ಆ್ಯಪ್ನಗರ

ಪರಶುರಾಮ್‌ ವಾಗ್ಮೋರೆ ಸುಳಿವು ಸಿಕ್ಕಿದ್ದು ಹೇಗೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಪರಶುರಾಮ್‌ ವಾಗ್ಮೋರೆ ಸುಳಿವು ಮೊದಲ ಬಾರಿಗೆ ಎಸ್‌ಐಟಿ ಆಧಿಕಾರಿಗಳಿಗೆ ಸಿಕ್ಕಿದ್ದು ಸುಂಕದಕಟ್ಟೆ ನಿವಾಸಿ ಸುರೇಶ್‌ ಎಂಬಾತ ನೀಡಿದ ಸುಳಿವಿನಿಂದ. ಈತನ ರೂಮಿನಲ್ಲೇ ಸುಜಿತ್‌ ಅಲಿಯಾಸ್‌ ಪ್ರವೀಣ್‌ ಹಾಗೂ ಪರಶುರಾಮ್‌ ಕೆಲ ಕಾಲ ತಂಗಿದ್ದರು.

Vijaya Karnataka 14 Jun 2018, 9:58 am
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಪರಶುರಾಮ್‌ ವಾಗ್ಮೋರೆ ಸುಳಿವು ಮೊದಲ ಬಾರಿಗೆ ಎಸ್‌ಐಟಿ ಆಧಿಕಾರಿಗಳಿಗೆ ಸಿಕ್ಕಿದ್ದು ಸುಂಕದಕಟ್ಟೆ ನಿವಾಸಿ ಸುರೇಶ್‌ ಎಂಬಾತ ನೀಡಿದ ಸುಳಿವಿನಿಂದ. ಈತನ ರೂಮಿನಲ್ಲೇ ಸುಜಿತ್‌ ಅಲಿಯಾಸ್‌ ಪ್ರವೀಣ್‌ ಹಾಗೂ ಪರಶುರಾಮ್‌ ಕೆಲ ಕಾಲ ತಂಗಿದ್ದರು. ಗೌರಿ ಹತ್ಯೆಯಾದ ಸೆ.5 ರಂದೇ ಇವರು ರೂಮು ಖಾಲಿ ಮಾಡಿದ್ದರು. ಸುಂಕದಕಟ್ಟೆಯ ಸುರೇಶ್‌ ನೀಡಿದ್ದ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆ ಆಗದಂತೆ ನೋಡಿಕೊಂಡಿದ್ದರಿಂದಲೇ ಪ್ರಮುಖ ಆರೋಪಿ ಪರಶುರಾಮ್‌ನನ್ನು ಬಂಧಿಸಲು ಸಾಧ್ಯವಾಯಿತು ಎನ್ನುತ್ತಾರೆ ಎಸ್‌ಐಟಿ ಅಧಿಕಾರಿಗಳು.
Vijaya Karnataka Web parshuram wagmare


ಗೌರಿ ಹತ್ಯೆ ಬಳಿಕ ಸಣ್ಣದೊಂದು ಸುಳಿವೂ ಇಲ್ಲದೆ ಎಸ್‌ಐಟಿ ಕಂಗಾಲಾಗಿತ್ತು. ಹತ್ಯೆ ನಡೆದ ಆಜುಬಾಜು ರೂಮು ಬಾಡಿಗೆ ಪಡೆದ ಮತ್ತು ಖಾಲಿ ಮಾಡಿದ ಮಾಹಿತಿ ನೀಡುವಂತೆ ಪ್ರಚುರಪಡಿಸಿದ್ದರಿಂದ ಟೀಕೆಗಳೂ ವ್ಯಕ್ತವಾಗಿದ್ದವು. ಆದರೆ ಈ ಪ್ರಯತ್ನಕ್ಕೇ ಫಲ ಸಿಕ್ಕಿದೆ.

ಕಟ್ಟಡ ನಿರ್ಮಾಣ ವ್ಯವಹಾರ ನಡೆಸುವ ಸುಂಕದಕಟ್ಟೆ ನಿವಾಸಿ ಸುರೇಶ್‌, ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿ ಗೌರಿ ಹತ್ಯೆಗೂ ಒಂದು ತಿಂಗಳ ಮೊದಲು ತಮ್ಮ ರೂಮಿನಲ್ಲೇ ಉಳಿದಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಸುಳಿವು ನೀಡಿದ್ದರು. ಹತ್ಯೆ ನಡೆದ ಸೆ.5 ರಂದು ಬೆಳಗ್ಗೆಯಿಂದ ರಾತ್ರಿವರೆಗೂ ನಾಲ್ಕು ಬಾರಿ ರೂಮಿನಿಂದ ಹೊರಗೆ ಹೋಗಿ ಮತ್ತೆ ರೂಮಿಗೆ ವಾಪಸ್ಸಾಗಿದ್ದಲ್ಲದೆ, ಆ ಇಬ್ಬರು ಕೊಲೆ ನಡೆದ ನಂತರ ರಾತ್ರಿ 9 ಗಂಟೆ ಸುಮಾರಿಗೆ ಲಗೇಜ್‌ ಸಮೇತ ರೂಮು ಖಾಲಿ ಮಾಡಿದ್ದರು ಎನ್ನುವ ಮಾಹಿತಿ ನೀಡಿದ್ದರು. ಆ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ ಒಬ್ಬಾತನ ಹೆಸರು ಸುಜಿತ್‌ ಅವರು ಮರಾಠಿಯಲ್ಲಿ ಮಾತನಾಡುತ್ತಿದ್ದರು ಎನ್ನುವುದು ಗೊತ್ತಾಗಿತ್ತು.

ಗೌಪ್ಯ ತಂತ್ರಗಾರಿಕೆ

ತನಿಖೆಯ ಭಾಗ ಆಗಿರುವ ಅಧಿಕಾರಿಯೊಬ್ಬರ ಪ್ರಕಾರ, '' ಬಂಧನದಲ್ಲಿರುವವರನ್ನು 3 ತಿಂಗಳಿನಿಂದಲೂ ಹಿಂಬಾಲಿಸುತ್ತಿದ್ದೆವು, ಮಾಹಿತಿ-ಸುಳಿವು ಸಿಕ್ಕ ತಕ್ಷಣ ಅವರನ್ನು ಬಂಧಿಸಲಿಲ್ಲ. ಸಾಕ್ಷ್ಯಗಳು ಖಚಿತವಾಗಿ ಕೈ ಸೇರುವವರೆಗೂ ನಾವು ಯಾರನ್ನೂ ಬಂಧಿಸಲಿಲ್ಲ. ಹಂತಕರ ಪತ್ತೆಗಿಂತ ಮಾಹಿತಿಗಳ ಗೌಪ್ಯತೆ ಕಾಪಾಡುವುದು ಸವಾಲಾಗಿತ್ತು. ಎಸ್‌ಐಟಿ ಅಧಿಕಾರಿಗಳಿಗಿಂತ ಹಂತಕರ ಜಾಲ ಸದಾ ಜಾಗೃತವಾಗಿರುವುದು ತನಿಖೆಯ ಪ್ರತೀ ಹಂತದಲ್ಲೂ ಗಮನಕ್ಕೆ ಬರುತಿತ್ತು. ಮಾಧ್ಯಮ ಮತ್ತು ಇಲಾಖೆಯಲ್ಲೇ ಇರುವವರ ಮೂಲಕವೂ ಮಾಹಿತಿ ಹೊರಗೆ ತೆಗೆಯಲು ಪ್ರಯತ್ನಿಸಲಾಗುತ್ತಿದೆ ಎನ್ನುವುದೂ ಗೊತ್ತಿತ್ತು. ಆದ್ದರಿಂದ ಎಸ್‌ಐಟಿ ಮುಖ್ಯಸ್ಥರಾದ ಡಿಸಿಪಿ ಅನುಚೇತ್‌ ಮತ್ತು ಹೆಚ್ಚುವರಿ ಆಯುಕ್ತ ಬಿ.ಕೆ.ಸಿಂಗ್‌ ಅವರಿಗೆ ಮಾತ್ರ ತನಿಖೆಯ ಎಲ್ಲಾ ವಿವರಗಳೂ ಗೊತ್ತಾಗುತ್ತಿದ್ದವು. ಎಸ್‌ಐಟಿ ತಂಡದಲ್ಲದ್ದವರಿಗೂ ಒಬ್ಬರು ಮಾಡಿದ ಕೆಲಸ ಇನ್ನೊಬ್ಬರಿಗೆ ಗೊತ್ತಿರುತ್ತಿರಲಿಲ್ಲ. ಆರೋಪಿಗಳೂ ತಮ್ಮ ಬಗ್ಗೆ ಇಲಾಖೆಗೆ ಏನೂ ಗೊತ್ತಿಲ್ಲ ಎಂದೇ ನಂಬಿಕೊಂಡಿದ್ದರು. ಪರಸ್ಪರರ ದೂರ ಉಳಿದಿದ್ದ ಅವರು ನಿಧಾನಕ್ಕೆ ಒಬ್ಬೊಬ್ಬರಾಗಿ ಮತ್ತೆ ಸಂಪರ್ಕಕ್ಕೆ ಬಂದರು. ಕಾಯಿನ್‌ ಬೂತ್‌ಗಳಿಂದ ಕರೆ ಮಾಡಲು ಶುರು ಮಾಡಿದರು. ಈ ಬೆಳವಣಿಗೆ ನಂತರ ಅವರನ್ನು ಬಂಧಿಸಲಾಯಿತು,'' ಎನ್ನುತ್ತಾರೆ .

ಸುರೇಶ್‌ ಹೇಳಿದ್ದೇನು ?

ಸುಜಿತ್‌ ಅಲಿಯಾಸ್‌ ಪ್ರವೀಣ್‌ಗೆ ಬೇರೊಬ್ಬ ಸ್ನೇಹಿತರ ಮೂಲಕ ಸುರೇಶ್‌ ಪರಿಚಯವಾಗಿತ್ತು. ಅದೇ ಪರಿಚಯದ ಮೇಲೆ ಸುರೇಶ್‌ ರೂಮಿನಲ್ಲಿ ಪ್ರವೀಣ್‌ ತಂಗಿದ್ದು. ಕೆಲ ದಿನಗಳ ಬಳಿಕ ತನ್ನ ಸ್ನೇಹಿತನೊಬ್ಬ ಖಾಸಗಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬರುತ್ತಿದ್ದಾನೆ. ಆತ ಕೆಲ ದಿನ ನಿಮ್ಮ ರೂಮಿನಲ್ಲೇ ಉಳಿಯುತ್ತಾನೆ, ಅವಕಾಶ ಮಾಡಿಕೊಡಿ ಎಂದು ಪ್ರವೀಣ್‌ ವಿನಂತಿಸಿದ್ದನಂತೆ. ಸುರೇಶ್‌ ಒಪ್ಪಿಕೊಂಡಾಗ ಪರಶುರಾಮ್‌ ವಾಗ್ಮೋರೆ ಬಂದಿದ್ದ. ಮೊದಲು ವಾರಕ್ಕೆ 2-3 ದಿನ ಮಾತ್ರ ಉಳಿಯುತ್ತಿದ್ದವನು ಆಗಸ್ಟ್‌ ಕೊನೆ ವಾರದಿಂದ ಇಲ್ಲೇ ಇದ್ದು ಬಿಟ್ಟ. ಮರಾಠಿ ಮತ್ತು ಹಿಂದಿಯಲ್ಲಿ ಹೆಚ್ಚು ಮಾತಾಡುತ್ತಿದ್ದ. ಈತನ ಭೇಟಿಗೆ ನವೀನ್‌, ಪ್ರವೀಣ್‌ ಮತ್ತು ಹೊರ ರಾಜ್ಯದವರಂತೆ ಕಾಣುವವರು ಆಗಾಗ ಬಂದು ಹೋಗುತ್ತಿದ್ದರು ಎಂದು ಸುರೇಶ್‌ ಹೇಳಿಕೆ ನೀಡಿದ್ದಾರೆ.

ರಾತ್ರಿ ಖಾಲಿ ಮಾಡಿದರು

''ಸೆ.5 ರಂದು ಬೆಳಗ್ಗೆ 10 ಗಂಟೆಗೆ ರೂಮಿನಿಂದ ಹೋದವರು ಮಧ್ಯಾಹ್ನ 12 ಗಂಟೆಗೆ ಬಂದರು. ಮತ್ತೆ 3 ಗಂಟೆಗೆ ಹೋದವರು 4.30ರ ಸುಮಾರಿಗೆ ಬಂದರು. ಸಂಜೆ ಆರು ಗಂಟೆಗೆ ಮತ್ತೆ ರೂಮಿನಿಂದ ಹೊರಟು 9 ಗಂಟೆಗೆ ಬಂದರು. ರೂಮಿಗೆ ಬಂದು ಕೆಲ ಸಮಯಕ್ಕೇ ರೂಮು ಖಾಲಿ ಮಾಡಿಕೊಂಡು ಹೋದರು. ಆ ನಂತರ ಅವರು ಸಂಪರ್ಕಕ್ಕೆ ಸಿಗಲಿಲ್ಲ,'' ಎಂದು ಸುರೇಶ್‌ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಸುರೇಶ್‌ ನೀಡಿದ ಹೇಳಿಕೆ ಹಾಗೂ ಎಸ್‌ಐಟಿ ಮೊಬೈಲ್‌ ಕರೆ ವಿವರಗಳ ಮೂಲಕ ಸಂಗ್ರಹಿಸಿದ್ದ ತಾಂತ್ರಿಕ ಸಾಕ್ಷ್ಯಕ್ಕೂ ಹೋಲಿಕೆ ಆಗುತ್ತಿತ್ತು. ಹಲವು ಸಿಸಿಟಿವಿಗಳಲ್ಲಿ ಪರಶುರಾಮ್‌ ಮತ್ತು ನವೀನ್‌ ಅವರ ಚಿತ್ರ ಸೆರೆಯಾಗಿತ್ತುಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ತನಿಖೆ ನಡೆಯುತ್ತಿದೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಬಗ್ಗೆ ತನಿಖೆ ನಡೆಯುತ್ತಿದೆ. ಪರಶುರಾಮ ಎಂಬಾತನನ್ನು ಬಂಧಿಸಲಾಗಿದ್ದು, ಈ ಹಂತದಲ್ಲಿ ಮಾಧ್ಯಮಕ್ಕೆ ಯಾವುದೇ ಮಾಹಿತಿ ನೀಡಲು ಇಚ್ಚಿಸುವುದಿಲ್ಲ - ಜಿ.ಪರಮೇಶ್ವರ್‌, ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ