ಆ್ಯಪ್ನಗರ

ಸಿಎಂ ಲೆಕ್ಕಪತ್ರ ಪರಿಶೋಧಕರ ಕಚೇರಿಯಲ್ಲಿ ಐಟಿ ಪರಿಶೀಲನೆ

ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರ ಹಣಕಾಸು ಲೆಕ್ಕ ನಿರ್ವಹಿಸುವ ಲೆಕ್ಕ ಪರಿಶೋಧಕ (ಸಿ.ಎ) ಎಚ್‌.ಬಿ ಸುನೀಲ್‌ ಅವರ ಕಚೇರಿ ಮತ್ತು ಮನೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ.

Vijaya Karnataka 24 Aug 2018, 9:21 am
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರ ಹಣಕಾಸು ಲೆಕ್ಕ ನಿರ್ವಹಿಸುವ ಲೆಕ್ಕ ಪರಿಶೋಧಕ (ಸಿ.ಎ) ಎಚ್‌.ಬಿ ಸುನೀಲ್‌ ಅವರ ಕಚೇರಿ ಮತ್ತು ಮನೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ.
Vijaya Karnataka Web Kumaraswamy 1


ಕುಮಾರಕೃಪಾದಲ್ಲಿರುವ ಎಚ್‌.ಬಿ ಸುನೀಲ್‌ ಆ್ಯಂಡ್‌ ಕೋ. ಚಾರ್ಟರ್ಡ್‌ ಅಕೌಂಟೆಂಟ್‌ ಕಚೇರಿ ಮತ್ತು ಪ್ಯಾಲೆಸ್‌ ಗುಟ್ಟಹಳ್ಳಿಯಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆದಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುನೀಲ್‌ ಅವರ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಮಂಗಳವಾರ ಮತ್ತು ಬುಧವಾರ (ಆ.21, 22) ಮತ್ತೆ ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ.

ಸಿಎಂ ಕುಮಾರಸ್ವಾಮಿ ಅವರ ಖಾಸಗಿ ಹೂಡಿಕೆ, ವ್ಯವಹಾರ ಜತೆಗೆ ಖಾಸಗಿ ವಾಹಿನಿ ನಡೆಸುತ್ತಿರುವ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್‌ ಅವರ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಸುನೀಲ್‌, ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ಅತ್ಯಂತ ನಂಬಿಕಸ್ಥರಾಗಿದ್ದಾರೆಂದು ತಿಳಿದು ಬಂದಿದೆ. 2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು 36 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.

ಐಟಿ ಇಲಾಖೆಯ ನಿಗಾದಲ್ಲಿ ಸುನೀಲ್‌ ಅವರು ಈ ಹಿಂದೆಯೂ ಇದ್ದರು. ಪ್ರಕರಣದಲ್ಲಿ ಸಿಎಂ ಅವರ ಆಪ್ತ ಸಹಾಯಕರ ವಿಚಾರಣೆ ನಡೆಸಬೇಕಿದೆ ಎಂದು ಐಟಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಕಳೆದ ವರ್ಷ ಸಚಿವ ಡಿ.ಕೆ ಶಿವಕುಮಾರ್‌ ಹಾಗೂ ಅವರ ಆಪ್ತರು, ಕುಟುಂಬ ಸದಸ್ಯರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಚಿವರಾದ ಕೆ.ಜೆ ಜಾರ್ಜ್‌, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಎಂ.ಬಿ ಪಾಟೀಲ, ಎಚ್‌.ಸಿ ಮಹೇದವಪ್ಪ ಅವರಿಗೆ ಸೇರಿದ ಸ್ಥಳಗಳಲ್ಲಿ ಕೂಡಾ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಯಾವ ಕಾರಣಕ್ಕಾಗಿ ಪರಿಶೀಲನೆ


ಪರಿಶೀಲನೆ ಕುರಿತು ಐಟಿ ಇಲಾಖೆಯನ್ನು ಕೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದೇ ವೇಳೆ ಸುನೀಲ್‌ ಅವರ ಕಚೇರಿಗೆ ಕರೆ ಮಾಡಿದಾಗ, ಮಾತನಾಡಿದ ಮಹಿಳಾ ಸಿಬ್ಬಂದಿಯೊಬ್ಬರು, ‘ಆ ರೀತಿ ಏನೂ ಆಗಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು. ಯಾವ ಕಾರಣಕ್ಕಾಗಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ