ಆ್ಯಪ್ನಗರ

ಕರ್ನಾಟಕದ ನೂತನ ಸಿಎಸ್‌ ಆಗಿ ವಂದಿತಾ ಶರ್ಮಾ ನೇಮಕ! ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ 4ನೇ ಮಹಿಳೆ

ಕರ್ನಾಟಕದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಪಿ ರವಿಕುಮಾರ್‌ ಅವರ ನಿವೃತ್ತಿಯಿಂದ ತೆರವಾಗುವ ಸಿಎಸ್‌ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

Authored byಅವಿನಾಶ ವಗರನಾಳ | Vijaya Karnataka Web 27 May 2022, 9:48 pm

ಹೈಲೈಟ್ಸ್‌:


  • ಕರ್ನಾಟಕದ ನೂತನ ಸಿಎಸ್‌ ಆಗಿ ವಂದಿತಾ ಶರ್ಮಾ ನೇಮಕ
  • ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ 4ನೇ ಮಹಿಳೆ
  • ಪಿ ರವಿಕುಮಾರ್‌ ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ನೇಮಕ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Vandita Sharma
ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ವಂದಿತಾ ಶರ್ಮಾ ಅವರನ್ನು ಹಾಲಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇ 31ಕ್ಕೆ ಪಿ ರವಿಕುಮಾರ್‌ ಅವರು ನಿವೃತ್ತಿಯಾಗುತ್ತಿದ್ದು, ಅಂದಿನಿಂದ ವಂದಿತಾ ಶರ್ಮಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 1986ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ವಂದಿತಾ ಶರ್ಮಾ ಹಾಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತಾಗಿದ್ದಾರೆ. ಮುಂದಿನ ವರ್ಷ ನವೆಂಬರ್‌ವರೆಗೆ ವಂದಿತಾ ಶರ್ಮಾ ಅವರ ಅಧಿಕಾರವಧಿ ಇರಲಿದೆ.

4ನೇ ಮಹಿಳಾ ಮುಖ್ಯ ಕಾರ್ಯದರ್ಶಿ!
ವಂದಿತಾ ಶರ್ಮಾ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುತ್ತಿರುವ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮೊದಲ ಮುಖ್ಯ ಕಾರ್ಯದರ್ಶಿಯಾಗಿ ತೆರೇಸಾ ಭಟ್ಟಾಚಾರ್ಯ, ಆ ಬಳಿಕ ಮಾಲತಿ ದಾಸ್, 2017ರಲ್ಲಿ ಕೆ ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ನಾಯಿ ವಾಕಿಂಗ್‌ಗೆ ಕ್ರೀಡಾಂಗಣವನ್ನೇ ಖಾಲಿ ಮಾಡಿಸುತ್ತಿದ್ದ ಐಎಎಸ್ ಅಧಿಕಾರಿ ವರ್ಗಾವಣೆ
ಪತಿ ಕೂಡ ಐಎಎಸ್‌ ಅಧಿಕಾರಿ!
ಇನ್ನು, ವಂದಿತಾ ಶರ್ಮಾ ಅವರರ ಪತಿ ಐಎಸ್‌ಎನ್‌ ಪ್ರಸಾದ್‌ ಕೂಡ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಪ್ರಸಾದ್ ಅವರು ಪತ್ನಿ ವಂದಿತಾ ಶರ್ಮಾ ಕೆಳಗೆ ಕೆಲಸ ಮಾಡುವುದು ವಿಶೇಷವಾಗಿದೆ.

ಹುದ್ದೆಗಳ ಕಡಿತಕ್ಕೆ ವಿರೋಧ: ಎಚ್ಚರಿಕೆ ನಡುವೆಯೂ ಶುಕ್ರವಾರ ಬಂದ್‌ಗೆ ಕರೆಕೊಟ್ಟ ಸಚಿವಾಲಯದ ಸಿಬ್ಬಂದಿ!
9 ಅಧಿಕಾರಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದ್ದ ಸರ್ಕಾರ!ಪಿ ರವಿಕುಮಾರ್‌ ಅವರ ನಿವೃತ್ತಿಯಿಂದ ತೆರವಾಗುವ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸರ್ಕಾರ 9 ಹಿರಿಯ ಐಎಎಸ್‌ ಅಧಿಕಾರಿಗಳ ಹೆಸರನ್ನು ಸರ್ಕಾರ ಪರಿಗಣಿಸಿತ್ತು. ಅದರಲ್ಲಿ ವಂದಿತಾ ಶರ್ಮಾ, ಅವರ ಪತಿ ಐಎಸ್‌ಎನ್‌ ಪ್ರಸಾದ್‌, ರಜನೀಶ್‌ ಗೋಯಲ್‌, ಅಜಯ್‌ ಸೇಠ್‌, ಇವಿ ರಮಣ ರೆಡ್ಡಿ, ರಾಕೇಶ್‌ ಸಿಂಗ್‌, ಶಾಲಿನಿ ರಜನೀಶ್‌, ಜಿ ಕುಮಾರ್‌ ನಾಯ್ಕ್ ಹಾಗೂ ಗೌರವ್‌ ಗುಪ್ತಾ ಹೆಸರು ಇದ್ದವು ಎನ್ನಲಾಗಿದೆ. ಈಗ ವಂದಿತಾ ಶರ್ಮಾ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ