ಆ್ಯಪ್ನಗರ

'ಅಕ್ರಮ' ಹೊರ ತೆಗೆದ 'ಲಾಕರ್' ಬೇಡಿಕೆ

ಬೌರಿಂಗ್‌ ಇನ್ಸ್‌ಟಿಟ್ಯೂನಲ್ಲಿರುವ ಲಾಕರ್‌ಗಳ ಬಳಕೆಗೆ ಹೆಚ್ಚಿದ ಬೇಡಿಕೆಯೇ ಇಡೀ ಕರ್ಮಕಾಂಡ ಬಯಲಾಗಲು ಕಾರಣವಾಯಿತು.

Vijaya Karnataka 22 Jul 2018, 5:00 am
ಬೆಂಗಳೂರು: ಬೌರಿಂಗ್‌ ಇನ್ಸ್‌ಟಿಟ್ಯೂನಲ್ಲಿರುವ ಲಾಕರ್‌ಗಳ ಬಳಕೆಗೆ ಹೆಚ್ಚಿದ ಬೇಡಿಕೆಯೇ ಇಡೀ ಕರ್ಮಕಾಂಡ ಬಯಲಾಗಲು ಕಾರಣವಾಯಿತು.
Vijaya Karnataka Web 41588E99-79D0-486D-AEBE-F732660092B2


ಇಲ್ಲಿ ಜಿಮ್‌, ಬ್ಯಾಡ್ಮಿಂಟನ್‌, ಟೆನ್ನಿಸ್‌ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳು ಇವೆ. ಕ್ರೀಡಾ ವಿಭಾಗಗಳಲ್ಲಿ ಆಟವಾಡುವವರ ಜತೆಗೆ ಆಟವಾಡದ ವ್ಯಕ್ತಿಗಳು ಕೂಡಾ ಲಾಕರ್‌ ಬಳಸುತ್ತಿದ್ದರು. ಇದರಿಂದಾಗಿ ನಿಜವಾಗಿಯು ಆಟವಾಡುತ್ತಿದ್ದವರಿಗೆ ಲಾಕರ್‌ ಸಿಗುತ್ತಿರಲಿಲ್ಲ. ಅದರಲ್ಲೂ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಲಾಕರ್‌ ಸಮಸ್ಯೆ ತೀವ್ರವಾದಾಗ ಎಲ್ಲ ಕ್ರೀಡಾ ವಿಭಾಗಗಳ ಲಾಕರ್‌ ಅನ್ನು ಅಧಿಕೃತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಕಳೆದ 2 ವರ್ಷಗಳಿಂದ ಲಾಕರ್‌ಗಳನ್ನು ಪಡೆದಿರುವ ಕುರಿತು ಅಧಿಕೃತವಾಗಿ ಹೆಸರು ನೋಂದಾಯಿಸಿ ಎಂದು ಕ್ರೀಡಾ ಕೋರ್ಟ್‌ಗಳ ಸಮಿತಿ ಸದಸ್ಯರು ಲಾಕರ್‌ ಪಡೆದವರಿಗೆ ತಿಳಿಸಿದ್ದರು. ಆದರೆ, ಅದಕ್ಕೆ ಸಾಕಷ್ಟು ಜನ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಫೆಬ್ರವರಿ ಮೊದಲ ವಾರದಲ್ಲಿ ಎಲ್ಲ ಸದಸ್ಯರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ನಂತರ ಮಾರ್ಚ್‌ ತಿಂಗಳಲ್ಲಿ ನೋಟಿಸ್‌ ನೀಡಿ ಟೆಕ್ಟ್ಸ್ ಮತ್ತು ವಾಟ್ಸ್‌ಆ್ಯಪ್‌ ಮೆಸೇಜ್‌ ಮೂಲಕ ತಿಳಿ ಹೇಳಲಾಗಿತ್ತು. ಆದರೂ 100ಕ್ಕೂ ಹೆಚ್ಚು ಜನರು ಲಾಕರ್‌ ಅಧಿಕೃತಗೊಳಿಸಿಕೊಳ್ಳದ ಕಾರಣ ಲಾಕರ್‌ ಒಡೆಯುತ್ತೇವೆ ಎಂದು ತಿಳಿಸಿ ಜು.16ರಿಂದ ಲಾಕರ್‌ ಒಡೆಯುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ವೇಳೆ ವಿಡಿಯೊ ರೆಕಾರ್ಡಿಂಗ್‌ ಮಾಡಲಾಗಿತ್ತು.

ಲಾಕರ್‌ಗಳಲ್ಲಿ ಏನಿತ್ತು?: ಜು.19 ರಂದು ಮಧ್ಯಾಹ್ನ 1.45ರ ಸುಮಾರಿಗೆ ಬ್ಯಾಡ್ಮಿಂಟನ್‌ ಕೋರ್ಟ್‌ ಹಾಲ್‌ ಲಾಕರ್‌ ತೆರೆಯುವಾಗ 69, 71 ಮತ್ತು 79 ಸಂಖ್ಯೆಯ ಲಾಕರ್‌ ತೆರೆದಾಗ ಕಪ್ಪು ಬಣ್ಣದ 6 ಚರ್ಮದ ಬ್ಯಾಗ್‌ಗಳು ಸಿಕ್ಕಿವೆ. ಅದರಲ್ಲಿ ಒಂದು ಮಾತ್ರ ಪ್ಲಾಸ್ಟಿಕ್‌ ಬ್ಯಾಗ್‌ ಸಿಕ್ಕಿತ್ತು. ಅದರಲ್ಲಿ ಹಣವಿರುವಂತೆ ಕಾಣಿಸಿದ ಕಾರಣ ಕೂಡಲೇ ಬ್ಯಾಗ್‌ ಅನ್ನು ಕಾರ್ಯದರ್ಶಿಯ ಕಚೇರಿಗೆ ತೆಗೆದುಕೊಂಡು ಹೋಗಿ ಇಡಲಾಗಿತ್ತು. ಅಲ್ಲದೇ, ಪೊಲೀಸರಿಗೆ ಮಾಹಿತಿ ನೀಡಿ ಹಣದ ಶಂಕೆಯ ಕುರಿತು ತಿಳಿಸಲಾಗಿತ್ತು. ಈ ವೇಳೆ ಎಲ್ಲ ಬ್ಯಾಗ್‌ಗಳನ್ನು ಪೊಲೀಸರ ಸಮ್ಮುಖದಲ್ಲಿ ತಿಜೋರಿಯಲ್ಲಿಟ್ಟು ಮರುದಿನ ಅಂದರೆ ಜು.20ರಂದು ಸಿಬ್ಬಂದಿ ಮತ್ತು ಅಧಿಕಾರಿ ಬ್ಯಾಗ್‌ ಪರಿಶೀಲಿನೆ ನಡೆಸಿದಾಗ 2 ಸಾವಿರ ರೂ. ನೋಟುಗಳ 5 ಕಟ್ಟುಗಳ ಒಳಗೊಂಡ ಒಂದು ಬಂಡಲ್‌ನಂತೆ ಒಟ್ಟು 18 ಬಂಡಲ್‌ಗಳು ಇದ್ದವು. ಅದರಲ್ಲಿ ಸುಮಾರು 1.80 ಕೋಟಿ ರೂ. ಇರುವುದು ಗೊತ್ತಾಯಿತು. ಜತೆಗೆ ಆಭರಣ ಮತ್ತು ಆಸ್ತಿ ದಾಖಲೆಗಳು ಸಿಕ್ಕಿವೆ. ನಂತರ ಐಟಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಯಿತು.

ಒಪ್ಪಿಕೊಂಡ ಅವಿನಾಶ್‌: ಜು.20ರಂದು ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ್‌ ಕಚೇರಿಗೆ ಬಂದ ಅವಿನಾಶ್‌ ಅಮರ್‌ ಲಾಲ್‌ ಕುಕ್ರೇಜಾ, ಸಿಕ್ಕ ಹಣ, ಆಭರಣ, ದಾಖಲೆಗಳು ತನ್ನದು ಎಂದು ಒಪ್ಪಿಕೊಂಡರಲ್ಲದೆ, ಲಾಕರ್‌ ಅನ್ನು ಅನಧಿಕೃತವಾಗಿ ಬಳಸುತ್ತಿದ್ದೇನೆ. ಕಾರಣಾಂತರಗಳಿಂದ ಹೆಸರು ನೋಂದಾಯಿಸಿರಲಿಲ್ಲ ಎಂದು ತಿಳಿಸಿದರು. ಅವಿನಾಶ್‌ ಮನೆ ಮತ್ತು ಕಚೇರಿಗಳ ಮೇಲೆ ಈ ಹಿಂದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಎನ್ನಲಾಗಿದೆ.

ಗೊಗರೆದ ಅವಿನಾಶ್‌: ''ಹಣ, ಆಭರಣ ನೀವೇ ಇಟ್ಟುಕೊಳ್ಳಿ. ಆದರೆ, ಫೈಲ್‌ಗಳನ್ನು ಕೊಟ್ಟು ಬಿಡಿ ಎಂದು ಅವಿನಾಶ್‌ ಗೊಗರೆದ. ಅಲ್ಲದೇ, ನನಗೆ ಹೃದಯ ನೋಯುತ್ತಿದೆ ಎಂದು ಕಾಲಿಗೆ ಬಿದ್ದು ಕಣ್ಣೀರಿಟ್ಟ. ಎಲ್ಲವನ್ನೂ ಇಲಾಖೆ ನೀಡಲಾಗಿದೆ. ಅಲ್ಲಿಂದಲೇ ನೀವು ತೆಗೆದುಕೊಳ್ಳಿ ಎಂದು ಹೇಳಿ ಕಳುಹಿಸಿದೆ ಆದರೆ. ಅದನ್ನೆಲ್ಲ ಇಲಾಖೆಗೆ ಕೊಟ್ಟಿದ್ದೇನೆ. ಅಲ್ಲೇ ನೀವು ಪಡೆದುಕೊಳ್ಳಿ ಎಂದು ಹೇಳಿ ಕಳುಹಿಸಿದೆ,''ಎಂದು ಕಾರ್ಯದರ್ಶಿ ಶ್ರೀಕಾಂತ್‌ ಹೇಳಿದರು.

ಅಧಿಕಾರಿಗಳ ಅಭಿನಂದನೆ: ''ಆಸ್ತಿ ದಾಖಲೆಗಳನ್ನು ನೋಡಿದ ಅಧಿಕಾರಿಗಳು ಧನ್ಯವಾದ ಹೇಳಿದರು. ಅದರಲ್ಲಿ ದೇವನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ಬೇಗೂರು ಸುತ್ತಲಿನ ಎಕರೆ ಲೆಕ್ಕದಲ್ಲಿನ ಜಮೀನುಗಳ ದಾಖಲೆಗಳು ಇದ್ದವು. ಈ ಪೈಕಿ ಎಷ್ಟು ಬೇನಾಮಿ, ಎಷ್ಟು ಅಧಿಕೃತ ಎನ್ನುವುದು ಗೊತ್ತಿಲ್ಲ. ಆದರೆ, ನಿತೇಶ್‌ ಎಸ್ಟೇಟ್‌ಗೆ ಸಂಬಂಧಿಸಿದ ಚೆಕ್‌ಗಳು ಇದ್ದವು. ಬಿಲ್ಡರ್‌ಗಳಿಗೆ ಸೇರಿದ ಖಾಲಿ ಚೆಕ್‌ಗಳು ದೊರಕಿವೆ'' ಎಂದು ಶ್ರೀಕಾಂತ್‌ ತಿಳಿಸಿದರು.

5 ಕೋಟಿ ರೂ. ಆಮಿಷ: ಜು.20ರಂದು ರಾತ್ರಿ 11 ಗಂಟೆವರೆಗೆ ತನಿಖಾಧಿಕಾರಿಗಳ ಜತೆ ಇದ್ದ ನಾನು ಮನೆಗೆ ಹೋಗಿದ್ದೆ. ಅಷ್ಟೋತ್ತಿಗಾಗಲೇ ನಾಲ್ಕೈದು ಬಾರಿ ಅಪರಿಚಿತರು ಬಂದು ಹೋಗಿದ್ದು, ಮನೆಯವರಿಂದ ಗೊತ್ತಾಯಿತು. ಮನೆಯಲ್ಲಿದ್ದಾಗ ಕೆಲ ಹೊತ್ತಿನಲ್ಲೇ ಸದಸ್ಯರೊಬ್ಬರ ಹೆಸರು ಹೇಳಿಕೊಂಡು ಬಂದ ಅಪರಿಚಿತ 5 ಕೋಟಿ ರೂ. ಇಲ್ಲೇ ಕೊಡುತ್ತೇನೆ. ನಿಮಗೆ ಸಿಕ್ಕಿರುವ ದಾಖಲೆಗಳ ಪೈಕಿ ಒಂದು ದಾಖಲೆಯನ್ನು ಕೊಟ್ಟು ಬಿಡಿ ಎಂದ. ಆದರೆ, ಐಟಿ ಅಧಿಕಾರಿಗೆ ಫೋನಾಯಿಸುತ್ತಿದ್ದಂತೆ ಆತ ಸ್ಥಳದಿಂದ ಪರಾರಿಯಾದ ಎಂದು ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದರು.

- ಯಾರು ಈ ಅವಿನಾಶ್‌? -

ಅವಿನಾಶ್‌ ಅಮರ್‌ ಲಾಲ್‌ ಕುಕ್ರೇಜಾ ರಿಯಲ್‌ ಎಸ್ಟೇಟ್‌ ಉದ್ಯಮಿ. ಕೆ.ಎಚ್‌ ರಸ್ತೆಯಲ್ಲಿ ಜೆ.ಕೆ ಟೈರ್ಸ್‌ ಸೇರಿದಂತೆ ನಾನಾ ಕಡೆಗಳಲ್ಲಿ ಅವಿನಾಶ್‌ ಟೈರ್ಸ್‌ ಹೆಸರಿನಲ್ಲಿ ಮಳಿಗೆಗಳಿವೆ. ಜತೆಗೆ ಇನ್ನಿತರ ವ್ಯಾಪಾರಗಳಲ್ಲಿ ತೊಡಗಿದ್ದಾರೆ. ಕೆ.ಎಚ್‌ ರಸ್ತೆ ನಂಜಪ್ಪ ಲೇಔಟ್‌ನಲ್ಲಿ ಕುಟುಂಬ ಸದಸ್ಯರ ಜತೆ ವಾಸವಿದ್ದಾರೆ. ಬೌರಿಂಗ್‌, ಬೆಂಗಳೂರು ಕ್ಲಬ್‌ ಸೇರಿ ನಾನಾ ಕ್ಲಬ್‌ಗಳ ಸದಸ್ಯ.

ಶುಲ್ಕ 5 ರೂ. ಕಟ್ಟಿರಲಿಲ್ಲ!

ಅವಿನಾಶ್‌ ನಾಲ್ಕೈದು ವರ್ಷಗಳಿಂದ ಲಾಕರ್‌ ಬಳಸುತ್ತಿದ್ದರು ಶುಲ್ಕ ಕಟ್ಟಿರಲಿಲ್ಲ. 5 ರೂ. ಇದ್ದ ಶುಲ್ಕವನ್ನು ಇತ್ತೀಚೆಗೆ 50 ರೂ.ಗೆ ಏರಿಸಲಾಗಿತ್ತು. ಜು.16 ರಿಂದ ಒಟ್ಟು 126 ಲಾಕರ್‌ಗಳನ್ನು ಮುರಿಯಲಾಗಿದೆ. ಕೊನೆಯ ಬಾರಿ ಲಾಕರ್‌ ಮುರಿದಿದ್ದು, 2000 ಇಸವಿಯಲ್ಲಿ.

ಸಾಕಷ್ಟು ಕರೆಗಳು ಬಂದಿವೆ

ನನಗೆ ಸಾಕಷ್ಟು ಫೋನ್‌ ಕರೆಗಳು ಬಂದಿವೆ. ಆದರೆ, ಅಟೆಂಡ್‌ ಮಾಡಲು ಆಗದೇ ಮಿಸ್‌ ಆಗಿವೆ. ಪರಿಚಿತರು, ಸ್ನೇಹಿತರು, ಅಧಿಕಾರಿಗಳು ಕೂಡಾ ಕರೆ ಮಾಡಿದ್ದಾರೆ. ಆದರೆ, ಅವರ ಜತೆ ಮಾತನಾಡಲು ಆಗಿಲ್ಲ. ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಆದರೆ, ನಾನು ಪೊಲೀಸರಿಗೆ ಮಾಹಿತಿ ನೀಡಿದನ್ನು ಕ್ಲಬ್‌ನ ಸದಸ್ಯರು, ಸಮತಿ ಸದಸ್ಯರು ಒಪ್ಪುವುದಿಲ್ಲ ಎನಿಸುತ್ತದೆ ಎಂದು ಶ್ರೀಕಾಂತ್‌ ಹೇಳಿದರು.

ಅವಿನಾಶ್‌ ವಿರುದ್ಧ ಕ್ರಮ

ಕ್ಲಬ್‌ನ ನಿಯಮಗಳಿಗೆ ವಿರುದ್ಧವಾಗಿ ಕ್ರೀಡಾ ಲಾಕರ್‌ ಅನ್ನು ದುರುಪಯೋಗಪಡಿಸಿಕೊಂಡಿರುವ ಅವಿನಾಶ್‌ ವಿರುದ್ಧ ಕ್ಲಬ್‌ನ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಇನ್ನು ಮುಂದೆ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡುತ್ತೇವೆ. ಜತೆಗೆ ಎಲ್ಲ ಕ್ರೀಡಾ ಕೋರ್ಟ್‌ಗಳು, ಜಿಮ್‌ನಲ್ಲಿರುವ ಲಾಕರ್‌ಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುತ್ತೇವೆ ಎಂದು ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದರು.

ಲಾಕರ್‌ಗೆ ಮಾಮೂಲಿ ಲಾಕ್‌!

ಲಾಕರ್‌ನಲ್ಲಿ ಕೋಟಿ ಕೋಟಿ ಹಣ ಹಾಗೂ ಆಸ್ತಿ ದಾಖಲೆಗಳನ್ನು ಇಟ್ಟಿದ್ದರೂ ಯಾರಿಗೂ ಆ ಲಾಕರ್‌ ಮೇಲೆ ಗಮನಸೆಳೆಯದಿರಲಿ ಎಂದು ಆತ ಸಾಮಾನ್ಯ ಬೀಗ ಹಾಕಿದ್ದ. ಕೈಯಲ್ಲಿ ಜೋರಾಗಿ ಎಳೆದರೂ ಇಲ್ಲವೇ ಕಬ್ಬಿಣದ ರಾಡ್‌ನಿಂದ ಜೋರಾಗಿ ಒಡೆದರೂ ತೆರೆದುಕೊಳ್ಳುವಂಥ ಲಾಕ್‌ ಹಾಕಲಾಗಿತ್ತು.


ನನಗೆ ಕ್ರೀಡಾ ಕಿಟ್‌ ಇಡಲು ಇಡಲು ಲಾಕರ್‌ ಸಿಕ್ಕಿರಲಿಲ್ಲ. ಹೀಗಾಗಿ, ಲಾಕರ್‌ ಪಡೆದವರ ಹೆಸರು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಅವಧಿಯಲ್ಲಿ ನೂರಾರು ಜನ ಲಾಕರ್‌ಗಳನ್ನು ಕ್ಲೇಮ್‌ ಮಾಡಿಕೊಳ್ಳಲಿಲ್ಲ. ಒಂದೊಂದಾಗಿ ಚೆಕ್‌ ಮಾಡುವಾಗ ಅಪಾರ ಸಂಪತ್ತು ಸಿಕ್ಕಿದೆ.

- ಸಂದೀಪ್‌ ಸುದರ್ಶನ್‌, ಉಸ್ತುವಾರಿ, ಬಾಡ್ಮಿಂಟನ್‌ ಕೋರ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ