ಆ್ಯಪ್ನಗರ

ಉಪಚಾರವೂ ಇಲ್ಲ, ಉಪಾಹಾರವೂ ಇಲ್ಲ: ಚಿಕಿತ್ಸೆ ಸಿಗದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ!

ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಸರಕಾರ ಕೋಟ್ಯಂತರ ರುಪಾಯಿ ಸುರಿಯುತ್ತಿದೆ. ಆದರೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಅವರ ನೋವು, ಸಂಕಟ ಹೇಳತೀರದು. ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಬಹಳಷ್ಟು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಿನ್ನಲು ಗುಣಮಟ್ಟದ ಆಹಾರ, ತಿಂಡಿಗಳೇ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆಗಳು ಕೋವಿಡ್‌ ಆಸ್ಪತ್ರೆಗಳಾದ್ದರಿಂದ ಇತರ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ಸಂಕಟ ಅನುಭವಿಸುತ್ತಿದ್ದಾರೆ. ಹೀಗೆ ಅನೇಕ ಸಮಸ್ಯೆಗಳ ಆಗರವಾಗಿದೆ ಕೋವಿಡ್ ಆಸ್ಪತ್ರೆಗಳು. ವೈದ್ಯ ಸಿಬ್ಬಂದಿಗಳ ಬೇಜವಾಬ್ದಾರಿ, ಸಮನ್ವಯ ಕೊರತೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೊಣೆಗೇಡಿತನದಿಂದಾಗಿ ಸರಕಾರದ ಶ್ರಮ ವ್ಯರ್ಥವಾಗುತ್ತಿದೆ.

Vijaya Karnataka Web 23 Sep 2020, 8:57 am
ಬೆಂಗಳೂರು: ಕೋವಿಡ್‌ 19 ನಿಯಂತ್ರಿಸಲು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ರಾಜ್ಯ ಸರಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ನಿರಂತರ ಸಭೆ, ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಆದರೆ, ಸರಕಾರಿ ಆಸ್ಪತ್ರೆಗಳ ಕೋವಿಡ್‌ ವಾರ್ಡ್‌ಗಳಲ್ಲಿ ರೋಗಿಗಳ ಪ್ರಾಣ ಸಂಕಟ ನಿಂತಿಲ್ಲ. ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಕಾಲಿಕ ಉಪಚಾರವೂ ಇಲ್ಲ, ಕಾಲಕಾಲಕ್ಕೆ ಉಪಾಹಾರವೂ ಇಲ್ಲ ಎಂಬ ಸಂಗತಿ ವಿಕ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬೆಳಕಿಗೆ ಬಂದಿದೆ.'ಸೋಂಕಿತರಿಗೆ ಚಿಕಿತ್ಸೆ ಜತೆಗೆ ಸಕಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಶುಚಿ-ರುಚಿಯಾದ ಪೌಷ್ಟಿಕ ಆಹಾರವನ್ನೇ ಸೋಂಕಿತರಿಗೆ ನೀಡಲಾಗುತ್ತಿದೆ' ಎಂದು ಸರಕಾರ ಹೇಳುತ್ತಿದೆ. ಆದರೆ ಸರಕಾರಿ ಕೋವಿಡ್‌ ಆಸ್ಪತ್ರೆಗೆ ಹೋಗಿ ಬಂದವರು ಅಲ್ಲಿನ ಅವ್ಯವಸ್ಥೆ ಹಾಗೂ ಚಿಕಿತ್ಸೆ ನೀಡದೆ ಸತಾಯಿಸುವ ವೈದ್ಯ ಸಿಬ್ಬಂದಿ ವಿರುದ್ಧ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಕೆಲವು ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಅಂದರೆ, ತುತ್ತು ಊಟಕ್ಕೂ ಪರದಾಡಬೇಕಾಗಿದೆ. ಅಲ್ಲಿಯ ಅಸ್ವಚ್ಛತೆಯಿಂದ ಮತ್ತಷ್ಟು ಹೊಸ ಕಾಯಿಲೆ ಬರುವಂತಾಗಿದೆ. ಕೋವಿಡ್‌ ಸೋಂಕಿತರು ಒಮ್ಮೆ ಆಸ್ಪತ್ರೆ ಸೇರಿದರೆ ಮುಗಿಯಿತು. ರೋಗಿಗಳನ್ನು ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರು ಭೇಟಿ ಮಾಡಲು ಅವಕಾಶವಿಲ್ಲ. ಹಾಗಾಗಿ ರೋಗಿಗಳು ಪ್ರತಿಯೊಂದಕ್ಕೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನೇ ಅವಲಂಬಿಸಬೇಕಾಗುತ್ತದೆ. ಆದರೆ ಅಲ್ಲಿ ಸಿಬ್ಬಂದಿಯಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಿ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ರೋಗಿಗಳು ಪ್ರಾಣ ಬಿಡುತ್ತಿದ್ದಾರೆ.
Vijaya Karnataka Web hospitals not give proper treatment to covid 19 patients
ಉಪಚಾರವೂ ಇಲ್ಲ, ಉಪಾಹಾರವೂ ಇಲ್ಲ: ಚಿಕಿತ್ಸೆ ಸಿಗದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ!



​ಸೂಕ್ತ ಚಿಕಿತ್ಸೆ ಸಿಗದೆ ಸಾವು

ಒಂದೆಡೆ ಆರೈಕೆ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗುತ್ತಿದೆ. ಆದರೆ ಮನೆಯಲ್ಲಿ ಸೋಂಕು ಉಲ್ಬಣಿಸಿ, ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆ ಸೇರಲು ಹೊರಟರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಬೆಡ್‌ ಸಿಗುತ್ತಿಲ್ಲ ಎಂಬ ಆತಂಕದಿಂದಲೇ ರೋಗಿಗಳು ಹೃದಯಾಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಬೆಂಗಳೂರಲ್ಲಿ 2 ಲಕ್ಷ ದಾಟಿದ ಕೊರೊನಾ..! ರಾಜ್ಯದಲ್ಲಿ ತಗ್ಗಿದ ಸೋಂಕಿನ ವೇಗ

​ಖಾಸಗಿ ಆಸ್ಪತ್ರೆಗಳ ಬೆಡ್‌ ಬ್ಲಾಕ್‌!

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಬೇಕಿದೆ. ಇದರ ವೆಚ್ಚ ಸರಕಾರವೇ ಭರಿಸುತ್ತದೆ. ಆದರೆ ಅಲ್ಲಿ ಸಾಮಾನ್ಯ ಸೋಂಕಿತರು ಕೇಳಿದರೆ ಹಾಸಿಗೆ ಲಭ್ಯವಿಲ್ಲ ಎಂಬ ಉತ್ತರ ಬರುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಮೂಲಕವೇ ರೋಗಿಯು ಕೋವಿಡ್‌ ಆಸ್ಪತ್ರೆ ಸೇರಬೇಕು. ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಎಂದೂ ಖಾಸಗಿ ಆಸ್ಪತ್ರೆಗೆ ಸೋಂಕಿತರನ್ನು ಸೇರಿಸುವ ಕೆಲಸ ಮಾಡುವುದೇ ಇಲ್ಲ. ಶಾಸಕರು, ಸಚಿವರು, ಅಧಿಕಾರಿಗಳ ಪ್ರಭಾವ ಬಳಸಿದವರು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಸೀಟು ಗಿಟ್ಟಿಸುತ್ತಾರೆ. ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಪ್ರಭಾವಿಗಳು ಬ್ಲಾಕ್‌ ಮಾಡಿಡುತ್ತಿದ್ದಾರೆ. ಹಾಗಾಗಿ ಸಾಮಾನ್ಯ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿಲ್ಲ.

ಶೀಘ್ರದಲ್ಲೇ ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆಯ ಪ್ರಯೋಗ ಆರಂಭ

​ಆ್ಯಂಬುಲೆನ್ಸ್‌ ಕೂಡ ಸಿಗುತ್ತಿಲ್ಲ!

ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಸರಕಾರ ಸಾವಿರಾರು ಆ್ಯಂಬುಲೆನ್ಸ್‌ ಮೀಸಲಿರಿಸಿದೆ. ಜಿಲ್ಲಾಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿ ವಾರ್ಡ್‌ಗೆ ಎರಡು ಆ್ಯಂಬುಲೆನ್ಸ್‌ ಖರೀದಿಸಲಾಗಿದೆ ಅಥವಾ ಬಾಡಿಗೆಗೆ ಪಡೆಯಲಾಗಿದೆ. ಇಷ್ಟೊಂದು ವಾಹನಗಳು ಇದ್ದರೂ ಕೊರೊನಾ ಪಾಸಿಟಿವ್‌ ಬಂದರೆ, 'ನೀವೇ ಆಸ್ಪತ್ರೆಗೆ ಬನ್ನಿ' ಎಂದು ವೈದ್ಯ ಸಿಬ್ಬಂದಿ ಹೇಳುತ್ತಿದ್ದಾರೆ. ಇದರಿಂದಾಗಿ ಸೋಂಕು ಮತ್ತಷ್ಟು ಜನರಿಗೆ ಹರಡುವಂತಾಗಿದೆ.

ಭಾರತಕ್ಕೆ 10 ಕೋಟಿ ಡೋಸ್‌ ಕೊರೊನಾ ಲಸಿಕೆ ಮಾರಾಟಕ್ಕೆ ರಷ್ಯಾ ನಿರ್ಧಾರ

​ಸರಕಾರಿ ಆಸ್ಪತ್ರೆಗಳ ಸಾಮಾನ್ಯ ಸಮಸ್ಯೆಗಳೇನು?

  • ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ.
  • ಬಹಳಷ್ಟು ಆಸ್ಪತ್ರೆಗಳಲ್ಲಿ ಗುಣಮಟ್ಟದ ಆಹಾರ, ತಿಂಡಿ ಸಿಗುತ್ತಿಲ್ಲ.
  • ತಾಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡ.
  • ಕೆಲವೆಡೆ ವೆಂಟಿಲೇಟರ್‌ಗಳಿದ್ದರೂ ಅವುಗಳ ಬಳಕೆ ಬಗ್ಗೆ ಸಿಬ್ಬಂದಿಗೆ ತಿಳಿದಿಲ್ಲ.
  • ತಾಲೂಕು ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ.
  • ಜಿಲ್ಲಾಸ್ಪತ್ರೆಗಳು ಕೋವಿಡ್‌ ಆಸ್ಪತ್ರೆಗಳಾದ್ದರಿಂದ ಇತರ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ.
  • ಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್‌ಗಳು
  • ಕೆಲವು ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಹೆಚ್ಚಾಗಿದೆ. ಸರಿಯಾದ ಔಷಧ ನೀಡುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ