ಆ್ಯಪ್ನಗರ

Karnataka Election 2023: ಯಶ ಕಾಣುವುದೇ ಬಿಜೆಪಿ ಚೆಕ್‌ಮೇಟ್‌ ತಂತ್ರ?

Karnataka Election 2023: ವರುಣ ಹಾಗೂ ಕನಕಪುರದಲ್ಲಿ ಬಿಜೆಪಿ ಸೋಲಿಲ್ಲದ ಸರದಾರರನ್ನು ಕಣಕ್ಕಿಳಿಸಿದರೂ ಕೂಡಾ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವೂ ಇದ್ದು, ಈ ಎರಡೂ ಕ್ಷೇತ್ರಗಳೂ ಭಿನ್ನವಾಗಿಯೂ ಇದೆ. ಈ ಕುರಿತ ವಿಶ್ಲೇಷನಾತ್ಮಕ ವರದಿ ಇಲ್ಲಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 14 Apr 2023, 4:08 pm

ಹೈಲೈಟ್ಸ್‌:

  • ಬಿಜೆಪಿ ಹೈಕಮಾಂಡ್‌ ತನ್ನ ತಂತ್ರಗಾರಿಕೆಯ ಭಾಗವಾಗಿ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿಸಚಿವ ಆರ್‌.ಅಶೋಕ್‌ ಅವರನ್ನು ಕಣಕ್ಕಳಿಸುತ್ತಿದೆ
  • ಈ ಬಾರಿ ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ವರುಣದಲ್ಲಿ ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಲಿದ್ದಾರೆ. ಮೈಸೂರು, ಚಾಮರಾಜನಗರ ಭಾಗದಲ್ಲಿಉತ್ತಮ ನೆಟ್‌ವರ್ಕ್ ಹೊಂದಿರುವ ಸೋಮಣ್ಣ ಅವರಿಗೆ ಇಲ್ಲಿನ ಮಠ ಮಾನ್ಯಗಳೊಂದಿಗೆ ಬಾಂಧವ್ಯವಿದೆ.
  • ಒಂದೇ ಮಾತಿನಲ್ಲಿ ಹೇಳುವುದಾದರೆ ಕನಕಪುರದ ಅಖಾಡದಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಗಿ ಹಿಡಿತವಿದೆ. ಜೆಡಿಎಸ್‌ಗೂ ಈ ಕೋಟೆಯ ಸನಿಹ ಹೋಗುವುದಕ್ಕೂ ಸಾಧ್ಯವಾಗಿಲ್ಲ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BJP Flag
ಬೆಂಗಳೂರು: ಬಿಜೆಪಿ ಹೈಕಮಾಂಡ್‌ ತನ್ನ ತಂತ್ರಗಾರಿಕೆಯ ಭಾಗವಾಗಿ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಸಚಿವ ಆರ್‌.ಅಶೋಕ್‌ ಅವರನ್ನು ಕಣಕ್ಕಳಿಸುತ್ತಿದೆ. ಈ ಭಾಗದಲ್ಲಿ ಬಿಜೆಪಿ ಈವರೆಗೆ ಗಂಭೀರ ಸ್ಪರ್ಧೆ ಮಾಡಿಲ್ಲ. ಈ ಬಾರಿ ಅಂಥದೊಂದು ರಣತಂತ್ರ ರೂಪಿಸಲಾಗಿದೆ. ಆದರೆ, ವರುಣ ಮತ್ತು ಕನಕಪುರದ ಅಖಾಡಗಳು ಭಿನ್ನ ನೆಲೆಯವಾಗಿವೆ.
ಹೋರಾಟಕ್ಕಿದೆ ಅವಕಾಶ
ಕ್ಷೇತ್ರ ಮರು ವಿಂಗಡಣೆ ಬಳಿಕ ಸಿದ್ದರಾಮಯ್ಯ ಅವರನ್ನು ಕೈಹಿಡಿದಿರುವ ಕ್ಷೇತ್ರ ವರುಣ. ಆದರೆ, ಪ್ರತಿ ಬಾರಿಯೂ ಸಿದ್ದರಾಮಯ್ಯ ಅವರಿಗೆ ರಾಜಕೀಯ ವಿರೋಧಿಗಳು ಸವಾಲೆಸೆದಿದ್ದಾರೆ. ಸಿದ್ದರಾಮಯ್ಯ ಪ್ರತಿಪಾದಿಸುವ ಅಹಿಂದ ರಾಜಕಾರಣಕ್ಕಿಂತ ಭಿನ್ನವಾದ ಕ್ಷೇತ್ರ ವರುಣ. ಇಲ್ಲಿಲಿಂಗಾಯತರು, ಒಕ್ಕಲಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಈ ನಡುವೆಯೂ ಸ್ಥಳೀಯರ ವಿಶ್ವಾಸ ಗಳಿಸಿರುವ ಸಿದ್ದರಾಮಯ್ಯ 2008 ಮತ್ತು 2013ರಲ್ಲಿ ಗೆದ್ದು ಬಂದಿದ್ದರು. 2018ರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಮಾನ ಉಳಿಸಿಕೊಳ್ಳಲಿ: ಸಿದ್ದರಾಮಯ್ಯ

ಈ ಬಾರಿ ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ವರುಣದಲ್ಲಿ ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಲಿದ್ದಾರೆ. ಮೈಸೂರು, ಚಾಮರಾಜನಗರ ಭಾಗದಲ್ಲಿಉತ್ತಮ ನೆಟ್‌ವರ್ಕ್ ಹೊಂದಿರುವ ಸೋಮಣ್ಣ ಅವರಿಗೆ ಇಲ್ಲಿನ ಮಠ ಮಾನ್ಯಗಳೊಂದಿಗೆ ಬಾಂಧವ್ಯವಿದೆ. ಜತೆಗೆ ಲಿಂಗಾಯತ ಸಮಾಜಕ್ಕೆ ಸೇರಿದ ಸೋಮಣ್ಣ ಇತರ ಸಮುದಾಯಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿಸೋಮಣ್ಣ ಮೈಚಳಿ ಬಿಟ್ಟು ವರುಣಾದ ಅಖಾಡಕ್ಕೆ ಇಳಿದರೆ ಸಿದ್ದರಾಮಯ್ಯ ಅವರಿಗೆ ಪೈಪೋಟಿ ಉಂಟಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಸ್ವಕ್ಷೇತ್ರದಲ್ಲೇ ಕಟ್ಟಿ ಹಾಕಿ ಅವರು ಬೇರೆಡೆ ಪ್ರಚಾರಕ್ಕೆ ಹೋಗುವುದನ್ನು ತಡೆಯಬೇಕು ಎನ್ನುವುದು ಬಿಜೆಪಿ ಹೈಕಮಾಂಡ್‌ನ ತಂತ್ರ. ಅದಕ್ಕೆ ತಕ್ಕಂತೆ ರಣಕಣ ರಂಗೇರಿದರೆ ಖಂಡಿತವಾಗಿಯೂ 2006ರಲ್ಲಿಚಾಮುಂಡೇಶ್ವರಿ ಕ್ಷೇತ್ರದಲ್ಲಿನಡೆದ ಉಪ ಚುನಾವಣೆಯಂತೆ ನೇರಾನೇರ ಫೈಟ್‌ ನಡೆಯುವ ಸಾಧ್ಯತೆ ಇರುತ್ತದೆ.

ಅಶೋಕ್‌ಗೆ ಭಾರಿ ಸವಾಲು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೂ ಕ್ಷೇತ್ರ ಮರು ವಿಂಗಡಣೆ ಬಳಿಕ ಕನಕಪುರ ಕ್ಷೇತ್ರವನ್ನು ಕಬ್ಜ ಮಾಡಿಕೊಂಡವರು. ಹೋರಾಟ ಮತ್ತು ಛಲಕ್ಕೆ ಹೆಸರಾದ ಶಿವಕುಮಾರ್‌ ಸಾತನೂರು ಕ್ಷೇತ್ರದಲ್ಲಿ ರಾಜಕೀಯ ಭವಿಷ್ಯ ಕಂಡುಕೊಂಡವರು. ಶಿವಕುಮಾರ್‌ ಪ್ರವರ್ಧಮಾನಕ್ಕೆ ಬಂದ ಮೇಲೆ ಸಾತನೂರಿನಲ್ಲಿ ನಡೆದ ಚುನಾವಣೆಗಳು ಏಕಪಕ್ಷೀಯವಾಗಿದ್ದವು. ಮರು ವಿಂಗಡಣೆಯ ನಂತರ ಕನಕಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಅವರು, ಇಲ್ಲಿಯೂ ಭರ್ಜರಿ ಇನ್ನಿಂಗ್ಸ್‌ ಮುಂದುವರಿಸಿದ್ದಾರೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಕನಕಪುರದ ಅಖಾಡದಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಗಿ ಹಿಡಿತವಿದೆ. ಜೆಡಿಎಸ್‌ಗೂ ಈ ಕೋಟೆಯ ಸನಿಹ ಹೋಗುವುದಕ್ಕೂ ಸಾಧ್ಯವಾಗಿಲ್ಲ. ಇಂತಿರುವ ಕನಕಪುರದಲ್ಲಿ ಬಿಜೆಪಿಯಿಂದ ಸಚಿವ ಆರ್‌.ಅಶೋಕ್‌ ಈಗ ಪ್ರತಿಸ್ಪರ್ಧಿ. ಕನಕಪುರ ಕ್ಷೇತ್ರ ಒಕ್ಕಲಿಗ ಸಮಾಜದ ಬಾಹುಳ್ಯ ಇರುವ ಪ್ರದೇಶ. ಶಿವಕುಮಾರ್‌ ಮತ್ತು ಅಶೋಕ್‌ ಇಬ್ಬರೂ ಇದೇ ಸಮುದಾಯಕ್ಕೆ ಸೇರಿದವರು. ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ನೆಲೆ ವಿಸ್ತರಿಸುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್‌ ಪ್ರಯೋಗಾತ್ಮಕವಾಗಿ ಶಿವಕುಮಾರ್‌ ಕ್ಷೇತ್ರದಲ್ಲಿತನ್ನ ಪ್ರಭಾವಿ ಸಚಿವರನ್ನು ಪಣಕ್ಕಿಟ್ಟಿದೆ.

ಕನಕಪುರದಲ್ಲಿ ಬಿಜೆಪಿ ಸಂಘಟನೆ ಅಷ್ಟಕ್ಕಷ್ಟೇ. ಹಾಗಾಗಿ ಅಶೋಕ್‌ ಸ್ವಂತ ವರ್ಚಸ್ಸಿನ ಮೂಲಕ ಇಲ್ಲಿನ ಮತದಾರರ ಮನ ಗೆಲ್ಲುವ ಸವಾಲಿಗೆ ಮುಖ ಮಾಡಬೇಕಿದೆ. ಈ ನಿಟ್ಟಿನಲ್ಲಿಅಶೋಕ್‌ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದ್ದಾರೆ ಎಂಬ ಕುತೂಹಲವಿದೆ.

ಬಿಜೆಪಿಗೆ ರಿವರ್ಸ್‌ ಚೆಕ್‌ಮೇಟ್‌ ಇನ್ನೂ ಚಾಲ್ತಿಯಲ್ಲಿದೆ ಡಿಕೆಶಿ ಚಿಂತನೆ
ಕನಕಪುರದಲ್ಲಿತಮ್ಮ ವಿರುದ್ಧ ಸಚಿವ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಿ ಚೆಕ್‌ಮೇಟ್‌ ನೀಡುವ ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಪದ್ಮನಾಭನಗರದಲ್ಲಿ'ರಿವರ್ಸ್‌ ಚೆಕ್‌ಮೇಟ್‌' ನೀಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಚಿಂತನೆ ಇನ್ನೂ ಚಾಲ್ತಿಯಲ್ಲಿದೆ.

BJP Ticket: ಸಿದ್ದು ವಿರುದ್ಧ ಸೋಮಣ್ಣ ಸ್ಪರ್ಧೆ! ಡಿಕೆಶಿಗೆ ಅಶೋಕ್ ಸಡ್ಡು! ರಂಗೇರಲಿದೆ ಎಲೆಕ್ಷನ್ ಅಖಾಡ
ಮಾಜಿ ಡಿಸಿಎಂ ಅಶೋಕ್‌ ಅವರನ್ನು ತಮ್ಮ ವಿರುದ್ಧ ಕಣಕ್ಕಿಳಿಸಿ ಸವಾಲು ಹಾಕಿರುವ ಬಿಜೆಪಿಗೆ ಪ್ರತಿ ಸವಾಲು ಹಾಕಲು ಬಯಸಿರುವ ಡಿ.ಕೆ.ಶಿವಕುಮಾರ್‌, ಪದ್ಮನಾಭನಗರದಲ್ಲಿ ತಾವು ಅಥವಾ ತಮ್ಮ ಸಹೋದರ ಡಿ.ಕೆ. ಸುರೇಶ್‌ ಅವರನ್ನು ಕಣಕ್ಕಿಳಿಸಿ ಸಾಮರ್ಥ್ಯ ಪ್ರದರ್ಶಿಸುವ ಇರಾದೆಯಲ್ಲಿದ್ದಾರೆ.

ಪಕ್ಷದ ಅಭ್ಯರ್ಥಿಗಳಿಗೆ ಶಿವಕುಮಾರ್‌ ಗುರುವಾರ ಬಿ ಫಾರಂ ವಿತರಣೆ ಆರಂಭಿಸಿದರು. ಈ ವೇಳೆ ಪದ್ಮನಾಭನಗರದ ಘೋಷಿತ ಅಭ್ಯರ್ಥಿ ರಘುನಾಥ ನಾಯ್ಡು ಸಹ ಬಿ ಫಾರಂ ಪಡೆದುಕೊಂಡರು. ಆದರೆ, ಡಿಕೆಶಿ ಸಹೋದರರು ಯಾವ ಕ್ಷಣದಲ್ಲಿ ಬಯಸಿದರೂ ಕ್ಷೇತ್ರ ತ್ಯಾಗಕ್ಕೆ ಸಿದ್ಧವಿರುವುದಾಗಿ ರಘುನಾಥ ನಾಯ್ಡು ಹೇಳಿದ್ದಾರೆ.

''ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಕಾಂಗ್ರೆಸ್‌ ಪಾಲಿಗೆ ಆಸ್ತಿ. ಅವರು ಯಾವ ಕ್ಷಣದಲ್ಲಿಬಯಸಿದರೂ ಕ್ಷೇತ್ರ ಬಿಟ್ಟುಕೊಡುವುದು ಮಾತ್ರವಲ್ಲ, 70 ಸಾವಿರ ಲೀಡ್‌ನಲ್ಲಿ ಗೆಲ್ಲಿಸಿಕೊಡುತ್ತೇನೆ. ಅಶೋಕ್‌ ಎರಡೂ ಕಡೆ ಸೋಲಲಿದ್ದು ಕನಕಪುರದಲ್ಲಿ 3ನೇ ಸ್ಥಾನಕ್ಕೆ ಹೋಗುತ್ತಾರೆ,'' ಎಂದು ನಾಯ್ಡು ತಿಳಿಸಿದರು.

ಸ್ಪರ್ಧೆ ಚಿಂತನೆ ಜೀವಂತ:
ಬಿಜೆಪಿ ಸವಾಲಿಗೆ ಪ್ರತಿ ಸವಾಲು ಹಾಕಲು ಕನಕಪುರದ ಜತೆಗೆ ಪದ್ಮನಾಭನಗರದಲ್ಲೂತಾವು ಅಥವಾ ಸಹೋದರ ಸುರೇಶ್‌ ಸ್ಪರ್ಧೆಗೆ ಡಿ.ಕೆ.ಶಿವಕುಮಾರ್‌ ಆಪ್ತರ ಸಮ್ಮುಖದಲ್ಲಿಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಸದ್ಯಕ್ಕೆ ಅದರ ಅಗತ್ಯವಿಲ್ಲಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಆದರೂ, ಪರಿಸ್ಥಿತಿ ಆಧರಿಸಿ ರಿವರ್ಸ್‌ ಚೆಕ್‌ಮೇಟ್‌ಗೆ ಡಿಕೆಶಿ ಸೋದರರು ಸಿದ್ಧರಿದ್ದಾರೆ ಎನ್ನಲಾಗಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ