ಆ್ಯಪ್ನಗರ

ಗುರುವಾರ ಬೆಳಗ್ಗೆ 11 ಗಂಟೆಗೆ ಎಚ್‌ಡಿಕೆ ವಿಶ್ವಾಸಮತ ಯಾಚನೆ: ಸ್ಪೀಕರ್‌ ಘೋಷಣೆ

16 ಅತೃಪ್ತ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರಕಾರದ ವಿಶ್ವಾಸಮತ ಯಾಚನೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಪ್ರಕಟಿಸಿದರು.

Vijaya Karnataka Web 15 Jul 2019, 2:56 pm
ಬೆಂಗಳೂರು: ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಪ್ರತಿಪಕ್ಷದ ಬೇಡಿಕೆಯಂತೆ ಅಲ್ಲಿಯವರೆಗೆ ಬೇರೆ ಕಲಾಪ ನಡೆಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರಕಟಿಸಿದರು.
Vijaya Karnataka Web Karnataka Speaker KR ramesh Kumar


ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚಿಸಲಿದೆ ಎಂದು ಅವರು ಸದನದಲ್ಲಿ ಘೋಷಿಸಿದರು.

ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇನ್ನೂ ಮೂರು ದಿನಗಳ ಕಾಲ ಮುಂದುವರಿಯುವುದು ನಿಶ್ಚಿತವಾಗಿದೆ.

ಸೋಮವಾರ ಮಧ್ಯಾಹ್ನ ಸದನ ಸಭೆ ಸೇರುತ್ತಿದ್ದಂತೆಯೇ ಮಾತನಾಡಿದ ಸ್ಪೀಕರ್, ರಾಜ್ಯದಲ್ಲಿ ಉದ್ಭವಿಸಿದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಮಾತು ಸ್ಪಷ್ಟಪಡಿಸುತ್ತೇನೆ ಎಂದರು.

ಸರಕಾರ ಬಹುಮತ ಕಳೆದುಕೊಂಡಿದೆ ಎಂಬ ಕಾರಣ ನೀಡಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಪ್ರತಿಪಕ್ಷದವರು ಕೋರಿದ್ದಾರೆ. ನಮ್ಮ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಅವರಿಗೆ ತಿಳಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚಿಸಲು ಸ್ಪೀಕರ್ ಸೂಚಿಸಿದ್ದಾರೆ. ಗುರುವಾರದವರೆಗೂ ಬೆಳವಣಿಗೆಯನ್ನು ಕಾದು ನೋಡುತ್ತೇವೆ.
ಬಿ.ಎಸ್ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ


ಸದನ ಸಲಹಾ ಸಮಿತಿ ಸಭೆಗೆ ಪ್ರತಿಪಕ್ಷದವರು ಹಾಜರಾಗಿಲ್ಲ. ಆದ್ದರಿಂದ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ವಿಶ್ವಾಸಮತ ಯಾಚನೆಗೆ ಮುಹೂರ್ತ ಫಿಕ್ಸ್: ಮೂರು ದಿನ ಆಡಳಿತ ಯಂತ್ರ ಸ್ತಬ್ಧ


ಗುರುವಾರ ಬೆಳಗ್ಗೆ 11 ಗಂಟೆಗೆ ಸಭಾ ನಾಯಕರು ಸಲ್ಲಿಸಿದ ವಿಶ್ವಾಸಮತ ಯಾಚನೆ ನಿರ್ಣಯವನ್ನು ಚರ್ಚೆಗೆ ನಿಗದಿಪಡಿಸಲಾಗಿದೆ. ಅಲ್ಲಿಯ ವರೆಗೆ ಪಟ್ಟಿ ಮಾಡಿದ ಕಲಾಪಗಳು ನಡೆಯಬೇಕೆ ಬೇಡವೆ ಎಂಬುದು ತೀರ್ಮಾನವಾಗಬೇಕಿದೆ.

ಸಂಸತ್ತಿನಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾದಾಗ ಅನುಸರಿಸಿದ ಕ್ರಮ ಹಾಗೂ ಇದೇ ಸದನದಲ್ಲಿ ಹಿಂದೆ ಇಂತಹ ಸನ್ನಿವೇಶದಲ್ಲಿ ಅನುಸರಿಸಿದ ಕ್ರಮಗಳನ್ನು ಈ ಬಾರಿಯೂ ಅನುಸರಿಸಲಾಗುವುದು.

ಕಲಾಪ ನಡೆಸಬಹುದು, ಆದರೆ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಅಭಿಪ್ರಾಯಿಸಿದಾಗ, ಪ್ರತಿಪಕ್ಷದ ಸದಸ್ಯರು ನಾವು ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು. ಆದ್ದರಿಂದ ಪ್ರತಿಪಕ್ಷದ ಭಾಗೀದಾರಿಕೆ ಇಲ್ಲದೆ ಕಲಾಪ ನಡೆಸಲು ಆಗದು ಎಂದು ರಮೇಶ್‌ಕುಮಾರ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ