ಆ್ಯಪ್ನಗರ

'ಮಂಡ್ಯದ ಗಂಡು' ಎಂದು ಸಾಬೀತು ಪಡಿಸಿದ ಅಂಬರೀಶ್

ಸಿನಿಮಾ ರಂಗದಲ್ಲಿ ‘ರೆಬಲ್‌ ಸ್ಟಾರ್‌’ ಎಂಬ ಖ್ಯಾತಿ ಗಳಿಸಿದ್ದ ಅಂಬರೀಶ್‌ ಅವರು ರಾಜಕಾರಣದಲ್ಲೂ ನಿಷ್ಠುರವಾದಿಯಾಗಿದ್ದರು. ಯಾರ ಮುಲಾಜಿಗೂ ಒಳಗಾಗದವರಂತೆ ರಾಜಕಾರಣ ಮಾಡಿದ್ದ ಅವರು ಸುದೀರ್ಘ ರಾಜಕೀಯ ಬದುಕಿನಲ್ಲೂ ತಮ್ಮ ‘ರೆಬೆಲ್‌ ವ್ಯಕ್ತಿತ್ವ’ದ ಅನಾವರಣ ಮಾಡಿದ್ದರು

Vijaya Karnataka 25 Nov 2018, 7:34 pm
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್‌ ಅವರನ್ನು 2016ರಲ್ಲಿ ನಡೆದ ಸಂಪುಟ ಪುನಾರಚನೆ ಸಂದರ್ಭದಲ್ಲಿ ಹಠಾತ್‌ ಕೈ ಬಿಡಲಾಗಿತ್ತು. ನಂತರದಲ್ಲಿ ಬಹುಪಾಲು ರಾಜಕೀಯ, ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದ ಅಂಬರೀಶ್‌ 2018ರಲ್ಲಿ ನಡೆದ ಚುನಾವಣೆ
Vijaya Karnataka Web Ambi 5

ಸಂದರ್ಭದಲ್ಲಿ ಸ್ಪರ್ಧೆಗೆ ನಿರಾಕರಿಸಿದ್ದರು.

ನನಗೆ ಒಂದೇ ಒಂದು ಮಾತು ತಿಳಿಸದೇ ಸಂಪುಟದಿಂದ ಕೈಬಿಟ್ಟರು ಎಂಬ ಕಾರಣಕ್ಕೆ ‘ರೆಬಲ್‌’ ಆದ ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಆದರೆ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ಸ್ಪೀಕರ್‌ ಕೋಳಿವಾಡ ರಾಜೀನಾಮೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅವಧಿ ಮುಗಿಯುವರೆಗೂ ಶಾಸಕರಾಗಿದ್ದ ಅವರು ಚುನಾವಣೆಗೆ ರಾಜಕೀಯ ಪಕ್ಷಗಳು ಅಣಿಗೊಳ್ಳುತ್ತಿರುವಾಗಲೇಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಅಂಬರೀಶ್‌ ಚುನಾವಣೆ ರಾಜಕಾರಣದಿಂದ ದೂರವುಳಿಯುತ್ತಾರೆಂಬ ಮಾತೇ ಕಾಂಗ್ರೆಸ್‌ಗೆ ಅಪಾಯದ ಮುನ್ಸೂಚನೆ ನೀಡಿತ್ತು. ಹೀಗಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರು ಅಂಬರೀಶ್‌ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಅಂಬರೀಶ್‌ ಮನೆಗೆ ಕಾಂಗ್ರೆಸ್‌ ಪಕ್ಷ ದ ‘ಬಿ ಫಾರ್ಮ್‌’ ಕಳಿಸಿದರೂ ಒಪ್ಪದ ಅವರು, ಚುನಾವಣಾ ಪ್ರಚಾರದಿಂದಲೂ ದೂರವುಳಿಯುವುದಾಗಿ ಘೋಷಿಸಿದ್ದರು. ಖುದ್ದು ಸಿದ್ದರಾಮಯ್ಯನವರೇ ಅಂಬರೀಶ್‌ಗೆ ಕರೆ ಮಾಡಿ ಸಂಧಾನದ ಮಾತನಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಅಂಬರೀಶ್‌ ಗೈರಿನ ಪರಿಣಾಮವಾಗಿ ಮಂಡ್ಯದ ಜತೆಗೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿತ್ತು. ಚುನಾವಣೆ ಮುಕ್ತಾಯವಾಗುವವರೆಗೂ ಮೌನಕ್ಕೆ ಶರಣಾಗಿದ್ದ ಅಂಬರೀಶ್‌ ಮುಂದೆ ಮೌನ ಮುರಿದಿದ್ದು ಫಲಿತಾಂಶದ ದಿನ. ಕಾಂಗ್ರೆಸ್‌ ತನ್ನನ್ನು ಕಡೆಗಣಿಸಿತ್ತು. ಹೀಗಾಗಿ ನಾನು ರಾಜಕಾರಣ ನಿರಾಕರಿಸಿದೆ. ಮಂಡ್ಯದಲ್ಲಿ ಇಂದು ದೊರೆತ ಫಲಿತಾಂಶದಿಂದ ಮಂಡ್ಯದ ಗಂಡು ಎಂಬುದನ್ನು ಸಾಬೀತು ಮಾಡಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯದಲ್ಲೂ ತಮ್ಮ ರೆಬಲ್‌ ಗುಣವನ್ನು ಸಾಬೀತುಪಡಿಸಿದ್ದರು.

ರಾಜಕಾರಣದಲ್ಲೂ ರೆಬೆಲ್


ಸಿನಿಮಾ ರಂಗದಲ್ಲಿ ‘ರೆಬಲ್‌ ಸ್ಟಾರ್‌’ ಎಂಬ ಖ್ಯಾತಿ ಗಳಿಸಿದ್ದ ಅಂಬರೀಶ್‌ ಅವರು ರಾಜಕಾರಣದಲ್ಲೂ ನಿಷ್ಠುರವಾದಿಯಾಗಿದ್ದರು. ಯಾರ ಮುಲಾಜಿಗೂ ಒಳಗಾಗದವರಂತೆ ರಾಜಕಾರಣ ಮಾಡಿದ್ದ ಅವರು ಸುದೀರ್ಘ ರಾಜಕೀಯ ಬದುಕಿನಲ್ಲೂ ತಮ್ಮ ‘ರೆಬೆಲ್‌ ವ್ಯಕ್ತಿತ್ವ’ದ ಅನಾವರಣ ಮಾಡಿದ್ದರು. ಯುಪಿಎ-1 ಸರಕಾರದಲ್ಲಿ ಅಂಬರೀಶ್‌ಗೆ ಕೇಂದ್ರ ಸಚಿವರ ಸ್ಥಾನ ಒಲಿದು ಬಂದಿತ್ತು. ಬಳಿಕ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ರಾಜೀನಾಮೆ ಬಿಸಾಕಿದ ಅಂಬರೀಶ್‌ ನೇರವಾಗಿ ಬಂದು ಮಂಡ್ಯದ ರೈತರೊಟ್ಟಿಗೆ ಪ್ರತಿಭಟನೆಗೆ ಕುಳಿತುಬಿಟ್ಟಿದ್ದರು.

ಸಿದ್ದರಾಮಯ್ಯಗೆ ಖಡಕ್‌ ಪತ್ರ

ಕಾಂಗ್ರೆಸ್‌ ಸರಕಾರದಲ್ಲಿ ಅಂಬರೀಶ್‌ ವಸತಿ ಸಚಿವರಾಗಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಮಂತ್ರಿಯಾಗಿದ್ದ ಅವರಿಗೆ ಉತ್ತಮ ಕೆಲಸ ಮಾಡುವ ಉತ್ಕಟ ಆಸೆಯಿತ್ತು. ಅದನ್ನು ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಆರೋಗ್ಯ ಅವರಿಗೆ ಸಹಕರಿಸಿರಲಿಲ್ಲ. ಸಂಪುಟ ಪುನಾರಚನೆ ವೇಳೆ ಅಂಬರೀಶ್‌ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿ ಪದೇ ಪದೆ ಹರಿದಾಡುತ್ತಿತ್ತು. ಬೆಳಗಾವಿ ಅಧಿವೇಶನದಲ್ಲೊಮ್ಮೆ ಸಿದ್ದರಾಮಯ್ಯ ಕೈಗೆ ಪತ್ರ ಕೊಟ್ಟ ಅವರು, ಇಲಾಖೆ ನಿರ್ವಹಿಸಲು ಸರಿಯಾದ ಬೆಂಬಲ ಸಿಗುತ್ತಿಲ್ಲವೆಂದು ಖಡಕ್‌ ಆಗಿ ಆಕ್ಷೇಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ