ಆ್ಯಪ್ನಗರ

ಆಕ್ಸಿಜನ್‌ ಇಲ್ಲದೆ ಉದ್ಯಮಗಳ ಒದ್ದಾಟ, ಆಸ್ಪತ್ರೆಗಳಿಗೆ ಪ್ರಾಣವಾಯು ಪೂರೈಕೆ ಹೆಚ್ಚಳ, ಕೈಗಾರಿಕೆಗಳಿಗೆ ಭಾರಿ ಕೊರತೆ

ಶೇ. 95ರಷ್ಟು ದೊಡ್ಡ ಉದ್ಯಮಗಳು ಆಕ್ಸಿಜನ್‌ ಇಲ್ಲದೇ ನಲುಗಿ ಹೋಗಿದ್ದು, ಇದು ಸಹಜವಾಗಿ ಈ ಕ್ಷೇತ್ರವನ್ನು ನಂಬಿರುವ ಕಾರ್ಮಿಕರು, ಕಚ್ಚಾ ವಸ್ತು ಪೂರೈಕೆ, ಸಾರಿಗೆ ಸೇರಿದಂತೆ ಅನೇಕ ವಲಯಗಳ ಮೇಲೆ ದುಷ್ಪರಿಣಾಮ ಬೀರಿದೆ.

Vijaya Karnataka 30 Sep 2020, 10:31 pm
ಹುಬ್ಬಳ್ಳಿ/ಮಂಗಳೂರು: ಕೊರೊನಾದಿಂದ ಆಕ್ಸಿಜನ್‌ ಸಿಲಿಂಡರ್‌ಗಳೆಲ್ಲಾ ಆಸ್ಪತ್ರೆ ಪಾಲಾಗುತ್ತಿವೆ. ಇದರಿಂದ ಗ್ಯಾರೇಜ್‌, ಪೀಠೋಪಕರಣ, ಕಪಾಟು, ಅಲ್ಯುಮಿನಿಯಂ ಕೈಗಾರಿಕೆ, ಫ್ಯಾಬ್ರಿಕೇಶನ್‌, ರೂಫಿಂಗ್‌ ಘಟಕಗಳು ಪ್ರಾಣವಾಯುವಿಲ್ಲದೆ ಏದುಸಿರು ಬಿಡುತ್ತಿವೆ. ಆಕ್ಸಿಜನ್‌ ಸಿಲಿಂಡರ್‌ ಪೂರೈಸುವ ಏಜೆನ್ಸಿಗಳು ಆಕ್ಸಿಜನ್‌ ಸಿಲಿಂಡರ್‌ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಿಗೆ ಒದಗಿಸುವಂತೆ ಆದೇಶ ಹೊರಡಿಸಿರುವುದರಿಂದ ಈಗ ಪರದಾಟ ಶುರುವಾಗಿದೆ.
Vijaya Karnataka Web Oxygen


ಆಕ್ಸಿಜನ್‌ ವಿತರಣಾ ಘಟಕಗಳು ಶೇ. 90ಕ್ಕಿಂತ ಹೆಚ್ಚಿನ ಪ್ರಮಾಣದ ಆಮ್ಮಜನಕವನ್ನು ಆಸ್ಪತ್ರೆಗಳಿಗೆ ನೀಡುತ್ತಿವೆ. ಆಕ್ಸಿಜನ್‌ ಮೇಲೆ ಅವಲಂಬಿತವಾದ ಸ್ಟೀಲ್‌, ಶುಗರ್‌ ಹಾಗೂ ಹೈಡ್ರಾಲಿಕ್‌ ಮೆಷಿನ್‌ನಂತಹ ದೊಡ್ಡ ದೊಡ್ಡ ಇಂಡಸ್ಟ್ರಿಗಳು ಆಕ್ಸಿಜನ್‌ ಕೊರತೆ ಎದುರಿಸುತ್ತಿವೆ.

ಆಕ್ಸಿಜನ್‌ ಉತ್ಪಾದನೆ ಮಾಡುವ ತೋರಣಗಲ್‌ನ ಜಿಂದಾಲ್‌, ಕೊಪ್ಪಳದ ಕಲ್ಯಾಣಿ ಸ್ಟೀಲ್‌ ಫ್ಯಾಕ್ಟರಿಗಳನ್ನು ಬಿಟ್ಟರೆ ಉಳಿದ ಶೇ. 95ರಷ್ಟು ದೊಡ್ಡ ಉದ್ಯಮಗಳು ಆಕ್ಸಿಜನ್‌ ಇಲ್ಲದೇ ನಲುಗಿ ಹೋಗಿವೆ. ಇದು ಸಹಜವಾಗಿ ಈ ಕ್ಷೇತ್ರವನ್ನು ನಂಬಿರುವ ಕಾರ್ಮಿಕರು, ಕಚ್ಚಾ ವಸ್ತು ಪೂರೈಕೆ, ಸಾರಿಗೆ ಸೇರಿದಂತೆ ಅನೇಕ ವಲಯಗಳ ಮೇಲೆ ದುಷ್ಪರಿಣಾಮ ಬೀರಿದೆ.

ನಿತ್ಯ 1500 ಟನ್‌ ಉತ್ಪಾದನೆ

ರಾಜ್ಯದ ಎಂಟು ಆಕ್ಸಿಜನ್‌ ಕೇಂದ್ರಗಳಲ್ಲಿ ಸುಮಾರು 1200-1500 ಟನ್‌ ಲಿಕ್ವಿಡ್‌ ಆಕ್ಸಿಜನ್‌ ಉತ್ಪಾದನೆ ಆಗುತ್ತಿದೆ. ಕೋವಿಡ್‌ಗೂ ಮುನ್ನ ಒಟ್ಟು ಉತ್ಪಾದನೆಯ ಶೇ. 20-22ರಷ್ಟು ಆಸ್ಪತ್ರೆಗೆ ಬಳಕೆ ಆಗುತ್ತಿತ್ತು. ಉಳಿದ ಶೇ. 70-75ರಷ್ಟು ಕೈಗಾರಿಕೆಗಳಿಗೆ ಬಳಸಲಾಗುತ್ತಿತ್ತು. ಇದೀಗ ಶೇ. 90ರಷ್ಟು ಆಸ್ಪತ್ರೆಗಳಿಗೆ ಬಳಕೆಯಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಆಕ್ಸಿಜನ್‌ ಬೇಡಿಕೆ ಹೆಚ್ಚಾಗಿದೆ. ಆದರೆ, ಉತ್ಪಾದನೆ ಅಷ್ಟೇ ಇದೆ. ಹಾಗಾಗಿ ಮೊದಲು ಜೀವ ಉಳಿಸುವ ಕೆಲಸ ಮಾಡಬೇಕಿದೆ. ತದ ನಂತರದಲ್ಲಿ ಇಂಡಸ್ಟ್ರಿಗಳಿಗೆ ಪೂರೈಸಲಾಗುತ್ತಿದೆ. ಅದಕ್ಕಾಗಿಯೇ ಕೊರತೆ ಎದುರಾಗಿದೆ. ಉತ್ಪಾದನೆ ಹೆಚ್ಚಿಸಲು ನಿರ್ದೇಶನ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ನಾಲ್ಕು ಜನರಿಗೆ ವಾರದಿಂದ ಕೆಲಸವಿಲ್ಲ, ಸಿಲಿಂಡರ್‌ಗಾಗಿ ನಿತ್ಯ ಅಲೆವಂತಾಗಿದೆ ಎನ್ನುತ್ತಾರೆ ಕಟಪಾಡಿಯ ಬಿ. ಆರ್‌. ಸ್ಟೀಲ್ಸ್‌ನ ನವಾಬ್‌.

ಆಕ್ಸಿಜನ್‌ ಏಕೆ ಬೇಕು?

ಬೆಂಕಿಯ ಜ್ವಾಲೆ ಹೆಚ್ಚಿಸಲು, ಸ್ಟೀಲ್‌ ಕತ್ತರಿಸಲು ಮತ್ತು ವೆಲ್ಡಿಂಗ್‌ಗೆ ಆಕ್ಸಿಜನ್‌ ಅಗತ್ಯ

ರಸಾಯನಿಕ, ಔಷಧಗಳು, ಕಾಗದ ಹಾಗೂ ಪೆಟ್ರೋಲಿಯಂ ಪ್ರಕ್ರಿಯೆಯಲ್ಲಿ ಆಕ್ಸಿಜನ್‌ ಒಂದು ಕಚ್ಚಾವಸ್ತು

ದರ ಏರಿಕೆ

ಏಳು ಕ್ಯೂಬಿಕ್‌ ಮೀಟರಿನ ಸಿಲಿಂಡರಿಗಿದ್ದ 500 ರೂ. ದರ 600 ರೂ.ಗಳಿಗೇರಿದೆ. ಗುಜರಿ ಅಂಗಡಿಗಳಲ್ಲಿ ಸ್ಕ್ಯಾ‌ಪ್‌ ಕಟ್ಟಿಂಗಿಗೂ ಆಕ್ಸಿಜನ್‌ ಸಿಲಿಂಡರ್‌ ಅಗತ್ಯವಿದ್ದು ಉಡುಪಿ ಜಿಲ್ಲೆ ಮಾತ್ರವಲ್ಲ ರಾಜ್ಯದ ಸಾವಿರಾರು ಗ್ಯಾರೇಜು ಸಹಿತ ವೆಲ್ಡಿಂಗ್‌ ಶಾಪ್‌ಗಳಿಗೆ ಆಕ್ಸಿಜನ್‌ ಕೊರತೆ ಶಾಪವಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ