ಆ್ಯಪ್ನಗರ

ಕಣ್ಣುಮುಚ್ಚಿ ಕುಳಿತ ಚುನಾವಣಾ ಆಯೋಗ: ಎಚ್ಕೆಪಿ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ಸಿಂಗ್‌ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ...

Vijaya Karnataka Web 9 Apr 2019, 5:00 am
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ಸಿಂಗ್‌ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಅವರು ಸಂವಿಧಾನಿಕ ಜವಾಬ್ದಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web 0804-2-2-KSG_021 (46)


ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಅವರು ''ಮೋದಿ ಸೇನಾ ಉಡುಪು ಧರಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ದೇಶದ್ರೋಹ. ನೀತಿ ಸಂಹಿತೆಗೆ ವಿರುದ್ಧವಾದುದು. ಹೀಗಾಗಿ ಅವರನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಬೇಕು'' ಎಂದು ಆಗ್ರಹಿಸಿದರು.

''ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳುವ ಮೂಲಕ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರಕ್ಷಣಾ ಪಡೆಗಳಿಗೆ ಅಪಮಾನ ಮಾಡಿರುವುದು ಕ್ರಿಮಿನಲ್‌ ಅಪರಾಧ. ರಾಜ್ಯಪಾಲ ಕಲ್ಯಾಣಸಿಂಗ್‌ ಬಿಜೆಪಿ ಪರವಾಗಿ ಮಾತನಾಡುತ್ತಿದ್ದರೆ, ಕಾಂಗ್ರೆಸ್‌ ಪ್ರಣಾಳಿಕೆ ಅನುಷ್ಠಾನ ಯೋಗ್ಯವಲ್ಲ ಎಂಬ ನೀತಿ ಆಯೋಗದ ಉಪಾಧ್ಯಕ್ಷರ ನಡವಳಿಕೆ ಖಂಡನೀಯವಾಗಿದೆ'' ಎಂದರು.

ಮೈತ್ರಿ ಗೊಂದಲಕ್ಕೆ ಪರಿಹಾರ

''ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟದಲ್ಲಿ ಮಂಡ್ಯ, ಮೈಸೂರು ಮತ್ತು ತುಮಕೂರು ಕ್ಷೇತ್ರಗಳಲ್ಲಿನ ಗೊಂದಲವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಗೆಹರಿಸುತ್ತಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''10 ವರ್ಷ ಪ್ರಧಾನಿಯಾಗಿ ಡಾ.ಮನಮೋಹನ್‌ಸಿಂಗ್‌ ಮಾಡಿರುವ ಸಾಧನೆ ದೊಡ್ಡದು. ಜಾಗತೀಕರಣ, ಉದಾರೀಕರಣದ ಹಿನ್ನೆಲೆಯಲ್ಲಿ ಅವರು ಕೈಗೊಂಡಿದ್ದ ಆರ್ಥಿಕ ಕ್ರಮಗಳು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿದ್ದವು. ಅದನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್‌ ಚುನಾವಣೆ ಎದುರಿಸುತ್ತಿದೆ. ಆದರೆ, ಬಿಜೆಪಿ ಸುಳ್ಳಿನ ಮೂಲಕವೇ ದೇಶದ ಜನರನ್ನು ನಂಬಿಸಲು ಹೊರಟಿದೆ. ಹೀಗಾಗಿ, ಬಿಜೆಪಿ ಮತ್ತೊಮ್ಮೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಎಂಬ ಸುಳ್ಳಿನ ಕಂತೆಯನ್ನು ಜನ ನಂಬುವುದಿಲ್ಲ,'' ಎಂದು ಹೇಳಿದರು.

ಸ್ಥಾನಮಾನದ ನಿರೀಕ್ಷೆ

''ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದ ಬಗ್ಗೆ ತಮಗೆ ಬೇಸರವಿಲ್ಲ. ಸಚಿವನಾಗಿ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಮಂತ್ರಿ ಸ್ಥಾನಕ್ಕಿಂತ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ದೊಡ್ಡದು. ಉತ್ತಮ ಸಾಧನೆ ತೋರಿದರೆ ಭವಿಷ್ಯದಲ್ಲಿ ಸಿಎಂ ಗಾದಿ ಸೇರಿ ಇನ್ನೂ ಒಳ್ಳೆಯ ಸ್ಥಾನಮಾನಗಳು ನನಗೆ ಸಿಗುವ ವಿಶ್ವಾಸವಿದೆ'' ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ