ಆ್ಯಪ್ನಗರ

ಅಕ್ರಮ ಹಣ ಸಕ್ರಮಕ್ಕೆ ‘ಸಾಲ ತಂತ್ರ’; ಬೇನಾಮಿ ಸೊಸೈಟಿ ಖಾತೆಗಳಲ್ಲಿ ಪರಂ ವ್ಯವಹಾರ ರಹಸ್ಯ

ಸಂಸ್ಥೆಯ 8 ಉದ್ಯೋಗಿಗಳ ಹೆಸರಿನಲ್ಲಿ8 ಖಾತೆಗಳನ್ನು ಶಿವಶ್ರೀ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ತೆರೆಯಲಾಗಿದೆ. ಕಾಲೇಜಿನ ಲೆಕ್ಕವಿಡದ ಅಘೋಷಿತ ಹಣವನ್ನು ಇವುಗಳಲ್ಲಿ ಜಮಾ ಮಾಡಲಾಗಿದೆ.

Vijaya Karnataka 15 Oct 2019, 9:03 pm

ಬೆಂಗಳೂರು: ಸಿದ್ದಾರ್ಥ ವೈದ್ಯ ಶಿಕ್ಷಣ ಸಂಸ್ಥೆಗಳ ಮೆಡಿಕಲ್‌ ಸೀಟುಗಳ ಅಕ್ರಮ ಮಾರಾಟದಿಂದ ಬಂದ ಹಣವನ್ನು ತುಮಕೂರಿನ ಶಿವಶ್ರೀ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಜಮಾ ಮಾಡಿರುವುದನ್ನು ಐಟಿ ಇಲಾಖೆ ಪತ್ತೆ ಮಾಡಿದೆ.
Vijaya Karnataka Web Parameshwara


ಸಂಸ್ಥೆಯ 8 ಉದ್ಯೋಗಿಗಳ ಹೆಸರಿನಲ್ಲಿ8 ಖಾತೆಗಳನ್ನು ಶಿವಶ್ರೀ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯಲ್ಲಿ ತೆರೆಯಲಾಗಿದೆ. ತುಮಕೂರಿನಲ್ಲಿ 2 ಮತ್ತು ಬೆಂಗಳೂರಿನಲ್ಲಿಒಂದು ಶಾಖೆ ಇರುವ ಸೊಸೈಟಿಯಲ್ಲಿ ಕಾಲೇಜಿನ ಲೆಕ್ಕವಿಡದ ಅಘೋಷಿತ ಹಣ ಜಮಾ ಮಾಡಲಾಗಿದೆ. ಆ ಖಾತೆಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಸೊಸೈಟಿಯ ಎಲ್ಲಾ ಖಾತೆಗಳು ಮತ್ತು ವಹಿವಾಟಿನ ಪರಿಶೀಲನೆ ನಡೆದಿದೆ ಎಂದು ಐಟಿ ಮೂಲಗಳು ಹೇಳಿವೆ.

ಐಟಿ ದಾಳಿಯಲ್ಲಿ ಮೆಡಿಕಲ್‌ ಮಾಫಿಯಾದ ಬೃಹತ್ ಜಾಲ ಬಯಲು

ಬೇನಾಮಿ ಹಣ ಸಾಲ ಮರುಪಾವತಿಗೆ ಪರಿವರ್ತನೆ

ಕಾಲೇಜಿನ 8 ಉದ್ಯೋಗಿಗಳು ಕೆಲಸಕ್ಕೆ ಸೇರ್ಪಡೆಯಾಗುವ ವೇಳೆ ಸಲ್ಲಿಸಿರುವ ದಾಖಲೆಗಳ ಆಧಾರದ ಮೇಲೆ ಸೊಸೈಟಿಯಲ್ಲಿ ಬೇನಾಮಿ ಉಳಿತಾಯ ಖಾತೆ ತೆರೆಯಲಾಗಿದೆ. ಮೆಡಿಕಲ್‌ ಸೀಟುಗಳ ಮಾರಾಟದಲ್ಲಿ ಭಾಗಿಯಾಗಿರುವ ಆರೋಪಿಗಳು ಈ ಖಾತೆಗಳಲ್ಲಿ ಹಣವನ್ನು ಜಮಾ ಮಾಡಿ, ನಂತರ ನಿಶ್ಚಿತ ಠೇವಣಿಯಾಗಿ ಪರಿವರ್ತಿಸಿದ್ದಾರೆ. ಆಶ್ಚರ್ಯವೆಂದರೆ ತಮ್ಮ ಹೆಸರಿನಲ್ಲಿ ಖಾತೆ ತೆರೆದಿರುವ ಮಾಹಿತಿ ಕಾಲೇಜಿನ ಕೆಲವು ಉದ್ಯೋಗಿಗಳಿಗೆ ತಿಳಿದಿರಲಿಲ್ಲ ಎಂದು ಗೊತ್ತಾಗಿದೆ.

ಸಿದ್ದಾರ್ಥ ಕಾಲೇಜಿನ ಕೆಲವು ಟ್ರಸ್ಟಿಗಳು ಬೇನಾಮಿ ಖಾತೆಗಳಲ್ಲಿನ ನಿಶ್ಚಿತ ಠೇವಣಿಯನ್ನು ಶ್ಯೂರಿಟಿಯಾಗಿ ತೋರಿಸಿ ಸಾಲ ಪಡೆದುಕೊಂಡಿದ್ದಾರೆ. ನಂತರ ಶ್ಯೂರಿಟಿ ಹಣವನ್ನು ಸಾಲ ಮರುಪಾವತಿಗೆ ಬಳಸಿದ್ದಾರೆ. ಈ ಮೂಲಕ ಅಕ್ರಮ ಹಣವನ್ನು ಒಳಗೊಳಗೆ ಅಧಿಕೃತ ಹಣವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಸೊಸೈಟಿಯ 15 ನಿರ್ದೇಶಕರ ಪೂರ್ವಾಪರವನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. 8 ಖಾತೆ ಹೊರತುಪಡಿಸಿ, ನಮ್ಮ ಸೊಸೈಟಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಸೊಸೈಟಿ ಹೇಳಿಕೊಂಡಿದೆ.

ಪರಮೇಶ್ವರ್, ಜಾಲಪ್ಪ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ: ತಿಂಗಳ ಹಿಂದೆಯೇ ನಡೆದಿತ್ತು ತಯಾರಿ

ವಿವರ ಸಲ್ಲಿಸಲು ಕಾಲಾವಕಾಶ ಕೇಳಿದ ಪರಮೇಶ್ವರ್‌

ಇನ್ನೊಂದೆಡೆ ಸಂಸ್ಥೆಯ ವಹಿವಾಟಿಗೆ ವಿವರಣೆ ನೀಡಲು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಮಂಗಳವಾರ ಐಟಿ ಕಚೇರಿಗೆ ಹಾಜರಾಗಿ 2 ಗಂಟೆ ವಿಚಾರಣೆ ಎದುರಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ್‌, ''ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಮತ್ತು ಇನ್ನಿತರ ಕಾರಣಗಳಿಂದ ಉತ್ತರ ನೀಡಲು ಮತ್ತು ದಾಖಲೆಗಳನ್ನು ಒದಗಿಸಲು ಕಾಲಾವಕಾಶ ಕೇಳಿದ್ದೇನೆ. ವಶಕ್ಕೆ ತೆಗೆದುಕೊಂಡ ದಾಖಲೆಗಳ ಪರಿಶೀಲನೆ ನಂತರವೇ ವಿಚಾರಣೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ವಿಚಾರಣೆಗೆ ಎರಡ್ಮೂರು ದಿನ ಕಾಲಾವಕಾಶ ನೀಡಿದ್ದಾರೆ,'' ಎಂದು ತಿಳಿಸಿದರು.

''ಮೊದಲ ದಿನವೇ ರಮೇಶ್‌ ಆತ್ಮಹತ್ಯೆ ಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದೆ. ನಾನು ಕೊಲೆ ಮಾಡಿಸಿದ್ದೇನೆ ಎಂದು ಕೆಲವರು ಮಾಧ್ಯಮಗಳಲ್ಲಿ ಬಿತ್ತರಿಸಿದ್ದಾರೆ. ಅಲ್ಲದೇ, ನಾನು ಬೇನಾಮಿ ಆಸ್ತಿಯನ್ನು ಆತನ ಹೆಸರಿನಲ್ಲಿ ಮಾಡಿಸಿದ್ದೇನೆ. ಅದನ್ನು ಕೇಳುತ್ತಾರೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಊಹಾಪೋಹಗಳ ಸತ್ಯ ಹೊರಬರಲು ಯಾವುದೇ ಏಜೆನ್ಸಿಯಿಂದ ತನಿಖೆ ಮಾಡಿಸಬಹುದು ಎಂದು ಸಿಎಂ ಮತ್ತು ಗೃಹ ಸಚಿವರನ್ನು ಒತ್ತಾಯ ಮಾಡುತ್ತೇನೆ'' ಎಂದರು.

ರಮೇಶ್‌ ಕುಟುಂಬ, ಪರಿಚಿತರ ವಿಚಾರಣೆ

ರಮೇಶ್‌ ಆತ್ಮಹತ್ಯೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಉತ್ತರ ವಿಭಾಗ ಡಿಸಿಪಿ ರಮೇಶ್‌ ನೇತೃತ್ವದ ತಂಡ, ಕುಟುಂಬ ಸದಸ್ಯರು, ಪರಿಚಿತರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ರಮೇಶ್‌ ಕಾರಿನಲ್ಲಿ ಸಿಕ್ಕಿರುವ ಮರಣಪತ್ರದಲ್ಲಿನ ಬರಹ ಮತ್ತು ಕೈ ಬರಹ ಮ್ಯಾಚಿಂಗ್‌ ಪರಿಶೀಲನೆಗಾಗಿ ಕೈ ಬರಹ ತಜ್ಞರಿಗೆ ಕಳುಹಿಸಿಕೊಡಲಾಗುತ್ತಿದೆ. ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ