ಆ್ಯಪ್ನಗರ

ಬರಕ್ಕೆ ಭಿಕ್ಷೆ ನೀಡಿದ ಕೇಂದ್ರ ಸರಕಾರ

ಬರ ನಿರ್ವಹಣೆಗೆ ನೆರೆಯ ಮಹಾರಾಷ್ಟ್ರಕ್ಕೆ 4,800 ಕೋಟಿ ರೂ...

Vijaya Karnataka 31 Jan 2019, 5:00 am
ಬೆಂಗಳೂರು: ಬರ ನಿರ್ವಹಣೆಗೆ ನೆರೆಯ ಮಹಾರಾಷ್ಟ್ರಕ್ಕೆ 4,800 ಕೋಟಿ ರೂ. ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಕರ್ನಾಟಕಕ್ಕೆ ಭಿಕ್ಷೆಯ ರೂಪದಲ್ಲಿ ಕೇವಲ 940 ಕೋಟಿ ರೂ. ಮಂಜೂರು ಮಾಡಿ ಪಕ್ಷಪಾತ ಮಾಡಿದೆ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web 3001-2-2-151 (9)


ನಗರದ ಅರಮನೆ ಮೈದಾನದಲ್ಲಿ ಬುಧವಾರ ಜೆಡಿಎಸ್‌ ರಾಷ್ಟ್ರೀಯ ಮಹಾಧಿವೇಶನ ಉದ್ದೇಶಿಸಿ ಮಾತನಾಡಿದ ಅವರು ''ರಾಜ್ಯ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದೆ. ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ 2,600 ಕೋಟಿ ರೂ. ಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರಕಾರ ರಾಜ್ಯದ ನ್ಯಾಯಯುತ ಬೇಡಿಕೆಯನ್ನು ಅಲಕ್ಷಿಸಿ ಭಿಕ್ಷೆ ಎಂಬಂತೆ 940 ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರಕ್ಕೆ 4,800 ಕೋಟಿ ರೂ. ಬರಪೂರ ಅನುದಾನ ಕೊಡಲಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ನ 8 ರಿಂದ 10 ಸಂಸದರು ಸಂಸತ್‌ ಪ್ರವೇಶಿಸುವಂತಾದರೆ ರಾಜ್ಯಕ್ಕೆ ಈ ರೀತಿ ಅನ್ಯಾಯವಾಗಲು ಅವಕಾಶ ಇರುವುದಿಲ್ಲ. ಕೇಂದ್ರದಲ್ಲಿ ಯಾರೇ ಸರಕಾರ ಮಾಡಿದರೂ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ'' ಎಂದು ಹೇಳಿದರು.

ಢೋಂಗಿ ರಾಜಕಾರಣಿ

''ಬರ ಅಧ್ಯಯನ ಮಾಡುತ್ತೇವೆ ಎಂದು ಹೊರಟಿರುವ ಬಿ.ಎಸ್‌.ಯಡಿಯೂರಪ್ಪ ಅವರು ಕತ್ತೆ ಕಾಯುತ್ತಿದ್ದೀರಾ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಢೋಂಗಿ ರಾಜಕಾರಣ ಮಾಡುವ ಬದಲು ಬಿಜೆಪಿಗೆ 17 ಸಂಸದರನ್ನು ಗೆಲ್ಲಿಸಿಕೊಟ್ಟಿರುವ ಕರ್ನಾಟಕಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡದಂತೆ ತಾಕತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಿ. ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ನಾನಿದ್ದೇನೆ'' ಎಂದು ಸಿಎಂ ಹರಿಹಾಯ್ದರು.

ಸಮಾವೇಶ ಸರಣಿ

''ಜೆಡಿಎಸ್‌ ಯಾವುದೇ ಜಾತಿ, ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತಿದೆ. ಫೆಬ್ರವರಿ 10 ರಂದು ವಿಜಯಪುರದಲ್ಲಿ ಪರಿಶಿಷ್ಟರ ಬೃಹತ್‌ ಸಮಾವೇಶ ನಡೆಸಲಾಗುತ್ತಿದ್ದು, ಫೆಬ್ರವರಿ ಅಂತ್ಯದೊಳಗೆ ಹುಬ್ಬಳ್ಳಿಯಲ್ಲಿ ರೈತರ ದೊಡ್ಡ ಪ್ರಮಾಣದ ಸಮಾವೇಶ ನಡೆಸಲಾಗುವುದು'' ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರಕಟಿಸಿದರು.

ಮೂರು ನಿರ್ಣಯ

ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಸೇರಿ 3 ನಿರ್ಣಯಗಳನ್ನು ಜೆಡಿಎಸ್‌ ರಾಷ್ಟ್ರೀಯ ಕಾರ‍್ಯಕಾರಿಣಿ ಅಂಗೀಕರಿಸಿತು.


* ಕೇಂದ್ರದಲ್ಲಿ ಮತ್ತೆ ಸಮ್ಮಿಶ್ರ ಸರಕಾರದ ಶಕೆ ಆರಂಭವಾಗುವ ಸೂಚನೆಯಿದೆ. ದೇಶದ ಜಾತ್ಯತೀತ ವ್ಯವಸ್ಥೆ ಉಳಿಸಿಕೊಳ್ಳಲು ಪ್ರಾಂತೀಯ ಪಕ್ಷಗಳಿಗೆ ಬಲತುಂಬಬೇಕಿದೆ. ಜೆಡಿಎಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸ್ಥಾನಗಳು ಸಿಗುವುದು ನಿಶ್ಚಿತ.

-ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

* ದೇಶದ ಜಾತ್ಯತೀತ ವ್ಯವಸ್ಥೆ ಉಳಿಸಿಕೊಂಡು ಹೋಗಲು ದೇವೇಗೌಡರ ನಾಯಕತ್ವದ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ದೇವೇಗೌಡರು ಖಂಡಿತ ಯಶಸ್ವಿಯಾಗುತ್ತಾರೆ.

-ಡ್ಯಾನೀಶ್‌ ಅಲಿ, ಜೆಡಿಎಸ್‌ ರಾಷ್ಟ್ರೀಯ ಮಹಾ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ