ಆ್ಯಪ್ನಗರ

ಮಹದಾಯಿ, ಕೃಷ್ಣಾ -2 ನ್ಯಾಯಾಧೀಕರಣ ತೀರ್ಪುಗಳ ಗೆಜೆಟ್‌: ರಾಜ್ಯಗಳ ಸಭೆಗೆ ಕೇಂದ್ರ ಆಸಕ್ತಿ

ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣ ತೀರ್ಪುಗಳ ಗೆಜೆಟ್‌ ಅಧಿಸೂಚನೆ ಹೊರಡಿಸುವ ಬಗ್ಗೆ ಶೀಘ್ರದಲ್ಲೇ ಸಂಬಂಧಿತ ರಾಜ್ಯಗಳ ಸಭೆ ಕರೆಯಲು ಕೇಂದ್ರ ...

Vijaya Karnataka 16 Jun 2019, 5:00 am
ಬೆಂಗಳೂರು: ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣ ತೀರ್ಪುಗಳ ಗೆಜೆಟ್‌ ಅಧಿಸೂಚನೆ ಹೊರಡಿಸುವ ಬಗ್ಗೆ ಶೀಘ್ರದಲ್ಲೇ ಸಂಬಂಧಿತ ರಾಜ್ಯಗಳ ಸಭೆ ಕರೆಯಲು ಕೇಂದ್ರ ಸರಕಾರ ಆಸಕ್ತಿ ತೋರಿದೆ.
Vijaya Karnataka Web 992e73b2-6976-42a3-aeb1-5e42927708c0


ದಿಲ್ಲಿಯಲ್ಲಿ ಶನಿವಾರ ಭೇಟಿ ಮಾಡಿದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಈ ಭರವಸೆ ನೀಡಿದ್ದಾರೆ.

ಅಂತಾರಾಜ್ಯ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧೀಕರಣ -2 ಅಂತಿಮ ತೀರ್ಪು ಪ್ರಕಟವಾದರೂ, ಗೆಜೆಟ್‌ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ರಾಜ್ಯಗಳು ತಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾಧೀಕರಣ ತೀರ್ಪಿಗೆ ಸಂಬಂಧಿಸಿದಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಕೃಷ್ಣಾ ನ್ಯಾಯಾಧೀಕರಣ -2 ತೀರ್ಪಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಭೆ ನಡೆಸಿ ಸಹಮತ ಪಡೆದು ಈ ತೀರ್ಪುಗಳ ಅಧಿಸೂಚನೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಸಿಎಂ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕಳಸಾ -ಬಂಡೂರಿ ನಾಲಾ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ನ್ಯಾಯಾಧೀಕರಣದ ತೀರ್ಪೀನ ಪ್ರಕಾರ ಮಹದಾಯಿ ನದಿಯಲ್ಲಿ ರಾಜ್ಯಕ್ಕೆ 13.2 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ತೀರ್ಪಿನ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದರೆ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ಸಿಎಂ ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟರು.

''ಕೃಷ್ಣಾ ನ್ಯಾಯಾಧೀಕರಣ -2 ರಾಜ್ಯಕ್ಕೆ ನೀರಾವರಿ ಮತ್ತು ಇತರ ಉದ್ದೇಶಗಳಿಗಾಗಿ ಒಟ್ಟು 166 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಈ ತೀರ್ಪು ಕೂಡ ಇನ್ನೂ ಅಧಿಸೂಚನೆ ಆಗಿಲ್ಲದ ಕಾರಣ ರಾಜ್ಯವು ತನ್ನ ಪಾಲಿನ ನೀರಿನ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ,''ಎಂದು ಸಿಎಂ ಮಾಹಿತಿ ನೀಡಿದರು.

ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಸಂಬಂಧಿತ ರಾಜ್ಯಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದವು. ಆದರೂ, ಕೋರ್ಟ್‌ ಅಂತಿಮ ತೀರ್ಪಿಗೆ ಒಳಪಡುವ ಷರತ್ತು ವಿಧಿಸಿ, ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ಹೊರಡಿಸಿತ್ತು. ಮಹದಾಯಿ ಮತ್ತು ಕೃಷ್ಣಾ ನ್ಯಾಯಾಧಿಕರಣಗಳ ನೀರು ಹಂಚಿಕೆ ತೀರ್ಪಿನ ವಿಚಾರದಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಶೆಖಾವತ್‌ ಅವರನ್ನು ಸಿಎಂ ಆಗ್ರಹಿಸಿದರು.

ಮೇಕೆದಾಟು ಅನುಮೋದನೆಗೆ ಮನವಿ

ಕಾವೇರಿ ನ್ಯಾಯಾಧೀಕರಣದ ತೀರ್ಪಿಗೆ ಬದ್ಧವಾಗಿ, ತನ್ನ ಪಾಲಿನ ನೀರಿನ ಸದ್ಭಳಕೆಗಾಗಿ ರಾಜ್ಯ ಸರಕಾರವು ಕೈಗೆತ್ತಿಕೊಳ್ಳುತ್ತಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರ ಸಚಿವರಿಗೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

ಮೇಕೆದಾಟು ಅಣೆಕಟ್ಟೆ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ರಾಜ್ಯವು ಕಳೆದ ಜನವರಿ 18 ರಂದು ಕೇಂದ್ರ ಸರಕಾರದ ಅನುಮೋದನೆಗಾಗಿ ಸಲ್ಲಿಸಿದೆ. 4.75 ಟಿಎಂಸಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಬಳಸುವ ಹಾಗೂ 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ತಮಿಳುನಾಡು ಸರಕಾರದ ಅಭಿಪ್ರಾಯ ಪಡೆಯುವ ಅಗತ್ಯವಿಲ್ಲ. ಆದ್ದರಿಂದ ಶೀಘ್ರ ಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ