ಆ್ಯಪ್ನಗರ

IMA ವಂಚನೆ: ಬ್ಲ್ಯಾಕ್‌ಮೇಲರ್‌ಗಳಿಂದ ಬೀದಿಗೆ ಬಂದೆವು, ಗೋಳಿಟ್ಟ ವಂಚಿತರು

ಬಹುಕೋಟಿ ವಂಚನೆಯ ಐಎಂಎ ಮಾಲೀಕ ಮನ್ಸೂರ್‌ ಖಾನ್‌ ದೇಶ ಬಿಟ್ಟು ಪರಾರಿಯಾಗಿದ್ದಾನೆಂಬ ವದಂತಿಗಳ ನಡುವೆಯೇ, ಹಣ ಕಳೆದುಕೊಂಡವರ ಆತಂಕ, ರೋದನ ಮುಗಿಲುಮುಟ್ಟಿದೆ. ರೌಡಿಗಳು, ರಾಜಕಾರಣಿಗಳು, ಪೊಲೀಸರಿಂದಾಗಿ 50 ಸಾವಿರಕ್ಕೂ ಹೆಚ್ಚು ಸಂಸಾರಗಳು ಬೀದಿಗೆ ಬಿದ್ದವು ಎನ್ನುತ್ತಿದ್ದಾರವರು.

Vijaya Karnataka 13 Jun 2019, 2:35 pm
ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಮಾಲೀಕ ಮನ್ಸೂರ್‌ ಖಾನ್‌ ದೇಶ ಬಿಟ್ಟು ಪರಾರಿ ಆಗುವುದಕ್ಕೆ , ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ 50 ಸಾವಿರಕ್ಕೂ ಅಧಿಕ ಮಂದಿಯ ಸಂಸಾರಗಳು ಹಾಳಾಗಲಿಕ್ಕೆ ಶಿವಾಜಿನಗರದ ರೌಡಿಗಳು, ರಾಜಕಾರಣಿಗಳು, ಪೊಲೀಸರು, ಅಧಿಕಾರಿಗಳು ಹಾಗೂ ಕೆಲ ಪತ್ರಕರ್ತರೇ ನೇರ ಕಾರಣ. ಇವರಿಂದಲೇ ನಮ್ಮ ಹಣ ವಸೂಲಿ ಮಾಡಿ ಕೊಡಬೇಕು.
Vijaya Karnataka Web 1206-2-2-IMA_04


ಇದು ಐಎಂಎ ಹೂಡಿಕೆದಾರರ ಆಕ್ರೋಶ. ಬುಧವಾರ ರಾಜ್ಯದ ನಾನಾ ಕಡೆಗಳಿಂದ ಹಾಗೂ ವಿದೇಶಗಳಿಂದ ಹೂಡಿಕೆದಾರರು ಶಿವಾಜಿನಗರಕ್ಕೆ ಧಾವಿಸಿದರು. ಬೀಗ ಜಡಿದ ಐಎಂಎ ಕಚೇರಿ ಎದುರು ಆಕ್ರೋಶ, ಸಂಕಟಗಳನ್ನು ವ್ಯಕ್ತಪಡಿಸುತ್ತಲೇ ಇದ್ದರು. ಒಂದಷ್ಟು ಸಾವಿರ ಮಂದಿ ದೂರು ದಾಖಲಿಸಲು ಎ.ಎಸ್‌.ಕನ್ವೆನ್ಷನ್‌ ಹಾಲ್‌ಮುಂದೆ ಸಾಲು ಗಟ್ಟಿ ನಿಂತಿದ್ದರೆ, ಈಗಾಗಲೇ ದೂರು ದಾಖಲಿಸಿದವರು ಐಎಂಎ ಕೇಂದ್ರ ಕಚೇರಿ ಮುಂದೆ ಜಮಾಯಿಸಿ ಸಂಕಟ ತೋಡಿಕೊಂಡರು.

ಆಕ್ರೋಶದ ಕೇಂದ್ರ ಬಿಂದು ಮನ್ಸೂರ್‌ ಖಾನ್‌ ಆಗಿದ್ದರೂ 12 ವರ್ಷಗಳಿಂದ ಅಚ್ಚುಕಟ್ಟಾಗಿ ಪ್ರತಿ ತಿಂಗಳೂ ಚಾಚೂ ತಪ್ಪದೆ ಹಣ ಕೊಡುತ್ತಿದ್ದ ಮನ್ಸೂರ್‌ ಖಾನ್‌ ಈಗ ದೇಶ ಬಿಟ್ಟು ಹೋಗಲು ಬ್ಲ್ಯಾಕ್‌ಮೇಲ್‌ ಘಟನೆಗಳೇ ನೇರ ಕಾರಣ. ಒಬ್ಬರಿಂದ ಬಚಾವಾಗಲು ಮತ್ತೊಬ್ಬರ ಮೊರೆ ಹೋಗುತ್ತಿದ್ದ ಮನ್ಸೂರ್‌ ಕೊನೆಗೆ ಎಲ್ಲರಿಂದಲೂ ಬ್ಲ್ಯಾಕ್‌ಮೇಲ್‌ ಮಾಡಿಸಿಕೊಂಡು ದೇಶ ಬಿಟ್ಟು ಹೋಗಿದ್ದಾನೆ ಎನ್ನುವ ಆಕ್ರೋಶದ ಮಾತುಗಳೂ ಕೇಳಿ ಬಂದವು.

''ರೋಷನ್‌ಬೇಗ್‌ ನಮ್ಮ ಸಮಾಜದ ಹಿರಿಯರು. ಅವರು ಸರಕಾರದಲ್ಲೂ ಇದ್ದುದರಿಂದ ಮೋಸ ಆಗುವುದಿಲ್ಲ ಎನ್ನುವ ಭರವಸೆ ಇತ್ತು. ಈಗ ನೋಡಿದರೆ ಇವರೇ ಕಂಪನಿಯ ಹಣ ಕಿತ್ತುಕೊಂಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ತಿಂಗಳಿಗೆ 2 ಸಾವಿರ ಬರುತ್ತದೆ. ಅದು ಕಾಯಿಲೆ ಪೀಡಿತ ಪೋಷಕರ ಔಷಧದ ಖರ್ಚಿಗೆ ಆಗುತ್ತದೆ ಎನ್ನುವ ಧೈರ್ಯದಲ್ಲಿದ್ದೆ. ನಾವೀಗ ಏನು ಮಾಡಬೇಕು,'' ಎನ್ನುತ್ತಾ ಹೂಡಿಕೆ ಮಾಡಿದ ಕುಣಿಗಲ್‌ನ ತೌಸೀಫ್‌ ಅಳಲು ತೋಡಿಕೊಂಡರು.

ಕುಮಾರಸ್ವಾಮಿ ಲೇಔಟ್‌ನ ನಿವಾಸಿ ಸಿಕಂದರ್‌ ಅವರ ನೋವಿನ ಮಾತೇ ಬೇರೆ. ''ಮನ್ಸೂರ್‌ ಮೊದಲು ತಾವು ಮೋಸ ಹೋದರು. ಆ ನಂತರ ಉಳಿದ ಸಾವಿರಾರು ಮಂದಿಗೆ ಮೋಸ ಮಾಡಿ ಪರಾರಿ ಆದರು. ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ರೌಡಿಗಳಿಂದ ರಕ್ಷಿಸಿಕೊಳ್ಳಲು ರಾಜಕಾರಣಿಗಳ ಬಳಿ ಹೋದರು, ರೌಡಿಗಳಿಗೆ ಹಣ ಕೊಡುವುದು ತಪ್ಪಿದರೂ ರಾಜಕಾರಣಿಗಳಿಗೆ ಕೊಡಬೇಕಾಯಿತು. ಚಾನೆಲ್‌ಗಳ ಹೆಸರಿನಲ್ಲಿ ಕೆಲವು ಪತ್ರಕರ್ತರು ಬ್ಲ್ಯಾಕ್‌ಮೇಲ್‌ ಹತ್ತಾರು ಕೋಟಿ ಹಣ ಕಿತ್ತರು. ಎಲ್ಲರಿಂದ ಪಾರಾಗಲು ಕೊನೆಗೆ ಪೊಲೀಸ್‌ ಅಧಿಕಾರಿಗಳ ಬಳಿಗೆ ಹೋದರು. ಅಲ್ಲಿಯೂ ಕೊಟಿಗಟ್ಟಲೆ ಕೊಡಬೇಕಾಯಿತು. ಇದೆಲ್ಲವೂ ನಮಗೆ ಗೊತ್ತಿದ್ದರೂ ನಾವೇನೂ ಮಾಡಲು ಸಾಧ್ಯವಿರಲಿಲ್ಲ,'' ಅಸಹಾಯಕತೆ ವ್ಯಕ್ತಪಡಿಸಿದರು.

''ಸಾರ್‌ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುವವರು ಕೋಟಿಗಳ ಲೆಕ್ಕದಲ್ಲೇ ಕಂಪನಿಯಿಂದ ಲಾಭ ಪಡೆದುಕೊಂಡಿದ್ದಾಗಿದೆ. ಆದರೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹೂಡಿಕೆ ಮಾಡಿದ್ದವರ ಹಣ ವಾಪಸ್‌ ಬರಬೇಕು. ಸರಕಾರ ರಾಜಕಾರಣಿಗಳಿಂದಾಗಲೀ, ಅಧಿಕಾರಿಗಳಿಂದಾಗಲೀ, ಬ್ಲ್ಯಾಕ್‌ಮೇಲ್‌ ಮಾಡಿದ ಪತ್ರಕರ್ತರಿಂದಾಗಲೀ ಆ ಹಣವನ್ನು ವಸೂಲಿ ಮಾಡಿ ಬಡವರ ಮನೆ ಉಳಿಸಬೇಕು,''ಎಂದು ಆಗ್ರಹಿಸಿದವರು ಮಿನಾಜ್‌ ನಗರದ ನಯಾಜ್‌ ಪಾಷಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ