ಆ್ಯಪ್ನಗರ

ದಿಢೀರ್‌ ದಿಲ್ಲಿಗೆ ತೆರಳಿದ ಆರಗ ಜ್ಞಾನೇಂದ್ರ! ಗುರುವಾರವೇ ಸಂಪುಟಕ್ಕೆ ಸರ್ಜರಿ? ಕುತೂಹಲ ಕೆರಳಿಸಿದ ಬೆಳವಣಿಗೆ!

ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ವೇಳೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ರಾಷ್ಟ್ರ ರಾಜಧಾನಿ ದಿಲ್ಲಿಗೆ ಭೇಟಿ ನೀಡಿದ್ದಾರೆ. ಇದು ಈಗ ಭಾರೀ ಕುತೂಹಲ ಕೆರಳಿಸಿದ್ದು, ವರಿಷ್ಠರು ಜ್ಞಾನೇಂದ್ರ ಅವರಿಗೆ ಮಹತ್ವದ ಸೂಚನೆ ನೀಡಲು ಕರೆಸಿಕೊಂಡಿದ್ದಾರಾ ಅಥವಾ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ದಿಲ್ಲಿಗೆ ತೆರಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

Reported byಇರ್ಷಾದ್ ಉಪ್ಪಿನಂಗಡಿ | Edited byಅವಿನಾಶ ವಗರನಾಳ | Vijaya Karnataka Web 11 May 2022, 10:53 pm

ಹೈಲೈಟ್ಸ್‌:


  • ಕುತೂಹಲ ಕೆರಳಿಸಿದ ಕರ್ನಾಟಕ ಸಚಿವ ಸಂಪುಟ ಸರ್ಜರಿಯ ಕಸರತ್ತು
  • ರಾಷ್ಟ್ರ ರಾಜಧಾನಿ ದಿಲ್ಲಿಗೆ ದಿಢೀರ್‌ ತೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ
  • ಗುರುವಾರವೇ ಸಂಪುಟಕ್ಕೆ ಸರ್ಜರಿ ಆಗುವ ಸಾಧ್ಯತೆ!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web minister
ಬೆಂಗಳೂರು: ಸಂಪುಟ ವಿಸ್ತರಣೆ/ಪುನಾರಚನೆ ಕುರಿತಾದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಬುಧವಾರ ಸಂಜೆಯ ಬಳಿಕ ದೆಹಲಿಗೆ ತೆರಳಿದ ಅವರು ವರಿಷ್ಠರನ್ನು ಭೇಟಿ ಆಗಿ ಗುರುವಾರ ವಾಪಸ್ ಆಗುವ ಸಾಧ್ಯತೆ ಇದೆ.
ಗೃಹ ಸಚಿವರ ದೆಹಲಿ ಭೇಟಿಯ ಹಿಂದೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಅವರ ಆಪ್ತ ಮೂಲಗಳು ಹೇಳುತ್ತಿದ್ದರೂ ಸದ್ಯದ ಬೆಳವಣಿಗೆ ಹಿನ್ನೆಲೆಯಲ್ಲಿ ಈ‌ ದಿಢೀರ್ ಭೇಟಿ ಸಹಜವಾಗಿ ಕುತೂಹಲಕ್ಕೆ ಗ್ರಾಸವಾಗುತ್ತಿದೆ. ಅದಲ್ಲದೇ ತಮ್ಮ ಖಾತೆ ಉಳಿಸಿಕೊಳ್ಳಲು ಆರಗ ಜ್ಞಾನೇಂದ್ರ ದಿಲ್ಲಿಗೆ ತೆರಳಿದ್ದಾರೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ವಿಧಾನ ಪರಿಷತ್ ಚುನಾವಣೆಯ ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ‌

ಸಿಎಂ ದೆಹಲಿಯಲ್ಲಿ ಇರುವ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಅವರು ಇದೀಗ ದಿಢೀರಾಗಿ ದೆಹಲಿಗೆ ತೆರಳಿರುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ ದೆಹಲಿಯಲ್ಲಿ ಆರಗ ಜ್ಞಾನೇಂದ್ರ ವರಿಷ್ಠ ರನ್ನು ಭೇಟಿ ಮಾಡ್ತಾರಾ? ವರಿಷ್ಠರಿಂದ ಏನಾದರೂ ಸೂಚನೆ ನೀಡಲಾಗುತ್ತಾ? ಎಂಬ ಕುತೂಹಲ ಕೆರಳಿದೆ. ಗುರುವಾರವೇ ಸಚಿವ ಸಂಪುಟಕ್ಕೆ ಸರ್ಜರಿ ನಡೆಯುತ್ತದೆ ಎನ್ನಲಾಗುತ್ತಿದೆ.

ಕುತೂಹಲ ಕೆರಳಿಸಿದ ಸಂಪುಟ ಸರ್ಜರಿ ಕಸರತ್ತು! ಯಾವಾಗ ಏನ್‌ ಬೇಕಾದ್ರೂ ಆಗಬಹುದು ಎಂದ ಬೊಮ್ಮಾಯಿ
ಯಾವಾಗ ಏನಾದ್ರೂ ಆಗಬಹುದು ಎಂದಿದ್ದ ಸಿಎಂ!
ಇನ್ನು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಯಾವಾಗ ಏನಾದ್ರೂ ಆಗಬಹುದು ಎಂದು ಹೇಳಿ ಕುತೂಹಲ ಕೆರಳಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜಕೀಯ ಸ್ಥಿತಿಗತಿಗಳು, ಸಚಿವ ಸಂಪುಟದ ಬಗ್ಗೆ ಚರ್ಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಪರಿಣಾಮಗಳೇನು, ಚುನಾವಣಾ ಆಯೋಗದ ನಿರ್ಧಾರ, ಸಚಿವ ಸಂಪುಟದ ವಿಸ್ತರಣೆ ಇವೆಲ್ಲವುಗಳ ತೀರ್ಮಾನಗಳೆಲ್ಲವನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದರು.

ಬೊಮ್ಮಾಯಿಗೆ ಸಿಗದ ಅಮಿತ್‌ ಶಾ, ಜೆಪಿ ನಡ್ಡಾ ಭೇಟಿ ಅವಕಾಶ! ಮತ್ತಷ್ಟು ಕಗ್ಗಂಟಾದ ಸಂಪುಟ ಸರ್ಕಸ್!
ಬರುವ ಎರಡು ಮೂರು ದಿನಗಳ ರಾಜಕೀಯ ಬೆಳವಣಿಗೆಯ ಆಧಾರದ ಮೇಲೆ ನಿರ್ಣಯವನ್ನು ತಿಳಿಸುವುದಾಗಿ ಹೇಳಿದ್ದಾರೆ. ಮುಂಬರಲಿರುವ ರಾಜ್ಯಸಭಾ, ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಚಿವ ಸಂಪುಟದ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಮಂಗಳವಾರ ದಿಲ್ಲಿಗೆ ಬಸವರಾಜ ಬೊಮ್ಮಾಯಿ; ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜತೆ ಚರ್ಚೆ?
ಕ್ಯಾಬಿನೆಟ್‌ನಲ್ಲಿ 5 ಸ್ಥಾನಗಳು ಖಾಲಿ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಸಚಿವ ಸಂಪುಟದಲ್ಲಿ ಒಟ್ಟು ಐದು ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆಯಾದರೆ 5 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಆದರೆ, ಹೈಕಮಾಂಡ್‌ ತಲೆಯಲ್ಲಿ ಸಂಪುಟ ಪುನಾರಚನೆ ಮಾಡಿ ಒಂದಿಷ್ಟು ಹಿರಿಯ ನಾಯಕರಿಗೆ ಪಕ್ಷ ಸಂಘಟನೆಯ ಕೆಲಸ ನೀಡಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂಬುದು ಇದೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ಚುನಾವಣಾ ವರ್ಷ ಆಗಿರುವುದರಿಂದ ಎಲ್ಲ ವರ್ಗಗಳಿಗೂ, ಎಲ್ಲ ಪ್ರದೇಶಕ್ಕೂ ಪ್ರಾತಿನಿಧ್ಯ ನೀಡಬೇಕೆಂಬ ಚಿಂತನೆ ಇದೆ ಎನ್ನಲಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ