ಆ್ಯಪ್ನಗರ

ಮಂಜೂರಾತಿಯಲ್ಲಿ ರೇವಣ್ಣ ಶರವೇಗ: 3 ಜಿಲ್ಲೆಗಳಿಗೆ 4ಜಿ ವಿನಾಯಿತಿ ಅಡಿ ಅನುದಾನಕ್ಕೆ ಒಳಮಾರ್ಗ

ಇದೀಗ ಮೈತ್ರಿ ಸರಕಾರದ ಪ್ರಭಾವಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರ ಕನಕಪುರವೂ ಸೇರಿದಂತೆ ರಾಮನಗರ ಜಿಲ್ಲೆಯ ನಾನಾ ಕಟ್ಟಡ ಕಾಮಗಾರಿ ಉದ್ದೇಶಕ್ಕೆ ರೇವಣ್ಣ 100 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ.

Vijaya Karnataka 28 Jan 2019, 9:41 am
ಬೆಂಗಳೂರು : ದೋಸ್ತಿ ಸರಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮ್ಯಾಜಿಕ್‌ ಮುಂದುವರಿದಿದೆ. ಪಾರದರ್ಶಕ ಕಾಯಿದೆಯನ್ನೂ (ಕೆಟಿಪಿಪಿ) ಬದಿಗಿರಿಸಿ ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ಬಂಪರ್‌ ಅನುದಾನದ ಹೊಳೆ ಹರಿಯುತ್ತಿದೆ.
Vijaya Karnataka Web HDrevanna


ಇದೀಗ ಮೈತ್ರಿ ಸರಕಾರದ ಪ್ರಭಾವಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರ ಕನಕಪುರವೂ ಸೇರಿದಂತೆ ರಾಮನಗರ ಜಿಲ್ಲೆಯ ನಾನಾ ಕಟ್ಟಡ ಕಾಮಗಾರಿ ಉದ್ದೇಶಕ್ಕೆ ರೇವಣ್ಣ 100 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಪೂರಕ ರಸ್ತೆ ಸೌಕರ್ಯ ಒದಗಿಸುವುದೂ ಇದರಲ್ಲಿ ಸೇರಿದೆ. ಆದರೆ, ಯಾವ ಕಾಮಗಾರಿಗೂ ಕೆಟಿಪಿಪಿ ಕಾಯಿದೆ ಅನ್ವಯ ಟೆಂಡರ್‌ ಕರೆಯಲಾಗಿಲ್ಲ. ಈ ಎಲ್ಲ ಪ್ರಕ್ರಿಯೆಗಳೂ ರೇವಣ್ಣ ಅವರ ಇಚ್ಛೆಯಂತೆ ನಡೆಯುತ್ತಿವೆ. ಹಾಗಾಗಿ ಸರಕಾರವೇ ರೂಪಿಸಿಕೊಂಡಿರುವ ಪಾರದರ್ಶಕ ಕಾಯಿದೆಗೆ ಬೆಲೆಯಿಲ್ಲದಂತಾಗಿದೆ.

ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಈ ಮೂರು ಜಿಲ್ಲೆಗಳ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರ ಪ್ರಾಶಸ್ತ್ಯ ನೀಡುತ್ತಿದೆ. ವಿಶೇಷವಾಗಿ ಈ ಕೆಲಸದ ಉಸ್ತುವಾರಿಯನ್ನು ರೇವಣ್ಣ ನೋಡಿಕೊಳ್ಳುತ್ತಿದ್ದಾರೆ. ರೇವಣ್ಣ ಅವರ ಪ್ರದೇಶಿಕ ವ್ಯಾಮೋಹದಿಂದ ರಾಜ್ಯದ ಇತರ ಭಾಗಗಳ ಪ್ರಗತಿ ತಗ್ಗುವ ಆತಂಕ ಕಾಡುತ್ತಿದೆ ಎಂಬ ಆರೋಪ ಪದೇಪದೆ ಕೇಳಿ ಬರುತ್ತಿದೆ. ಜತೆಗೆ ರೇವಣ್ಣ ಅವರ ಏಕಪಕ್ಷೀಯ ತೀರ್ಮಾನಗಳಿಗೆ ಸಂಪುಟದ ಸದಸ್ಯರು ಸಿಟ್ಟು ಮಾಡಿಕೊಂಡಿದ್ದಾರೆ ಎನ್ನುವ ವರ್ತಮಾನವಿದೆ. ಆದರೆ, ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ರೇವಣ್ಣ ತಮಗಿಷ್ಟವಾದ ಮೂರು ಜಿಲ್ಲೆಗಳತ್ತ ಆಡಳಿತ ಯಂತ್ರವನ್ನೇ ತಿರುಗಿಸಿ ನಿಲ್ಲಿಸುವುದರಲ್ಲಿ ನಿರಂತರ ಶ್ರಮ ಹಾಕುತ್ತಿದ್ದಾರೆ.

ಇನ್ನು ಮಂಡ್ಯ, ಹಾಸನ ಜಿಲ್ಲೆಗಳ ಕಟ್ಟಡ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಶರವೇಗದಲ್ಲಿ ಒಪ್ಪಿಗೆ ನೀಡಿ ಅನುದಾನ ಕೊಡಿಸುವುದರಲ್ಲಿ ರೇವಣ್ಣ ಯಶಸ್ವಿಯಾಗಿದ್ದಾರೆ. ಈ ಎರಡೂ ಜಿಲ್ಲೆ ಸೇರಿ 100 ಕೋಟಿ ರೂ. ಗೂ ಅಧಿಕ ಕಾಮಗಾರಿ ನಡೆಯಲಿದೆ. ಇಲ್ಲಿಯೂ ಕೆಟಿಪಿಪಿ ಕಾಯಿದೆ ಪಾಲನೆಯಾಗಿಲ್ಲ. ಬದಲಾಗಿ 4ಜಿ ಅಡಿ ವಿನಾಯಿತಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

4ಜಿ ದುರ್ಬಳಕೆ?

ಪಾರದರ್ಶಕ ಕಾಯಿದೆ ಅನುಸಾರ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕು. ಆದರೆ, ಸರಕಾರದ ಅಧೀನದ ಭೂಸೇನಾ ನಿಗಮ ಹಾಗೂ ಕಿಯೋನಿಕ್ಸ್‌ ಸಂಸ್ಥೆಗಳು ಕೈಗೆತ್ತಿಕೊಳ್ಳುವ ತುರ್ತು ಕಾಮಗಾರಿಗಳಿಗೆ 4ಜಿ ಅಡಿ ವಿನಾಯಿತಿ ನೀಡಬಹುದು. ಅಂದರೆ ಇದಕ್ಕೆ ಟೆಂಡರ್‌ ಆಹ್ವಾನಿಸುವ ಅವಶ್ಯಕತೆ ಇರುವುದಿಲ್ಲ. ಕಾಯಿದೆಯಲ್ಲಿನ ಈ ಅಂಶವನ್ನೇ ಊರುಗೋಲಾಗಿ ಬಳಸಿಕೊಂಡು ಮೂರು ಜಿಲ್ಲೆಗಳ ಕೋಟ್ಯಂತರ ರೂ. ಕಾಮಗಾರಿಗೆ 4ಜಿ ಅಸ್ತ್ರ ಪ್ರಯೋಗ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭೂಸೇನಾ ನಿಗಮ ಹಾಗೂ ಕಿಯೋನಿಕ್ಸ್‌ ಸಂಸ್ಥೆಗಳಿಗೂ ವಿಶೇಷ ಪ್ರಕರಣವಿದ್ದಾಗ ಮಾತ್ರ 4ಜಿ ವಿನಾಯಿತಿ ಕೊಡಬಹುದು. ಸಾಮಾನ್ಯವಾಗಿ ಕಂಪ್ಯೂಟರ್‌, ಸ್ಟೆಷನರಿ ವಸ್ತುಗಳ ಸರಬರಾಜಿಗೆ 4ಜಿ ಅನ್ವಯ ವಿನಾಯಿತಿ ತೆಗೆದುಕೊಳ್ಳಲಾಗುತ್ತದೆ. ಬೃಹತ್‌ ಕಾಮಗಾರಿಗಳಿಗೆ ಇದನ್ನು ಉಪಯೋಗಿಸಿಕೊಳ್ಳುವಂತಿಲ್ಲ. ಈ ಸಂಬಂಧ ವಿವರವಾದ ಮಾರ್ಗಸೂಚಿಯನ್ನೇ ನೀಡಲಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ