ಆ್ಯಪ್ನಗರ

ಕೆಪಿಎಸ್‌ಸಿಗೆ ಹೈಕೋರ್ಟ್‌ನಿಂದ 1 ಲಕ್ಷ ರೂ. ದಂಡ

ಬೆಂಗಳೂರು: 1998, 1999 ಹಾಗೂ 2004ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕ ಪ್ರಕರಣ ಸಂಬಂಧ 2016ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್‌ 1 ಲಕ್ಷ ರೂ. ದಂಡ ವಿಧಿಸಿದೆ.

Vijaya Karnataka 23 Jul 2019, 5:00 am
ಬೆಂಗಳೂರು: 1998, 1999 ಹಾಗೂ 2004ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕ ಪ್ರಕರಣ ಸಂಬಂಧ 2016ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್‌ 1 ಲಕ್ಷ ರೂ. ದಂಡ ವಿಧಿಸಿದೆ.
Vijaya Karnataka Web BNG-2112-2-2-GAVEL


ಅನಗತ್ಯವಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕೆಪಿಎಸ್‌ಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಳಿಸಿರುವ ನ್ಯಾ. ರವಿ ಮಳೀಮಠ್‌ ಮತ್ತು ನ್ಯಾ. ಬಿ. ವೀರಪ್ಪ ಅವರಿದ್ದ ವಿಶೇಷ ವಿಭಾಗೀಯ ಪೀಠ ದಂಡ ವಿಧಿಸಿ ಆದೇಶ ನೀಡಿದೆ. ಕಳೆದ ಜು.5ರಂದೇ ಕೋರ್ಟ್‌ ಅರ್ಜಿ ಮಾಡಿತ್ತು.

''2002ರಿಂದಲೂ ಈ ವಿಚಾರ ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಅಲೆದಾಡುತ್ತಿದ್ದಾರೆ. ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ಆದೇಶಗಳನ್ನು ನ್ಯಾಯಾಲಯ ಜಾರಿಗೊಳಿಸಬೇಕು. ಆದರೆ ಅವು ಅನಗತ್ಯ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯ ಆದೇಶ ಜಾರಿಗೊಳಿಸುವ ತಮ್ಮ ಸಾಂಸ್ಥಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ. 2016ರಲ್ಲೇ ಆದೇಶ ನೀಡಿದ್ದರೂ ಜಾರಿಗೊಳಿಸಿಲ್ಲ, ಸರಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾಗಿ ಈ ರೀತಿ ಗೊಂದಲ ಇದೆ ಎಂಬ ವಿಷಯವನ್ನು ಏಕೆ ನ್ಯಾಯಪೀಠದ ಗಮನಕ್ಕೆ ತರಲಿಲ್ಲ? ಆಯೋಗದ ಕ್ರಮ ಸಮರ್ಥನೀಯವಲ್ಲ,'' ಎಂದು ನ್ಯಾಯಪೀಠ ಹೇಳಿದೆ.

''ಹೈಕೋರ್ಟ್‌ ನೀಡಿದ್ದ ತೀರ್ಪಿನ ಎರಡು ಹಾಗೂ ಮೂರನೇ ಅಂಶಗಳ ಜಾರಿಯಲ್ಲಿ ತೊಡಕಾಗುತ್ತಿದೆ. ಮೂರನೇ ಅಂಶ ಜಾರಿಗೊಳಿಸಿದರೆ ಎರಡನೇ ಅಂಶದ ಪ್ರಕಾರ ಪರಿಷ್ಕರಿಸುವ ಆಯ್ಕೆ ಪಟ್ಟಿ ಮತ್ತೆ ಪರಿಷ್ಕರಣೆ ಮಾಡಬೇಕಾಗುತ್ತದೆ.ಎರಡನೇ ಅಂಶ ಜಾರಿಗೊಳಿಸಿದರೆ ಮೂರನೇ ಅಂಶ ಜಾರಿಗೊಳಿಸಲಾಗದು. ಆದ್ದರಿಂದ ನ್ಯಾಯಾಲಯವೇ ಸ್ಪಷ್ಟನೆ ನೀಡಬೇಕು,'' ಎಂದು ಕೆಪಿಎಸ್‌ಸಿ ಮನವಿ ಮಾಡಿತ್ತು.

ಎರಡನೇ ಅಂಶ ಕಳಂಕಿತ 140 ಅಧಿಕಾರಿಗಳಿಗೆ ಹಿಂಬಡ್ತಿ ಮುಂಬಡ್ತಿ ನೀಡುವುದು ಹಾಗೂ ಹೊಸದಾಗಿ 28 ಮಂದಿಗೆ ಉದ್ಯೋಗ ನೀಡುವುದಾಗಿದ್ದು, ಮೂರನೇ ಅಂಶ ಮರು ಮಾಲ್ಯಮಾಪನ ಮಾಡಲಾದ ಶೇ.10ರಷ್ಟು ಪತ್ರಿಕೆಗಳ ಭಾಗವಾಗಿರುವ 91 ಉತ್ತರ ಪತ್ರಿಕೆಗಳನ್ನು ಪರಿಗಣಿಸಬೇಕು ಎಂಬುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ