ಆ್ಯಪ್ನಗರ

ಐಎಂಎ ಹಗರಣ: ತನಿಖೆ ಸಿಬಿಐಗೆ ವಹಿಸಲು ಶೀಘ್ರ ಆದೇಶ ಹೊರಡಿಸಿ

ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಶೀಘ್ರ ಅಧಿಸೂಚನೆ ಹೊರಡಿಸುವಂತೆ ಬುಧವಾರ ಕೇಂದ್ರ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ...

Vijaya Karnataka 29 Aug 2019, 5:00 am
ಬೆಂಗಳೂರು: ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಶೀಘ್ರ ಅಧಿಸೂಚನೆ ಹೊರಡಿಸುವಂತೆ ಬುಧವಾರ ಕೇಂದ್ರ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Vijaya Karnataka Web 1206-2-2-IMA


ಸಂಜಯನಗರ ನಿವಾಸಿ ಎಸ್‌.ಎಂ. ಇಕ್ಬಾಲ್‌ ಅಹ್ಮದ್‌ ಮತ್ತಿತರರು ಸಲ್ಲಿಸಸಿರುವ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ನ್ಯಾಯಪೀಠ, ''ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆಯೇ,'' ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಸಿಬಿಐ ಪರ ವಕೀಲ ಪ್ರಸನ್ನಕುಮಾರ್‌, ''ಇಲ್ಲ, ಇನ್ನೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ,'' ಎಂದರು.

ಆಗ ಪೀಠ, 'ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸದಿರುವುದು ತನಿಖೆಯ ವಿಳಂಬಕ್ಕೆ ಕಾರಣ ಆಗುವುದು ಸಮಂಜಸವಲ್ಲ. ಆದ್ದರಿಂದ ಆದಷ್ಟು ಶೀಘ್ರ ಅಧಿಸೂಚನೆ ಹೊರಡಿಸಿ,''ಎಂದು ಕೇಂದ್ರ ಸರಕಾರದ ಪರ ಹಾಜರಿದ್ದ ಎಎಸ್‌ಜಿ ಎಸ್‌. ಶಶಿಕಾಂತ್‌ ಅವರಿಗೆ ನಿರ್ದೇಶನ ನೀಡಿತು

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ವಿಚಾರಣೆ ವೇಳೆ ಪ್ರಕರಣ ಸಂಬಂಧ ಹೈಕೋರ್ಟ್‌ ನಿರ್ದೇಶನಗಳ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ''ಐಎಎಸ್‌ ಅಧಿಕಾರಿ ಹರ್ಷಗುಪ್ತಾ ಅವರನ್ನು ಪ್ರಕರಣದ ಪೂರ್ಣಾವಧಿ ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲದೇ ನ್ಯಾಯಾಲಯದ ನಿರ್ದೇಶನಗಳನ್ವಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,'' ಎಂದು ವಿವರಿಸಿದರು.

ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌, ''ಇದೊಂದು ಗಂಭೀರ ಪ್ರಕರಣವಾಗಿದ್ದು, ಕನಿಷ್ಠ ಒಂದು ವರ್ಷದ ಮಟ್ಟಿಗೆ ಸಕ್ಷಮ ಪ್ರಾಧಿಕಾರಿಯನ್ನು ಬದಲಿಸುವುದು ಅಥವಾ ವರ್ಗಾವಣೆಗೊಳಿಸಿದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು,'' ಎಂದು ಕೋರಿದರು.

ಆಗ ನ್ಯಾಯಪೀಠ, ''ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿರುವ ಅಧಿಕಾರಿಯ ವರ್ಗಾವಣೆ ಅಥವಾ ಬದಲಾವಣೆಯ ತುರ್ತು ಸನ್ನಿವೇಶ ಬಂದಲ್ಲಿ, ಆ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದುಕೊಳ್ಳಬೇಕು,'' ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು. ಅಂದು ಸಿಬಿಐ ವರದಿಯನ್ನು ಸಲ್ಲಿಸಬೇಕು ಮತ್ತು ಎಸ್‌ಐಟಿ ಕೂಡ ತನ್ನ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿತು.


ಚಿನ್ನದ ಬಿಸ್ಕತ್‌ ನಕಲಿಯೋ ಅಸಲಿಯೋ..!

ವಶಪಡಿಸಿಕೊಂಡಿರುವ ಐಎಂಎ ಸಂಸ್ಥೆಗೆ ಸೇರಿದ ಚಿನ್ನದ ಬಿಸ್ಕತ್‌ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನ್ಯಾಯಪೀಠ ನಿರ್ದೇಶನ ನೀಡಿತು.

ಅರ್ಜಿದಾರರ ಪರ ವಕೀಲ ಸುನಿಲ್‌ ರಾವ್‌, ''ಎಸ್‌ಐಟಿ ವಶಪಡಿಸಿಕೊಂಡ 5088 ಚಿನ್ನದ ಬಿಸ್ಕತ್‌ ನಕಲಿ ಎಂದೂ ವರದಿಯಾಗಿದೆ. ಈ ಬಗ್ಗೆ ಸಾಚಾತನದ ಮಾಹಿತಿ ನೀಡಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ