ಆ್ಯಪ್ನಗರ

ಪ್ರವಾಹ ಸಂತ್ರಸ್ತರ ಗೋಳು ಕೇಳದೆ ಬೆಂಗಳೂರು ಸುತ್ತಾಟ!: ಸಿಎಂಗೆ ಕುಮಾರಸ್ವಾಮಿ ಚಾಟಿ

ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹಕ್ಕೆ ತುತ್ತಾಗಿ ತಿಂಗಳೇ ಕಳೆದಿದೆ. ನೆರೆ ನೀರು ಇಳಿದರೂ ಪರಿಹಾರ ಮಾತ್ರ ದೂರವೇ ಉಳಿದಿದೆ ಅನ್ನೋದು ಬಹುತೇಕರ ಅಳಲು, ಆರೋಪ. ಇದೀಗ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರಕ್ಕೆ ಹೆಚ್ಡಿಕೆ ಚಾಟಿ ಬೀಸಿದ್ದಾರೆ.

Vijaya Karnataka Web 8 Sep 2019, 11:26 am
ಬೆಂಗಳೂರು: ರಾಜ್ಯದಲ್ಲಿ ‌ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, ಪ್ರಧಾನಿಗಳು ಬೆಂಗಳೂರಿಗೆ ಬಂದರೂ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಸಿಎಂ ಯಡಿಯೂರಪ್ಪಗೆ ಸಾಧ್ಯವಾಗಲಿಲ್ಲ ಎಂದು ಕುಟುಕಿದ್ದಾರೆ. ಪರಿಹಾರ ಧನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಗಟ್ಟಿ ಧ್ವನಿಯಲ್ಲಿ ಕೇಳಲೂ ಸಾಧ್ಯವಾಗದಷ್ಟು ದುರ್ಬಲರಾಗಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಚಾಟಿ ಬೀಸಿರುವ ಎಚ್ಡಿಕೆ, ಇದು ನಮ್ಮ ರಾಜ್ಯದ ದುರ್ದೈವ ಎಂದಿದ್ದಾರೆ.
Vijaya Karnataka Web hdk bsy



ಯಡಿಯೂರಪ್ಪ ಅವರನ್ನೇ ಹೆಸರಿಸಿ ಮತ್ತೊಂದು ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಹಾಗೂ ಅವರ ಮಂತ್ರಿ ಮಂಡಲ, ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಬೇಕಾದ ಈ ಸಂದರ್ಭದಲ್ಲಿ, 'ಬೆಂಗಳೂರು ನಗರದ ಪರಿವೀಕ್ಷಣೆ' ಎಂಬ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಮಾಜಿ ಸಿಎಂ ಎಚ್ಡಿಕೆ ಪ್ರಶ್ನಿಸಿದ್ದಾರೆ. ಚಂದ್ರಯಾನ-2 ವೀಕ್ಷಣೆಗೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಆದರೆ, ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು, ಮಕ್ಕಳನ್ನು ತಿರುಗಿಯೂ ನೋಡದೆ, ಕೇಂದ್ರದಿಂದ ಯಾವುದೇ ಪರಿಹಾರವನ್ನೂ ಘೋಷಿಸದೆ ಹಾಗೆಯೇ ತೆರಳಿದ್ದು ನೋವಿನ ವಿಚಾರ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.


ಕಳೆದ ತಿಂಗಳಷ್ಟೇ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹಾನಿ ಸಂಭವಿಸಿತ್ತು. ಸಾವುನೋವಿನ ಜೊತೆಯಲ್ಲೇ ಜನರು ತಮ್ಮ ಮನೆ, ಜಾನುವಾರು, ಬೆಳೆ ಹಾನಿಗೀಡಾಗಿ ದಿಕ್ಕು ತೋಚದಂತಾಗಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಗಿಂತ ಮೋದಿಗೆ ವಿದೇಶ ಪ್ರವಾಸ ಮುಖ್ಯ: ಸಿದ್ದರಾಮಯ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ