ಆ್ಯಪ್ನಗರ

ಪಾಲಿಶ್‌ ಅಕ್ಕಿ ಬಳಕೆಯಿಂದ ನವಜಾತ ಶಿಶುಗಳಲ್ಲಿ ಬಿ-1 ಕೊರತೆ, ಹೃದಯ ಸಮಸ್ಯೆಗೆ ದಾರಿ - ಜಯದೇವ ಅಧ್ಯಯನ ವರದಿ

'ಎದೆಹಾಲು ಉಣಿಸುವ ತಾಯಂದಿರು ಪಾಲಿಶ್‌ ಅಕ್ಕಿಯನ್ನೇ ಹೆಚ್ಚಾಗಿ ಸೇವಿಸುವುದರಿಂದ ವಿಟಮಿನ್‌ ಬಿ1 ಕೊರತೆ ಉಂಟಾಗಿ ಮಕ್ಕಳಲ್ಲಿ ಹೃದಯ ವೈಫಲ್ಯವಾಗುವ ಸಾಧ್ಯತೆ ಇದೆ' ಎಂದು ಜಯದೇವ ಹೃದ್ರೋಗ ಸಂಸ್ಥೆ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ.

Vijaya Karnataka 15 Sep 2020, 8:43 pm
ಬೆಂಗಳೂರು: ಗರ್ಭಿಣಿ ಮತ್ತು ಬಾಣಂತಿಯರು ಹೆಚ್ಚಾಗಿ ಪಾಲಿಶ್‌ ಅಕ್ಕಿಯ ಸೇವನೆ ಮಾಡುವುದರಿಂದ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ 'ಹೃದಯ ವೈಫಲ್ಯ' ಸಮಸ್ಯೆ ತಡೆಗಟ್ಟಲು 'ವಿಟಮಿನ್‌ ಬಿ-1' ಕೊರತೆ ನೀಗಿಸುವ ಮಾತ್ರೆಗಳನ್ನು ನೀಡಬೇಕು ಎಂದು ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ ಸಲಹೆ ನೀಡಿದ್ದಾರೆ.
Vijaya Karnataka Web Newborn feeding
ಸಾಂದರ್ಭಿಕ ಚಿತ್ರ


"ಆರು ವರ್ಷಗಳ ಅವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ದಾಖಲಾಗಿದ್ದ 250 ಶಿಶುಗಳ ಆರೋಗ್ಯ ಪರೀಕ್ಷೆ ಮತ್ತು ಚಿಕಿತ್ಸೆಯ ಅಧ್ಯಯನದ ವೇಳೆ ಪಾಲಿಶ್‌ ಅಕ್ಕಿ ಸೇವಿಸುತ್ತಿದ್ದ ಬಾಣಂತಿಯರಲ್ಲಿ ಬಿ-1 ಕೊರತೆ ಕಂಡು ಬಂದಿದೆ. ಮಕ್ಕಳಿಗೆ ವಿಟಮಿನ್‌ ಬಿ-1 ಚಿಕಿತ್ಸೆ ನೀಡುತ್ತಿದ್ದಂತೆಯೇ ಮಕ್ಕಳು ಚೇತರಿಸಿಕೊಂಡಿದ್ದಾರೆ," ಎಂದು ಅವರು ವಿವರಿಸಿದ್ದಾರೆ.

ಆರು ತಿಂಗಳೊಳಗಿನ ಮಕ್ಕಳಿಗೆ ತಾಯಿ ಎದೆಹಾಲು ಬಹಳ ಮುಖ್ಯ. ಅದಕ್ಕಾಗಿ ಮಕ್ಕಳ ತಾಯಂದಿರ ಆಹಾರ ಪದ್ಧತಿಯೂ ಅಷ್ಟೇ ಮುಖ್ಯ. ಆಹಾರ ಪೌಷ್ಠಿಕಾಂಶಗಳಿಂದ ಕೂಡಿರಬೇಕು. ಆದರೆ, ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅನ್ನವು ಬಹುಮುಖ್ಯ ಆಹಾರವಾಗಿ ಬಳಕೆಯಾಗುತ್ತದೆ. ಅದರಲ್ಲೂ ನಯಗೊಳಿಸಿದ (ಪಾಲಿಶ್‌) ಅಕ್ಕಿ ಹೆಚ್ಚಿನ ಬಳಕೆಯಲ್ಲಿದೆ. ಪಾಲಿಶ್‌ ಅಕ್ಕಿಯನ್ನೇ ಹೆಚ್ಚಾಗಿ ಸೇವಿಸುವ ಎದೆಹಾಲು ಉಣಿಸುವ ತಾಯಂದಿರ ಮಕ್ಕಳಿಗೆ ಹೃದಯ ವೈಫಲ್ಯವಾಗುವ ಸಾಧ್ಯತೆ ಇರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

2013ರಿಂದ 2019ರ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳೊಳಗಿನ 250 ಮಕ್ಕಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಈ ಮಕ್ಕಳಲ್ಲಿ ಉಸಿರಾಟದ ತೊಂದರೆ, ಸರಿಯಾಗಿ ಹಾಲು ಕುಡಿಯದಿರುವುದು, ಗಂಟಲು ಧ್ವನಿ ಕೀರಲಾಗಿರುವುದು ಮುಂತಾದ ಲಕ್ಷಣಗಳು ಕಂಡು ಬಂದಿದ್ದವು. ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಬಲ ಹೃದಯ ಮತ್ತು ಶ್ವಾಸಕೋಶದ ರಕ್ತನಾಳದಲ್ಲಿ ರಕ್ತದ ಒತ್ತಡ ಹೆಚ್ಚಾಗಿರುವುದು ಕಂಡು ಬಂದಿದೆ.

ಬಿ-1 ಕೊರತೆ ಸಂಶಯ

"ಅಧ್ಯಯನದಲ್ಲಿ ಕಂಡು ಬಂದ ಅಂಶಗಳನ್ನು ಆಧರಿಸಿ ಮಕ್ಕಳಿಗೆ ಬಿ-1 ಕೊರತೆಯಾಗಿರಬಹುದೆಂಬ ಸಂಶಯದ ಮೇಲೆ ಪರೀಕ್ಷಿಸಿದಾಗ ಅದು ದೃಢವಾಗಿತ್ತು. ಆ ಮಕ್ಕಳಿಗೆ ಬಿ-1 ಚಿಕಿತ್ಸೆ ಒದಗಿಸಿದಾಗ 24 ತಾಸುಗಳಲ್ಲೇ ಗುಣಮುಖರಾದರು. 250 ಮಕ್ಕಳ ಪೈಕಿ 230 ಮಕ್ಕಳ ಆರೋಗ್ಯ ಸ್ಥಿತಿ ಸಹಜವಾಯಿತು," ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ ತಿಳಿಸಿದ್ದಾರೆ.

ಜಯದೇವ ಆಸ್ಪತ್ರೆಯ ಅಧ್ಯಯನವು ಯುರೋಪ್‌ನ ಪ್ರತಿಷ್ಠಿತ 'ಆರ್ಕೈವ್ಸ್‌ ಆಫ್‌ ಡಿಸೀಸಸ್‌ ಇನ್‌ ಚೈಲ್ಡ್‌ವುಡ್‌' ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಮಕ್ಕಳ ಹೃದ್ರೋಗ ತಜ್ಞರಾದ ಡಾ.ಎಂ.ಕೆ. ಉಷಾ, ಡಾ. ಜಯ ರಂಗನಾಥ್‌ ಹಾಗೂ ತಂಡ ಸಂಶೋಧನೆಯ ಲೇಖಕರಾಗಿದ್ದಾರೆ.

ಬಿ-1 ಕೊರತೆಗೆ ಕಾರಣ

"ವಿಟಮಿನ್‌ ಬಿ-1 ಜೀವಸತ್ವವು ಅಕ್ಕಿಯ ಮೇಲ್ಪದರದಲ್ಲಿ ಇರುತ್ತದೆ. ಅದನ್ನು ಅತಿಯಾಗಿ ಪಾಲಿಶ್‌ ಮಾಡಿದಾಗ ಹೊರಟು ಹೋಗುತ್ತದೆ. ಅಂತಹ ಅಕ್ಕಿಯನ್ನು ಸೇವಿಸುವ ತಾಯಂದಿರ ಎದೆ ಹಾಲು ಅವಲಂಬಿತ ಮಕ್ಕಳಿಗೆ ಹೃದಯ ಸಮಸ್ಯೆ ಎದುರಾಗುತ್ತದೆ. ಗರ್ಭಿಣಿಯರು ಮತ್ತು ಬಾಣಂತಿಯರು ಪಾಲಿಶ್‌ ಅಕ್ಕಿ ಸೇವನೆ ಕಡಿಮೆ ಮಾಡಿ ಕುಸುಲಕ್ಕಿ (ಕುಚ್ಚಲಕ್ಕಿ), ಕೆಂಪು ಅಕ್ಕಿ ಸೇವಿಸುವುದು ಸೂಕ್ತ. ಪಾಲಿಶ್‌ ಅಕ್ಕಿ ಸೇವಿಸಿದರೂ ಅದರ ಜತೆಗೆ ಹಾಲು, ತರಕಾರಿ ಮತ್ತು ವಿಟಮಿನ್‌ ಬಿ-1 ಮಾತ್ರೆಗಳನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಂಡರೆ ಹುಟ್ಟುವ ಮಕ್ಕಳು ಮತ್ತು ಎದೆಹಾಲು ಕುಡಿಯುವ ಮಕ್ಕಳ ಆರೋಗ್ಯಕ್ಕೆ ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಆಗುತ್ತದೆ," ಎಂದು ಡಾ. ಮಂಜುನಾಥ್‌ ತಿಳಿಸಿದರು.

ಪಾಲಿಶ್‌ ಅಕ್ಕಿಯ ಅನ್ನ ಸೇವಿಸುವ ಗರ್ಭಿಣಿ, ಬಾಣಂತಿಯರು ಹಣ್ಣು, ತರಕಾರಿ, ಹಾಲು ಸೇವಿಸಬೇಕು. ಬಿ-1 ಕೊರತೆಯಾಗದಿರಲು ವಿಟಮಿನ್‌ ಬಿ-1 ಒಳಗೊಂಡಿರುವ 'ಬಿ ಕಾಂಪ್ಲೆಕ್ಸ್'‌ ಮಾತ್ರೆ ಸೇವನೆ ಉತ್ತಮವಾದುದು.
- ಡಾ.ಸಿ.ಎನ್.‌ ಮಂಜುನಾಥ್‌, ನಿರ್ದೇಶಕರು, ಜಯದೇವ ಆಸ್ಪತ್ರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ