ಆ್ಯಪ್ನಗರ

ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ?

ಬಹುಕೋಟಿ ವಂಚನೆಯ ಆರೋಪಿ ಐಎಂಎ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ? ಯಾವ ದೇಶದಲ್ಲಿದ್ದಾನೆ ? ಎನ್ನುವುದೀಗ ಬೆಂಗಳೂರು ಪೊಲೀಸರ ಪಾಲಿಗೆ ಬಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಆತ ಬೇರೆ ಹೆಸರಿನಲ್ಲಿ ಮಾಡಿಸಿದ ನಕಲಿ ಪಾಸ್‌ಪೋರ್ಟ್‌ ಬಳಸಿ ಲಂಡನ್‌ಗೆ ಪರಾರಿಯಾಗಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

Vijaya Karnataka 13 Jun 2019, 5:00 am
ಬೆಂಗಳೂರು : ಬಹುಕೋಟಿ ವಂಚನೆಯ ಆರೋಪಿ ಐಎಂಎ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ? ಯಾವ ದೇಶದಲ್ಲಿದ್ದಾನೆ ? ಎನ್ನುವುದೀಗ ಬೆಂಗಳೂರು ಪೊಲೀಸರ ಪಾಲಿಗೆ ಬಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. ಆತ ಬೇರೆ ಹೆಸರಿನಲ್ಲಿ ಮಾಡಿಸಿದ ನಕಲಿ ಪಾಸ್‌ಪೋರ್ಟ್‌ ಬಳಸಿ ಲಂಡನ್‌ಗೆ ಪರಾರಿಯಾಗಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
Vijaya Karnataka Web ima owner mansoor escape to london
ಐಎಂಎ ಮಾಲೀಕ ಮನ್ಸೂರ್‌ ಖಾನ್‌ ಎಲ್ಲಿದ್ದಾನೆ ?


ಆತ ದೇಶ ಬಿಟ್ಟಿದ್ದಾನೆ ಎನ್ನುವುದನ್ನು ಮಾತ್ರ ಖಚಿತವಾಗಿ ಹೇಳುತ್ತಿರುವ ಅಧಿಕಾರಿಗಳಿಗೆ ಆತ ಹೇಗೆ ದೇಶ ಬಿಟ್ಟ? ಯಾವತ್ತು ಬಿಟ್ಟ ? ಯಾವ ದೇಶಕ್ಕೆ ಹೋಗಿದ್ದಾನೆ ? ಎನ್ನುವುದು ಮಾತ್ರ ಈ ಕ್ಷಣದವರೆಗೂ ಖಚಿತವಾಗಿ ಗೊತ್ತಿಲ್ಲ. ಹಲವು ಸುಳಿವುಗಳು ಇವೆಯಾದರೂ ಅದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕಾರ್ಯಾನ್ಮುಖರಾಗಿದ್ದಾರೆ. ಆಫ್ರಿಕಾದ ದೇಶಗಳು ಅಥವಾ ನೇಪಾಳದಿಂದ ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುವುದು ಬಹಳ ಸುಲಭ. ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡು ಬೇರೆ ರಾಜ್ಯದಿಂದ ದುಬೈ ವಿಮಾನ ಹತ್ತಿ, ದುಬೈ ಮೂಲಕ ಲಂಡನ್‌ಗೆ ಹೋಗಿದ್ದರೆ ಈತನನ್ನು ಹುಡುಕುವುದು ಸದ್ಯಕ್ಕೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು.

ಮನ್ಸೂರ್‌ ಖಾನ್‌ ಮೊದಲ ಆಡಿಯೊ ವೈರಲ್‌ ಆದ ತಕ್ಷಣ ಸಿಸಿಬಿ ಅಧಿಕಾರಿಗಳ ಒಂದು ತಂಡ ಈತನ ಜಾಡು ಹಿಡಿಯುವ ಕೆಲಸಕ್ಕೆ ಮುಂದಾಯಿತು. ಮೊದಲಿಗೆ ಏರ್‌ಪೋರ್ಟ್‌ನ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದರಾದರೂ ಆತ ಬೆಂಗಳೂರಿನಿಂದ ವಿದೇಶಕ್ಕೆ ಹಾರಿರುವ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ. ಮನ್ಸೂರ್‌ ಬಳಸುವ ಮಾಮೂಲು ಪಾಸ್‌ಪೋರ್ಟ್‌ ದಾಖಲೆಗಳನ್ನು ಪರಿಶೀಲಿಸಿದರೆ ಅದರಲ್ಲೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಇದುವರೆಗೂ ಮನ್ಸೂರ್‌ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ವಿದೇಶಿ ಪಾಸ್‌ಪೋರ್ಟ್‌

ಸೋಮವಾರ ಮನ್ಸೂರ್‌ನ ಆಡಿಯೊ ಬಹಿರಂಗಗೊಂಡ ವೇಳೆಯಲ್ಲಿ ಹಿರಿಯ ಅಧಿಕಾರಿಗಳೆಲ್ಲಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರ ನಿಧನದ ವಿಚಾರದಲ್ಲಿ ತೊಡಗಿಸಿಕೊಂಡಿದ್ದರು. ಸಂಜೆ ಆಗುತ್ತಿದ್ದಂತೆ ಮನ್ಸೂರ್‌ ನಗರ ಪೊಲೀಸ್‌ ಕಮಿಷನರ್‌ಗೆ ಕಳುಹಿಸಿದ್ದೆನ್ನಲಾದ ಆಡಿಯೊ ವೈರಲ್‌ ಆಗಿ ಸಾವಿರಾರು ಮಂದಿ ಶಿವಾಜಿನಗರದ ಕಚೇರಿ ಮುಂದೆ ಜಮಾಯಿಸಲು ಶುರು ಮಾಡಿದರು. ಆ ವೇಳೆಗೆ ಅಲರ್ಟ್‌ ಆಗಿದ್ದ ಅಧಿಕಾರಿಗಳು ಆಡಿಯೊದ ಮೂಲ ಹುಡುಕಿದಾಗ ಅದು ಮನ್ಸೂರ್‌ನ ನಂಬರಿನಿಂದಲೇ ಬಂದಿದ್ದಾಗಿತ್ತು. ಆದರೆ ಎಲ್ಲಿಂದ ಕಳುಹಿಸಿದ್ದು ಎನ್ನುವುದು ಮಾತ್ರ ಗೊತ್ತಾಗಿರಲಿಲ್ಲ. ಮೊದಲಿಗೆ ಬೆಂಗಳೂರಿನಲ್ಲೇ ಎಲ್ಲೋ ತಲೆಮರೆಸಿಕೊಂಡಿದ್ದಾನೆ ಎಂದೇ ಅಧಿಕಾರಿಗಳು ಭಾವಿಸಿದ್ದರು. ಬಳಿಕ ಈತನ ಇಬ್ಬರು ಪತ್ನಿಯರು ಮತ್ತು ಮಕ್ಕಳನ್ನು ಪತ್ತೆ ಹಚ್ಚಲು ಮುಂದಾದಾಗಲೇ ಈತ ಕುಟುಂಬ ಸಮೇತ ದೇಶ ಬಿಟ್ಟಿದ್ದಾನೆ ಎನ್ನುವುದು ಖಚಿತವಾಗಿದೆ. 6 ತಿಂಗಳಿನಿಂದಲೇ ದೇಶ ಬಿಡಲು ಸ್ಕೆಚ್‌ ಹಾಕಿದ್ದ ಈತ ತನ್ನ ಮಾಮೂಲು ಪಾಸ್‌ಪೋರ್ಟ್‌ ಬಳಸಿಲ್ಲ. ವಿದೇಶದಲ್ಲಿ ಮಾಡಿಸಿಕೊಂಡಿರುವ ಪಾಸ್‌ಪೋರ್ಟ್‌ ಮೂಲಕ ದೇಶ ತೊರೆದಿದ್ದಾನೆ ಎಂಬ ಅನುಮಾನಗಳು ಈತನ ಹತ್ತಿರದವರಿಂದ ವ್ಯಕ್ತವಾಗುತ್ತಿದೆ.

ದುಬೈಗೆ ಹೋಗಿಲ್ಲ

ಬಹುತೇಕ ಮಂದಿ ಈತ ದುಬೈಗೆ ಪರಾರಿ ಆಗಿದ್ದಾನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಪರಾಧ ವಿಭಾಗದ ಅಧಿಕಾರಿಗಳ ಪ್ರಕಾರ ಈ ಸಾಧ್ಯತೆ ಬಹಳ ಕಡಿಮೆ. ಏಕೆಂದರೆ ಮನ್ಸೂರ್‌ನ ಆಡಿಯೊ ಬಹಿರಂಗಗೊಂಡಿರುವುದು ವಾಟ್ಸ್‌ ಆ್ಯಪ್‌ ಮೂಲಕ. ಆತ ದೇಶ ತೊರೆದ ಬಳಿಕವೇ ವಾಟ್ಸ್‌ ಆ್ಯಪ್‌ ಮಾಡಿದ್ದಾನೆ. ಆದರೆ ದುಬೈನಲ್ಲಿ ವಾಟ್ಸ್‌ ಆ್ಯಪ್‌ ನಿಷೇಧವಿದೆ. ಅಲ್ಲದೆ ಮನ್ಸೂರ್‌ ವಿರುದ್ಧ ದುಬೈನಲ್ಲೂ ವಂಚನೆ ಪ್ರಕರಣ ದಾಖಲಾಗಿದೆ. ದುಬೈನ ಕಾನೂನು ಬಹಳ ಕಠಿಣ ಆಗಿರುವುದರಿಂದ ದುಬೈ ತನಗೆ ಸುರಕ್ಷತ ಅಲ್ಲ ಎನ್ನುವುದು ಮನ್ಸೂರ್‌ಗೆ ಚೆನ್ನಾಗಿ ಗೊತ್ತಿದೆ. ಎಲ್ಲಕ್ಕಿಂತ ದೊಡ್ಡ ಅಪಾಯವೆಂದರೆ ದುಬೈನಿಂದ ಭಾರತಕ್ಕೆ ಅಪರಾಧಿಗಳ ಹಸ್ತಾಂತರ ನೀರು ಕುಡಿದಷ್ಟೇ ಸುಲಭ. ಭಾರತಕ್ಕೆ ಬೇಕಾದ ಅಪರಾಧಿಯನ್ನು ದುಬೈನಿಂದ ಭಾರತಕ್ಕೆ ಕರೆಸಿಕೊಳ್ಳಲು ಇಲ್ಲಿನ ಅಧಿಕಾರಿಗಳು ಅಲ್ಲಿಗೆ ಹೋಗಲೇ ಬೇಕಿಲ್ಲ. ಇಂಟರ್‌ಪೋಲ್‌ ಅಧಿಕಾರಿಗಳ ಅಗತ್ಯ ಕೂಡ ಇಲ್ಲದೆ ಭಾರತದ ವಿದೇಶಾಂಗ ಇಲಾಖೆ ಮನಸ್ಸು ಮಾಡಿದರೆ ದುಬೈ ಪೊಲೀಸರು ಆರೋಪಿಯನ್ನು ಹಿಡಿದು ಭಾರತಕ್ಕೆ ಬರುವ ನೇರ ವಿಮಾನಕ್ಕೆ ಹತ್ತಿಸಿಬಿಡುತ್ತಾರೆ. ಹೀಗಾಗಿ ಆತನ ಬಂಧನ ಬಹಳ ಸುಲಭ. ಈ ಎಲ್ಲಾ ಕಾರಣಗಳಿಂದ ಈತ ದುಬೈಗೆ ಪರಾರಿ ಆಗಿರುವ ಸಾಧ್ಯತೆಗಳಿಲ್ಲ. ದುಬೈನಲ್ಲಿ ತನ್ನ ಸಂಬಂಧಿಗಳ ಹೆಸರಿನಲ್ಲಿ ಆಸ್ತಿ ಖರೀದಿಸಿರಬಹುದು. ಆದರೆ ಅಲ್ಲಿಗೆ ಹೋಗಿರಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಭಾರತೀಯ ವಂಚಕರ ಸ್ವರ್ಗ

ಮನ್ಸೂರ್‌ ಲಂಡನ್‌ಗೆ ಹೋಗಿರಬಹುದು ಎಂಬುದು ಈತನ ಹತ್ತಿರದ ಮಂದಿ ಅನುಮಾನ. ಭಾರತೀಯ ವಂಚಕರ ಪಾಲಿಗೆ ಲಂಡನ್‌ ಸ್ವರ್ಗ ಆಗಿದೆ. ಅಲ್ಲದೆ ಒಮ್ಮೆ ಅಲ್ಲಿಗೆ ಹೋದರೆ ಅವರನ್ನು ಭಾರತಕ್ಕೆ ವಾಪಸ್‌ ಕರೆಸಿಕೊಳ್ಳುವುದು ಬಹಳ ಕಷ್ಟ. ವಿಜಯ್‌ ಮಲ್ಯ, ನೀರವ್‌ ಮೋದಿ ಅವರಿಗೆಲ್ಲಾ ವರದಾನ ಆಗಿರುವುದು ಇದೇ. ದುಬೈನಿಂದ ಇದುವರೆಗೂ ನೂರಕ್ಕೂ ಅಧಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದಿರುವ ಇತಿಹಾಸ ಇದೆ. ಆದರೆ ಲಂಡನ್‌ನಿಂದ ಭಾರತಕ್ಕೆ ಬೇಕಾದ ಅಪರಾಧಿಗಳನ್ನು ಸುಲಭವಾಗಿ ಹಸ್ತಾಂತರ ಮಾಡಿಸಿಕೊಂಡಿರುವ ಉದಾಹರಣೆ ಇಲ್ಲವೇ ಇಲ್ಲ. ಮನ್ಸೂರ್‌ ಚಿನ್ನ ಮತ್ತು ವಜ್ರಗಳನ್ನು ಮೊದಲು ದುಬೈನಿಂದ ಖರೀದಿಸಿ ತರುತ್ತಿದ್ದ. ಅಲ್ಲಿ ವಂಚನೆ ಪ್ರಕರಣವೊಂದರಲ್ಲಿ ಈತನ ಮೇಲೆ ಕೇಸೊಂದು ದಾಖಲಾದ ನಂತರ ಲಂಡನ್‌ನಿಂದಲೇ ಹೆಚ್ಚು ವಜ್ರ ಮತ್ತು ಚಿನ್ನವನ್ನು ಖರೀದಿಸಿ ತರುತ್ತಿದ್ದ.


ರೆಡ್‌ ಕಾರ್ನರ್‌ ನೋಟಿಸ್‌ಗೆ ಸಿದ್ಧತೆ

ದೇಶ ತೊರೆದಿರುವ ಮನ್ಸೂರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಬೇಕೇ ? ಎನ್ನುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಇದೊಂದೇ ಪ್ರಕರಣದ ಮೇಲೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವುದು ಕಷ್ಟ. ಇದಕ್ಕಾಗಿ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ. ಒಮ್ಮೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿಬಿಟ್ಟರೆ ಮನ್ಸೂರ್‌ ದೇಶದಿಂದ ದೇಶಕ್ಕೆ ಹಾರಾಡುವುದಕ್ಕೆ ಕಷ್ಟ ಆಗುತ್ತದೆ. ಶುಕ್ರವಾರದವರೆಗೂ ಮನ್ಸೂರ್‌ ಪತ್ತೆ ಆಗದಿದ್ದರೆ ಆಗ ರೆಡ್‌ ಕಾರ್ನರ್‌ ನೋಟಿಸ್‌ ಹೊರ ಬೀಳುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ