ಆ್ಯಪ್ನಗರ

ಎಲೆಕ್ಷನ್‌ ಕಾಸು ಐಟಿ ಬಲೆಗೆ

ಸರಕಾರಿ ಅಧಿಕಾರಿ ಮನೆ, ಹೋಟೆಲ್‌ ರೂಮಲ್ಲಿ 2.25 ಕೋಟಿ ಪತ್ತೆ ಗುತ್ತಿಗೆದಾರರಿಂದ ಸಂಗ್ರಹಿಸಿದ ಹಣ? ಕಾಂಗ್ರೆಸ್‌ಗೆ ಸೇರಿದ್ದು ಎಂದ ಬಿಜೆಪಿ

Vijaya Karnataka 16 Mar 2019, 5:00 am
Vijaya Karnataka Web BNG-HVR-15 HAVERI 6A
ವಿಕ ಸುದ್ದಿಲೋಕ ಬೆಂಗಳೂರು/ಹಾವೇರಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಆಗಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಆರಂಭದಲ್ಲೇ ಭರ್ಜರಿ ಬೇಟೆಯಾಡಿದ್ದಾರೆ. ಬೆಂಗಳೂರು ಮತ್ತು ಹಾವೇರಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರಿಗೆ ಸೇರಿದ ಮನೆ, ಹೊಟೇಲ್‌ ಕೊಠಡಿಗಳ ಮೇಲೆ ದಾಳಿ ನಡೆಸಿ 2.25 ಕೋಟಿ ರೂ. ಪತ್ತೆ ಮಾಡಿದ್ದಾರೆ. ಇದು ಕಾಂಗ್ರೆಸ್‌ಗೆ ಸೇರಿದ ಹಣ ಎಂದು ಬಿಜೆಪಿ ಆಪಾದಿಸಿದೆ.
ಹಾವೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ರಾಜೀವ್‌ ಗಾಂಧಿ ಗ್ರಾಮೀಣ ಕುಡಿಯುವ ನೀರು ಯೋಜನೆ' ಇಲಾಖೆಯ ಲೆಕ್ಕಪತ್ರ ಸಹಾಯಕ ಎನ್‌.ಬಿ. ಪಾಟೀಲ್‌ ಎಂಬುವರ ಮನೆ ಹಾಗೂ ಬೆಂಗಳೂರಿನ ಆನಂದರಾವ್‌ ವೃತ್ತದ ಬಳಿಯ ಹೋಟೆಲ್‌ ಕೊಠಡಿಯಲ್ಲಿ ಶೋಧ ಕಾರ್ಯ ನಡೆದಿದೆ. ಹೋಟೆಲ್‌ನಲ್ಲಿ ಎನ್‌.ಬಿ.ಪಾಟೀಲ್‌ ಹೆಸರಿನಲ್ಲಿ ಬುಕ್‌ ಮಾಡಿದ ಮೂರು ಕೊಠಡಿಯಲ್ಲಿ 2 ಕೋಟಿ ರೂ. ಪತ್ತೆಯಾಗಿದೆ. ಹಾವೇರಿಯ ನಂದಿನಿ ಲೇಔಟ್‌ನಲ್ಲಿರುವ ಎನ್‌.ಬಿ. ಪಾಟೀಲ್‌ ಬಾಡಿಗೆ ಮನೆಯಲ್ಲಿ 25 ಲಕ್ಷ ರೂ.ಗೂ ಅಧಿಕ ನಗದು ಜತೆಗೆ ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಧಾರವಾಡದ ಸ್ವಂತ ಮನೆಯಲ್ಲೂ ಶೋಧ ನಡೆಯುವ ಸಾಧ್ಯತೆ ಇದೆ. ಸ್ಥಳೀಯ ಚುನಾವಣಾಧಿಕಾರಿ ಸಂಯೋಜನೆಯಲ್ಲಿ ಈ ದಾಳಿ ನಡೆದಿದೆ. ಈ ಕುರಿತು ಐಟಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ.

ದಾಳಿ ತಿಳಿದು ಪರಾರಿ?

ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಲೆಕ್ಕಪತ್ರ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಎನ್‌.ಬಿ ಪಾಟೀಲ್‌, ಕಳೆದ ಎರಡು ವರ್ಷಗಳಿಂದ ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆಗೆ ನಿಯೋಜನೆಗೊಂಡಿದ್ದಾರೆ. ದಾಳಿ ವೇಳೆ ಪಾಟೀಲ್‌ ಅವರು ಹೊಟೇಲ್‌ನಲ್ಲಿ ಇರಲಿಲ್ಲ. ದಾಳಿ ಮಾಹಿತಿ ಗೊತ್ತಾಗಿ ಪರಾರಿಯಾದರು ಎಂದು ಹೇಳಲಾಗಿದೆ. ಅವರ ಖಾಸಗಿ ಕಾರು ಚಾಲಕನನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಾಹುಲ್‌ಗೆ ಹಣ: ಬಿಎಸ್‌ವೈ
''ಪ್ರಧಾನಿ ಮೋದಿಯವರು ಹಿಂದಿನ ಕಾಂಗ್ರೆಸ್‌ ಸರಕಾರವನ್ನು 10 ಪರ್ಸೆಂಟ್‌ ಸರಕಾರವೆಂದು ಹೇಳಿದ್ದರು. ಆದರೆ ಈಗಿನ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ 20 ಪರ್ಸೆಂಟ್‌ ಸರಕಾರವಾಗಿದೆ ಎಂಬುದಕ್ಕೆ ಹಣ ವಸೂಲಿ ದಂಧೆಯೇ ಸಾಕ್ಷಿ. ಚುನಾವಣೆಗಾಗಿ ರಾಹುಲ್‌ ಗಾಂಧಿಗೆ ಕೊಡಲು ಈ ಹಣ ಸಂಗ್ರಹಿಸಲಾಗಿತ್ತು. ಈ ಬಗ್ಗೆ ತನಿಖೆ ಆಗಬೇಕು,'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಸಚಿವರ ವಿಚಾರಣೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ