ಆ್ಯಪ್ನಗರ

ಒಣ ಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ದುಬೈನಲ್ಲಿ 20 ದಿನ ಬೀಡು ಬಿಟ್ಟಿದ್ದ ಎಸ್‌ಐಟಿ ಅಧಿಕಾರಿಗಳು

ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ನನ್ನು ಬೆಂಗಳೂರಿಗೆ ಕರೆ ತರಲು ನಾಲ್ವರು ಎಸ್‌ಐಟಿ ಅಧಿಕಾರಿಗಳ ತಂಡ ಒಣಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ...

Vijaya Karnataka 21 Jul 2019, 5:00 am
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್‌ ಖಾನ್‌ನನ್ನು ಬೆಂಗಳೂರಿಗೆ ಕರೆ ತರಲು ನಾಲ್ವರು ಎಸ್‌ಐಟಿ ಅಧಿಕಾರಿಗಳ ತಂಡ ಒಣಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ದುಬೈಗೆ ತೆರಳಿದ್ದರು.
Vijaya Karnataka Web BNG-1907-2-2-BE3C0717-ADF3-4F1B-9CA3-AF4435BF9021


ಬರೋಬ್ಬರಿ 20 ದಿನಗಳ ಕಾಲ ದುಬೈನಲ್ಲಿದ್ದ ಅಧಿಕಾರಿಗಳು, ಆತನ ಪತ್ತೆ ಮತ್ತು ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಎಸ್‌ಐಟಿ ಬೆನ್ನಿಗೆ ಬಿದ್ದಿರುವುದನ್ನು ಅರಿತ ಮನ್ಸೂರ್‌, ಹಲವು ಬಾರಿ ದುಬೈನ ವಿವಿಧ ಪ್ರದೇಶಗಳಿಗೆ ವಾಸ್ತವ್ಯ ಬದಲಿಸಿದ್ದ. ಪ್ರವಾಸಿ ವೀಸಾ ಪಡೆದು ದುಬೈಗೆ ಹಾರಿದ್ದ ಆರೋಪಿ, ಸವೀರ್‍ಸ್‌ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿದ್ದ. ಆರಂಭದಲ್ಲಿ ಬೇರೆ ರಾಷ್ಟ್ರಗಳಿಗೆ ಪರಾರಿಯಾಗಲು ಯತ್ನಿಸಿದ್ದ. ಆದರೆ, ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿರುವ ವಿಚಾರ ತಿಳಿದು ಬೇರೆ ದೇಶಕ್ಕೆ ಪರಾರಿಯಾಗುವ ಯತ್ನವನ್ನು ಕೈ ಬಿಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗೌಪ್ಯ ಕಾರ್ಯಾಚರಣೆಯ ಭಾಗವಾಗಿ ನಾಲ್ವರು ಅಧಿಕಾರಿಗಳು ಒಣಹಣ್ಣು ವ್ಯಾಪಾರಿಗಳ ಸೋಗಿನಲ್ಲಿ ದುಬೈಗೆ ಹೋಗಿದ್ದರು. ವ್ಯಾಪಾರಿಗಳ ಸೋಗಿನಲ್ಲೇ ದುಬೈನ ವಿವಿಧೆಡೆ ಇರುವ ಒಣ ಹಣ್ಣು ಮಾರಾಟ ಏಜೆನ್ಸಿಗಳ ಜೊತೆಗೆ ಸಂಪರ್ಕವನ್ನು ಸಾಧಿಸಿ ಮನ್ಸೂರ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

ಸ್ನೇಹಿತ ಮೊಹಮ್ಮದ್‌ ಅಬ್ದುಲ್ಲಾ ಎಂಬಾತ ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಮನ್ಸೂರ್‌ ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದರು. ನಂತರ ಆತನ ಓಡಾಟದ ಮೇಲೆ ನಿಗಾ ಇರಿಸಿದ್ದರು. ಆದರೆ, ಮನ್ಸೂರ್‌ ಬಹಿರಂಗವಾಗಿ ಕಾಣಿಸುತ್ತಿರಲಿಲ್ಲ. ಕೆಲವೊಮ್ಮೆ ಮಾತ್ರ ಅಪಾರ್ಟ್‌ಮೆಂಟ್‌ನಿಂದ ಹೊರ ಬಂದು ಸ್ನೇಹಿತರ ಕಾರಿನಲ್ಲಿ ಓಡಾಡುತ್ತಿದ್ದ.

ಸಂಪರ್ಕ ಸಾಧಿಸಿದರು

ವ್ಯಾಪಾರಿಗಳ ಸೋಗಿನಲ್ಲೇ ಸ್ಥಳೀಯರ ಮೂಲಕ ಮನ್ಸೂರ್‌ ಸ್ನೇಹಿತ ಅಬ್ದುಲ್ಲಾನ ಸಂಪರ್ಕ ಸಾಧಿಸಿದರು. ಹಲವು ಬಾರಿ ಮಾತುಕತೆಯ ಬಳಿಕ ಮನ್ಸೂರ್‌ ಖಾನ್‌ನನ್ನು ಭೇಟಿ ಮಾಡಿಸುವುದಾಗಿ ಅಬ್ದುಲ್ಲಾ ಒಪ್ಪಿಕೊಂಡಿದ್ದ.

ಪೊಲೀಸರೆಂದು ಅನುಮಾನ

ಅಂತಿಮವಾಗಿ ಇಬ್ಬರು ಅಧಿಕಾರಿಗಳು ಅಬ್ದುಲ್ಲಾನ ಅಪಾರ್ಟ್‌ಮೆಂಟ್‌ನಲ್ಲೇ ಮನ್ಸೂರ್‌ನನ್ನು ಭೇಟಿ ಮಾಡಿ ಮಾತನಾಡಿದರು. ಈ ವೇಳೆ ಅನುಮಾನಗೊಂಡ ಮನ್ಸೂರ್‌, ನೀವು ನಿಜಕ್ಕೂ ವ್ಯಾಪಾರಿಗಳೋ ಅಥವಾ ಭಾರತೀಯ ಪೊಲೀಸರೋ ಎಂದು ಪ್ರಶ್ನೆ ಮಾಡಿದ. ಕೊನೆಗೆ ಪೊಲೀಸರು ಎಂದು ಗೊತ್ತಾದಾಗ, ಭಾರತಕ್ಕೆ ಮರಳಲು ನಿರಾಕರಿಸಿದ. ನಂತರ ಆತನ ಮನವೊಲಿಸಿದ ಪೊಲೀಸರು, ನಿನ್ನ ಪಾಸ್‌ಪೋರ್ಟ್‌ ಅಮಾನತಾಗಿದೆ. ಎಲ್ಲಿಯು ಹೋಗಲಾಗದು ಎಂದು ಸ್ಪಷ್ಟವಾಗಿ ತಿಳಿಸಿದರು.

ವಲಸೆ ಅಧಿಕಾರಿಗಳ ಭೇಟಿ

ಮನ್ಸೂರ್‌ನನ್ನು ಭಾರತಕ್ಕೆ ಕರೆತರಲು ದುಬೈನಲ್ಲಿದ್ದ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದರು. ನಂತರ ಜು.13ರಂದು ಭಾರತದ ವಲಸೆ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ, ಅಮಾನತುಗೊಂಡಿರುವ ಮನ್ಸೂರ್‌ ಪಾಸ್‌ಪೋರ್ಟ್‌ ಅನ್ನು ತಾತ್ಕಾಲಿಕವಾಗಿ ತೆರವು ಮಾಡಿ ಭಾರತಕ್ಕೆ ಕರೆದೊಯ್ಯಲು ಕೋರಿದ್ದರು. ವಲಸೆ ಅಧಿಕಾರಿಗಳು ದಿಲ್ಲಿಯ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸಂಪರ್ಕ ಸಾಧಿಸಿದರು. ಕೊನೆಗೆ ಮನ್ಸೂರ್‌ ಪಾಸ್‌ಪೋರ್ಟ್‌ ಅಮಾನತು ತೆರವು ಮಾಡಿ, ಟಿಕೆಟ್‌ ವ್ಯವಸ್ಥೆ ಮಾಡಿ ದಿಲ್ಲಿಗೆ ಕಳುಹಿಸಲು ವಲಸೆ ಅಧಿಕಾರಿಗಳು ನಿರ್ಧರಿಸಿದರು.

ಮನ್ಸೂರ್‌ ದಿಲ್ಲಿಗೆ ಹೋಗುತ್ತಿದ್ದ ವಿಮಾನದಲ್ಲೇ ಎಸ್‌ಐಟಿ ಅಧಿಕಾರಿಗಳ ತಂಡ ಕೂಡ ದಿಲ್ಲಿಗೆ ವಾಪಸ್ಸಾಯಿತು. ವಿಮಾನ ಲ್ಯಾಂಡ್‌ ಆದ ಬಳಿಕ ಮನ್ಸೂರ್‌ ಖಾನ್‌ ಹೊರತುಪಡಿಸಿ ಬೇರೆ ಯಾರೂ ಮೊದಲೇ ಕೆಳಗೆ ಇಳಿಯಬಾರದು ಎಂದು ದಿಲ್ಲಿ ವಿಮಾನ ನಿಲ್ದಾಣದ ಎಟಿಸಿಯಿಂದ ಪೈಲಟ್‌ಗೆ ನಿರ್ದೇಶನ ಬಂದಿತ್ತು. ಅದರಂತೆ ವಿಮಾನ ನಿಂತಾಗ ಮನ್ಸೂರ್‌ ಖಾನ್‌ನನ್ನು ಕೆಳಗೆ ಇಳಿಸಲಾಯಿತು. ಸಿಐಎಸ್‌ಎಫ್‌ ಭದ್ರತೆಯಲ್ಲಿ ಪ್ರತ್ಯೇಕವಾಗಿ ಮನ್ಸೂರ್‌ನನ್ನು ಕರೆದೊಯ್ಯಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ