಡಿಎಸ್‌ ವಶವಾಗುವುದು ಮೊದಲೇ ನಿರ್ಧಾರವಾಗಿತ್ತು. ರೇವಣ್ಣ ಅವರಿಗೆ ಈ ಖಾತೆ ವಹಿಸುವುದೂ ಖಚಿತವಿತ್ತು. ಜೂನ್‌ 8 ರಂದು ಅಧಿಕೃತವಾಗಿ ಖಾತೆ ಹಂಚಿಕೆ ಮಾಡಿ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಹಾಸನದ ಹೆದ್ದಾರಿಗಳ ಸುಧಾರಣೆ ಸಂಬಂಧ 88.20 ಕೋಟಿ ರೂ. ಪ್ರಸ್ತಾವನೆಗೆ ಟೆಂಡರ್‌ ಆಹ್ವಾನಿಸಲು ಜೂನ್‌ 7 ರಂದೇ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ನೀಡಲಾಗಿತ್ತು.

ರೇವಣ್ಣ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಶರವೇಗವೆಂಬಂತೆ ಈ ಕ್ರಮ ಕೈಗೊಂಡಿದ್ದರು. ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಇನ್ನೂ ಮಹತ್ವದ ಯೋಜನೆ ಸಂಬಂಧ ಮುಂದಡಿ ಇಟ್ಟಿಲ್ಲ. ಈ ಉದ್ದೇಶಕ್ಕೆ ಸಂಪುಟ ಸಭೆಯನ್ನೂ ನಡೆಸಲಾಗಿಲ್ಲ. ಸಚಿವರು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇವರೆಲ್ಲರಿಗಿಂತ ಗಾವುದ ದೂರದಲ್ಲಿರುವ ರೇವಣ್ಣ, ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆ ಸುಧಾರಣೆಗೆ ಆಗಲೇ ಮುತುವರ್ಜಿ ವಹಿಸಿಬಿಟ್ಟಿದ್ದಾರೆ. ಇದು ಈ ಸರಕಾರ ಅನುಮೋದಿಸಿದ ಮೊದಲ ಮತ್ತು ಈವರೆಗಿನ ದೊಡ್ಡ ಮೊತ್ತದ ಕಾಮಗಾರಿಯೂ ಆಗಿದೆ. ಜೆಡಿಎಸ್‌-ಕಾಂಗ್ರೆಸ್‌ ಸರಕಾರದಲ್ಲಿ ರೇವಣ್ಣ ಪವರ್‌ಫುಲ್‌ ಎನ್ನುವುದಕ್ಕೆ ಇದೊಂದು ಸ್ಯಾಂಪಲ್‌. ಇಂತಹ ಮ್ಯಾಜಿಕ್‌ ಸಾಧ್ಯವಾಗುವುದು ರೇವಣ್ಣ ಅವರೊಬ್ಬರಿಗೇ ಎಂದು ಸಚಿವಾಲಯದ ವಲಯದಲ್ಲೇ ವ್ಯಂಗ್ಯಭರಿತವಾಗಿ ಚರ್ಚೆಯಾಗುತ್ತಿದೆ. ಈ ಮೂಲಕ 'ಹಾಸನಮುಖಿ' ಮೂಲಸೌಕರ್ಯ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರ ಚಾಲನೆ ನೀಡಿದಂತಾಗಿದೆ.

ಸಿಆರ್‌ಎಫ್‌ ನೆರವು

ಹಾಸನಕ್ಕೆ ಹೊಂದಿಕೊಂಡ ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 2,138.69 ಕೋಟಿ ರೂ. ಪ್ರಸ್ತಾವವನ್ನು ಕೇಂದ್ರ ಸರಕಾರಕ್ಕೆ ಈ ಹಿಂದೆ ಸಲ್ಲಿಸಲಾಗಿತ್ತು. ಈ ವಿಚಾರದಲ್ಲಿ ಹಾಸನದ ಸಂಸದರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಶ್ರಮ ಹಾಕಿದ್ದರು. ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೂ ಮಾತುಕತೆ ನಡೆಸಿದ್ದರು. ಅದರಂತೆ 21 ಕಾಮಗಾರಿ ಪ್ರಸ್ತಾವನೆಗಳಿಗೆ ಸಂಬಂಧಿಸಿ ಕೇಂದ್ರ ರಸ್ತೆ ನಿಧಿಯಿಂದ (ಸಿಆರ್‌ಎಫ್‌) 282 ಕೋಟಿ ರೂ. ಒದಗಿಸಲು 2018 ರ ಫೆಬ್ರವರಿ 5 ರಂದು ಭೂಸಾರಿಗೆ ಸಚಿವಾಲಯ ಸಮ್ಮತಿಸಿತ್ತು. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್‌ ಸರಕಾರ ಈ ಯೋಜನೆಗೆ ಮುಂದಿನ ಪ್ರಕ್ರಿಯೆ ಕೈಗೆತ್ತಿಕೊಂಡಿರಲಿಲ್ಲ. ಹಾಗಾಗಿ ಕೇಂದ್ರದಿಂದ ಅನುದಾನ ಮಂಜೂರಾಗಿದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ಸರಕಾರ ಬದಲಾಗಿ ರೇವಣ್ಣ ಅವರೇ ಲೋಕೋಪಯೋಗಿ ಸಚಿವರಾಗುವುದು ನಿಶ್ಚಿತವಾಗುತ್ತಿದ್ದಂತೆ, ಸಿಆರ್‌ಎಫ್‌ ನೆರವಿನ ಈ ಯೋಜನೆ ಜಾರಿಗೆ ಗ್ರೀನ್‌ ಸಿಗ್ನಲ್‌ ದೊರೆತಂತಾಗಿದೆ.

ಆದರೆ, ಬಯಸಿದ ಖಾತೆ ಕೈಗೆ ಬರುವ ಮುನ್ನವೇ ರೇವಣ್ಣ ಇಂತಹ ನಿರ್ದೇಶನ ನೀಡಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ಈ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಇಟ್ಟು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುವುದು ಸೂಕ್ತವೆಂಬ ಅಧಿಕಾರಿಗಳ ಸಲಹೆಯನ್ನು ಅವರು ತಳ್ಳಿಹಾಕಿದ್ದರು. ಮುಖ್ಯ ಎಂಜಿನಿಯರುಗಳ ವರ್ಗಾವಣೆ ವಿಷಯದಲ್ಲೂ ಹಸ್ತಕ್ಷೇಪ ನಡೆಸಿದ್ದ ರೇವಣ್ಣ, ಒಂದೇ ಬಾರಿಗೆ 51 ಮಂದಿ ವರ್ಗಾ ಆಗುವಂತೆ ನೋಡಿಕೊಂಡಿದ್ದರು. ಕಾಂಗ್ರೆಸ್‌ ಸಚಿವರ ಇಲಾಖೆಗಳಲ್ಲಿ ಮೂಗು ತೂರಿಸುವುದರ ಜತೆಗೆ ತಮಗೆ ಬೇಕಾದಂತೆ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಹೊರಟಿದ್ದಾರೆ.

21 ರಸ್ತೆಗಳ ಅಭಿವೃದ್ಧಿ

ಹೊಳೆನರಸಿಪುರ-ದಿಡಗ, ದಬ್ಬೆಗಟ್ಟ, ಚನ್ನರಾಯಪಟ್ಟಣ-ನರಸಿಪುರ-ಕೊಡ್ಲಿಪೇಟೆ, ಗಂಡಸಿ-ಸಂತೆಮೈದಾನ-ನೊಣವಿನಕೆರೆ ಸೇರಿದಂತೆ 21 ರಸ್ತೆಗಳ ಸುಧಾರಣೆ ಕಾಮಗಾರಿ ಈ ಯೋಜನೆಯಡಿ ನಡೆಯಲಿದೆ. ಈ ಸಂಬಂಧ ಟೆಂಡರ್‌ ಆಹ್ವಾನಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ