ಆ್ಯಪ್ನಗರ

ಹೈದರಾಬಾದ್‌-ಕರ್ನಾಟಕ ಪ್ರಮಾಣಪತ್ರ ಆದೇಶ ರದ್ದು: ನಿಯಮ ತಿದ್ದುಪಡಿಗೆ ಸರಕಾರಕ್ಕೆ ಕೆಎಟಿ ಆದೇಶ!

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕಲ್ಯಾಣ ಉತ್ಸವ ನಡೆಯುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ)ಯು ಆ ಭಾಗದ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದೆ.

Vijaya Karnataka Web 18 Sep 2020, 6:57 am
ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು
Vijaya Karnataka Web ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಥಳೀಯ ವೃಂದ, ಅಂದರೆ ಹೈದರಾಬಾದ್‌-ಕರ್ನಾಟಕ ವೃಂದ ಪಡೆಯಬೇಕಾದರೆ ಆ ಭಾಗದ ಅಭ್ಯರ್ಥಿಗಳಿಗೆ 45 ದಿನಗಳೊಳಗೆ ತಾವು ಆ ಭಾಗದವರೆಂದು ಅರ್ಹತಾ ಸರ್ಟಿಫಿಕೇಟ್‌ ಸಲ್ಲಿಸಬೇಕಿತ್ತು. ಆದರೆ, ಕೆಎಟಿ ಆ ನಿಯಮ ರದ್ದುಗೊಳಿಸಿದೆ. ಅಲ್ಲದೆ, ಇಂತಹ ಕಾನೂನುಬಾಹಿರ ನಿಯಮದಿಂದಾಗಿ ಸರಕಾರಿ ಅಧಿಕಾರಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಪದೇಪದೆ ನ್ಯಾಯಾಲಯಗಳ ಕದತಟ್ಟುವ ಸ್ಥಿತಿ ಇದೆ. ಹಾಗಾಗಿ, ಸರಕಾರ ಕೂಡಲೇ ಆ ನಿಯಮಕ್ಕೆ ತಿದ್ದುಪಡಿ ಮಾಡಿ, ಅಗತ್ಯ ಸಾರ್ವಜನಿಕ ನೀತಿ ಪ್ರಕಟಿಸಬೇಕು ಎಂದು ಮಹತ್ವದ ಆದೇಶ ನೀಡಿದೆ.

ಕಲ್ಯಾಣ ಕರ್ನಾಟಕದವರೇ ಆದ, ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದ ಸವಿತಾ ಆರ್‌. ಇನಾಮದಾರ್‌ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ. ಆರ್‌. ಬಿ. ಬೂದಿಹಾಳ್‌ ಮತ್ತು ಆಡಳಿತ ಸದಸ್ಯ ಎನ್‌. ಶಿವಶೈಲಂ ಅವರಿದ್ದ ನ್ಯಾಯಪೀಠವು ಇತ್ತೀಚೆಗೆ ಈ ಆದೇಶ ನೀಡಿದೆ.
ಕಲ್ಯಾಣ ಕರ್ನಾಟಕ ದಿನಾಚರಣೆಯಂದೇ ಬಿಎಸ್‌ವೈ ಬಂಪರ್‌ ಕೊಡುಗೆ ಘೋಷಣೆ

ಅರ್ಜಿದಾರರು, ಸ್ಥಳೀಯ ವೃಂದ( ಹೈ-ಕ ವೃಂದ) ಪಡೆಯಲು ಸಲ್ಲಿಸಿದ್ದ ಮನವಿಯನ್ನು 2019ರಲ್ಲಿ ತಿರಸ್ಕರಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಮಂಡಳಿ, ಮೂರು ತಿಂಗಳಲ್ಲಿ ಅವರಿಗೆ ಸ್ಥಳೀಯ ವೃಂದದ ಮೀಸಲು ಒದಗಿಸುವಂತೆ ಆದೇಶಿಸಿದೆ. ಸರಕಾರದ 45 ದಿನಗಳ ನಿಯಮ, 2013ರ ಕಾಯಿದೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಅದನ್ನು ತಿದ್ದುಪಡಿ ಮಾಡಲೇಬೇಕಾಗಿದೆ. ಈ ವಿಚಾರದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದವರ ಗಮನಕ್ಕೆ ತರಬೇಕು ಎಂದೂ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ದವಾಗಿದೆ: ಬಿಎಸ್‌ವೈ

371(ಜೆ) ಅಡಿಯಲ್ಲಿ ಹೊರಡಿಸಿರುವ ಕಾಯಿದೆಯ ಉದ್ದೇಶ ಹೈ-ಕ ಭಾಗದವರಿಗೆ ಉದ್ಯೋಗದಲ್ಲಿ ಮೀಸಲು ಒದಗಿಸುವುದಷ್ಟೇ. ಅದಕ್ಕೆ ಇಂತಿಷ್ಟೇ ದಿನಗಳಲ್ಲಿ ಸ್ಥಳೀಯ ವೃಂದ ಆಯ್ಕೆಗೆ ಪರಿಗಣಿಸಬೇಕಾದರೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮ ಒಪ್ಪಲಾಗದು, ಅದೇ ಕಾರಣಕ್ಕೆ ಮೀಸಲು ಸೌಲಭ್ಯದಿಂದ ವಂಚನೆ ಮಾಡಲಾಗದು.
ಎಂ.ಎಸ್‌. ಭಾಗ್ವತ್‌, ಹೈಕೋರ್ಟ್‌ನ ಹಿರಿಯ ವಕೀಲರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ